ಖ್ಯಾತ ಸಾಹಿತಿ ಚಿ. ಉದಯಶಂಕರ್ ಪತ್ನಿ ಶಾರದಮ್ಮ ನಿಧನ
ಕನ್ನಡ ಚಿತ್ರರಂಗ ಕಂಡ ಮಹಾನ್ ಚಿತ್ರಸಾಹಿತಿಗಳಲ್ಲಿ ಒಬ್ಬರಾದ ದಿವಂಗತ ಚಿ. ಉದಯಶಂಕರ್ ಅವರ ಪತ್ನಿ ಶಾರದಮ್ಮ (74) ಗುರುವಾರ ನಿಧನರಾದರು.
ಬೆಂಗಳೂರಿನ ಯಶವಂತಪುರದ ಇಸ್ಕಾನ್ ದೇವಸ್ಥಾನ ಸಮೀಪದ ಅಪಾರ್ಟ್ಮೆಂಟ್ ಒಂದರಲ್ಲಿ ಅವರು ಮಗ ಚಿ. ಗುರುದತ್ ಅವರೊಂದಿಗೆ ವಾಸಿಸುತ್ತಿದ್ದವರು. ಬುಧವಾರ ರಾತ್ರಿ ಮಲಗಿದ್ದ ಅವರು ನಸುಕಿನ 3.30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಶಾರದಮ್ಮ ಅವರಿಗೆ ಚಿತ್ರನಟ, ನಿರ್ದೇಶಕ ಚಿ. ಗುರುದತ್ ಸೇರಿದಂತೆ ಇಬ್ಬರು ಗಂಡುಮಕ್ಕಳು ಮತ್ತು ಒಬ್ಬ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಹರಿಶ್ಚಂದ್ರ ಘಾಟ್ನಲ್ಲಿ ವಿಧಿ ವಿಧಾನಗಳೊಂದಿಗೆ ನೆರವೇರಿತು.

1964ರಲ್ಲಿ ಮದುವೆ
ಶಾರದಮ್ಮ ಮತ್ತು ಚಿ. ಉದಯಶಂಕರ್ ಅವರ ವಿವಾಹ 1964ರ ಜೂನ್ 5ರಂದು ನಡೆದಿತ್ತು. ತಮ್ಮ ಅಮೂಲ್ಯ ಸಾಹಿತ್ಯ ಮತ್ತು ಸಂಭಾಷಣೆಗಳಿಂದ ಮನೆ ಮಾತಾಗಿದ್ದ ಉದಯಶಂಕರ್ ಅವರು 1993ರಲ್ಲಿಯೇ ಮೃತಪಟ್ಟಿದ್ದರು. ಅವರ ಹಿರಿಯ ಮಗ ರವಿಶಂಕರ್ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು.

ಮಕ್ಕಳಿಗೆ ಬದುಕು ಕಟ್ಟಿಕೊಟ್ಟ ಶ್ರಮಜೀವಿ
ಉದಯಶಂಕರ್ ಅವರ ನಿಧನದ ಬಳಿಕವೂ ತಮ್ಮ ಮಕ್ಕಳಿಗೆ ಉತ್ತಮ ಬದುಕು ಕಟ್ಟಿಕೊಡುವಲ್ಲಿ ಶಾರದಮ್ಮ ಬಹಳ ಶ್ರಮಿಸಿದ್ದರು. ಅವರ ಎರಡನೆಯ ಮಗ ಗುರುದತ್, ನಟರಾಗಿ ಮತ್ತು ನಿರ್ದೇಶಕರಾಗಿ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಮಗಳ ಅನುಪಸ್ಥಿತಿಯಲ್ಲಿ ಅಂತ್ಯಕ್ರಿಯೆ
ಶಾರದಮ್ಮ-ಉದಯಶಂಕರ್ ದಂಪತಿಯ ಮಗಳು ಶ್ಯಾಮಲಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಲಾಕ್ಡೌನ್ ಕಾರಣದಿಂದ ಅವರು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿಯೇ ಶಾರದಮ್ಮ ಅವರ ಅಂತ್ಯಸಂಸ್ಕಾರ ನಡೆಸಲಾಗಿದೆ.

ಮದ್ರಾಸ್ನಿಂದ ಬೆಂಗಳೂರಿಗೆ
ಹೊಳೆನರಸೀಪುರದ ಚಿಟ್ನಳ್ಳಿ ಗ್ರಾಮದವರಾದ ಉದಯಶಂಕರ್, ಡಾ. ರಾಜ್ಕುಮಾರ್ ಕುಟುಂಬಕ್ಕೆ ಬಹಳ ಆಪ್ತರಾಗಿದ್ದರು. ಮದುವೆಯ ನಂತರ ಅನೇಕ ವರ್ಷ ಮದ್ರಾಸ್ನಲ್ಲಿ ನೆಲೆಯೂರಿದ್ದ ಕುಟುಂಬ, 80ರ ದಶಕದಲ್ಲಿ ಬೆಂಗಳೂರಿಗೆ ಬಂದು ನೆಲೆಗೊಂಡಿತ್ತು.
ನಿರ್ದೇಶಕ ರಘುರಾಂ ಸಂತಾಪ
ಆಗಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಮದ್ರಾಸ್ ನಲ್ಲಿ ಬೀಡು ಬಿಟ್ಟಾಗ ಸಾಕಷ್ಟು ಜನ ಕಲಾವಿದರು ತಂತ್ರಜ್ಞರಿಗೆ ಅನ್ನ ಹಾಕಿದ ಕೈ, ಕನ್ನಡದ ಜ್ಞಾನ ಪದಗಳ ಲೋಕದ ‘ಶ್ರೀಮಂತ'ಸಿನಿಮಾ ಸಾಹಿತ್ಯ ಲೋಕದ ಧೀಮಂತ ಚಿ ಉದಯಶಂಕರ್ ಅವರ ಧರ್ಮಪತ್ನಿ ನಟ ನಿರ್ದೇಶಕ ಚಿಗುರುದತ್ ಅವರ ತಾಯಿ ಶ್ರೀಮತಿ ಶಾರದಾ ಉದಯಶಂಕರ್ ಅವರು ಇಂದು ನಮ್ಮನ ಅಗಲಿದ್ದಾರೆ.ಓಂ ಶಾಂತಿ- ರಘುರಾಂ


Click it and Unblock the Notifications











