ಹುಚ್ಚ ವೆಂಕಟ್ಗೆ ದಯವಿಟ್ಟು ಹೊಡೆಯಬೇಡಿ: ದುನಿಯಾ ವಿಜಯ್ ಕಳಕಳಿಯ ಮನವಿ
ನಟ, ನಿರ್ದೇಶಕ 'ಹುಚ್ಚ' ವೆಂಕಟ್ ಮೇಲೆ ಇತ್ತೀಚೆಗೆ ಹಲ್ಲೆಗಳು ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೆಲವರು ಮಾನವೀಯತೆಯಿಂದ ಅವರಿಗೆ ಆಹಾರ ಮತ್ತು ಹಣ ನೀಡಿದ್ದರೆ ಇನ್ನು ಕೆಲವು ಯುವಕರು ಮನಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ಅನೇಕರಲ್ಲಿ ಬೇಸರ ತಂದಿದೆ.
ವೆಂಕಟ್ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎನ್ನುವುದು ತಿಳಿದೂ ಕೆಲವರು ಅವರನ್ನು ಉದ್ರೇಕಿಸುವ ಕಾರ್ಯ ಮಾಡುತ್ತಿದ್ದಾರೆ. ಕೆಲವರು ಸೆಲ್ಫಿಗಾಗಿ ಅವರೊಂದಿಗೆ ತಮಾಷೆ ಮಾಡುತ್ತಿದ್ದಾರೆ. ಈ ಚಟುವಟಿಕೆ ಬಗ್ಗೆ ಆಕ್ರೋಶ ಕೂಡ ವ್ಯಕ್ತವಾಗಿದೆ. ಸಾಧ್ಯವಾದರೆ ಅವರಿಗೆ ಸಹಾಯ ಮಾಡಿ. ಅವರು ಸಮಸ್ಯೆಯ ಬಗ್ಗೆ ಗೊತ್ತಿದ್ದೂ, ಮೃಗೀಯವಾಗಿ ವರ್ತಿಸಿ ಹಲ್ಲೆ ಮಾಡಿ ಅದರ ವಿಡಿಯೋ ಹಾಕಬೇಡಿ. ಇದು ಮನುಜರ ಲಕ್ಷಣವಲ್ಲ ಎಂದು ನಟ ಜಗ್ಗೇಶ್ ಹೇಳಿದ್ದರು. ಈಗ ಮತ್ತೊಬ್ಬ ನಟ ದುನಿಯಾ ವಿಜಯ್ ಈ ಘಟನೆ ಬಗ್ಗೆ ದನಿ ಎತ್ತಿದ್ದಾರೆ. ಅವರು ಹೇಳಿರುವುದೇನು? ಮುಂದೆ ಓದಿ...

ಮಾನವೀಯತೆಯ ದೃಷ್ಟಿಯಿಂದ...
ಹುಚ್ಚ ವೆಂಕಟ್ ಅವರಿಗೆ ಬೀದಿಯಲ್ಲಿ ಹೊಡೆಯುವ ವಿಡಿಯೋಗಳು ಕಳೆದ ಎರಡು ದಿನಗಳಿಂದ ವೈರಲ್ ಆಗಿವೆ. 'ಹುಚ್ಚ' ಎಂದು ಸ್ವತಃ ಹೇಳಿಕೊಂಡು ಚಿತ್ರರಂಗಕ್ಕೆ ಪ್ರವೇಶಿಸಿದರೂ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕಾಣಿಸಿಕೊಂಡ ಚಿತ್ರಗಳ ಮೂಲಕ ನಾನು ವೃತ್ತಿಯಲ್ಲಿರುವ ಇಂಡಸ್ಟ್ರಿಯಲ್ಲೇ ಗುರುತಿಸಿಕೊಂಡ ವ್ಯಕ್ತಿ ಎನ್ನುವ ಕಾರಣಕ್ಕಾಗಿ ಹಾಗು ಮಾನವೀಯತೆಯ ದೃಷ್ಟಿಯಿಂದ ಮಾಧ್ಯಮಗಳಲ್ಲಿ ಒಂದು ಮನವಿ ಮಾಡುತ್ತಿದ್ದೇನೆ.

ನಟನಾಗಿ ಗುರುತಿಸುವ ಬದಲು...
ಈ ವಿಚಾರದಲ್ಲಿ ಮಾಧ್ಯಮಗಳಲ್ಲಿ ವಿನಂತಿಸಲು ಕಾರಣ ಒಂದೇ. ಆತನನ್ನು ಇಂದು ರಾಜ್ಯದ ಜನತೆ ನಟನಾಗಿ ಗುರುತಿಸುವುದಕ್ಕಿಂತ ಹೆಚ್ಚು ಮಾಧ್ಯಮಗಳಲ್ಲಿನ ಚರ್ಚೆಗಳ ಮೂಲಕ ಗುರುತಿಸಿದ್ದಾರೆ. ಆದರೆ ಇಂದು ಆತನಿಗೆ ಹೊಡೆದು ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡಲಾಗುತ್ತಿದೆ.

ಅವರಿಗೆ ಅಗತ್ಯವಿರುವುದು ಚಿಕಿತ್ಸೆ
ಇದುವರೆಗೆ ಆತನ ವರ್ತನೆಯನ್ನು ಕಂಡಿರುವ ನಮಗೆ ಮತ್ತು ವೈದ್ಯರು ಕೂಡ ಈಗಾಗಲೇ ನೀಡಿರುವ ಹೇಳಿಕೆಗಳ ಪ್ರಕಾರ ಹುಚ್ಚ ವೆಂಕಟ್ ಅವರಿಗೆ ಚಿಕಿತ್ಸೆಯ ಅಗತ್ಯ ಇದೆಯೇ ಹೊರತು, ಹೊಸ ಚರ್ಚೆ, ಮಾತುಕತೆ, ಹೊಡೆದಾಟಗಳಲ್ಲ. ಇದನ್ನು ಚೆನ್ನಾಗಿ ಅರಿಯಬಲ್ಲ ಮಾಧ್ಯಮಗಳೇ ಈ ಬಾರಿ ಕೂಡ ಆತನಿಗೆ ದಯಮಾಡಿ ಸಹಾಯ ಮಾಡಿ. ಆತನ ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯಿಂದ ಜಾರಿಕೊಳ್ಳದ ಹಾಗೆ ಕಾಳಜಿ ವಹಿಸಿ ಎಂದು ನನ್ನ ಮನವಿ.

ಮಾನವೀಯತೆಯಲ್ಲ
ಇದೇ ಸಂದರ್ಭದಲ್ಲಿ ಆತನಿಗೆ ಹಲ್ಲೆಗೈದು ವಿಡಿಯೋ ಮಾಡುವವರಲ್ಲಿ ಕೂಡ ಒಂದು ಮನವಿ. ಬದುಕು ಯಾರ ಕೈಯಲ್ಲಿಯೂ ಇಲ್ಲ. ಇಂದು ಒಬ್ಬ ರಾಜ ಭಿಕ್ಷೆ ಬೇಡಬಹುದು. ಅದೇ ಭಿಕ್ಷುಕ ನಾಳೆ ರಾಜನಾಗಬಹುದು. ನಾವು ಅವರ ಪರಿಸ್ಥಿತಿಯನ್ನು ವ್ಯಂಗ್ಯ ಮಾಡುವುದು ಮಾನವೀಯತೆಯಲ್ಲ. ಹಾಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಯಲ್ಲಿ ದಯವಿಟ್ಟು ಯಾರೂ ಹಲ್ಲೆ ಮಾಡಬೇಡಿ ಎಂದು ಕಳಕಳಿಯಿಂದ ವಿನಂತಿಸುತ್ತೇನೆ ಎಂದು ವಿಜಯ್ ಹೇಳಿದ್ದಾರೆ.


Click it and Unblock the Notifications











