ಕನ್ನಡ ಚಿತ್ರರಸಿಕರಿಗೆ ಪಂಚಭಕ್ಷ್ಯ ಪರಮಾನ್ನ!

ಕನ್ನಡ ಚಿತ್ರರಂಗದ ಪಾಲಿಗಿಂದು ಶುಭ ಶುಕ್ರವಾರ, ದಾಖಲೆಯ ಐದು ಚಿತ್ರಗಳು ಇಂದು ಬಿಡುಗಡೆಯಾಗುತ್ತಿದೆ. ವಾರಕ್ಕೆ ಎರಡು ಚಿತ್ರಗಳು ಬಿಡುಗಡೆಯಾದರೆ ಗೊಂದಲಕ್ಕೆ ಈಡಾಗುವ ಪ್ರೇಕ್ಷಕ ಇನ್ನು ಐದು ಚಿತ್ರ ರಿಲೀಸ್ ಆದರೆ ಇನ್ನೇನಾಗಬೇಡ? ಗೊಂದಲವಿರಲಿ, ಯಾವುದು ಹೋಗಲಿ ಯಾವುದು ಬಿಡಲಿ ಎಂದುಕೊಂಡ ಪ್ರೇಕ್ಷಕ ಕೊನೆಗೆ ಯಾವುದಕ್ಕೂ ಹೋಗದಿದ್ದರೆ ಐದೂ ಗೋತಾ ಹೊಡೆದಿರುತ್ತವೆ.
ಹೋದ ವಾರ 'ಡ್ರಾಮಾ' ಮತ್ತು 'ಎದೆಗಾರಿಕೆ' ಚಿತ್ರಗಳು ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದವು. ಈ ವಾರ ಇನ್ನೊಂದು ಐದು ಚಿತ್ರಗಳು ಬಿಡುಗಡೆಯಾಗಿ ಆ ಎರಡು ಚಿತ್ರಗಳಿಗೆ ಸಹಜವಾಗಿ ಥಿಯೇಟರ್ ಸಮಸ್ಯೆ ಎದುರಾಗುವಂತಾಗಿದೆ. ಇದರ ಮಧ್ಯೆ ಆಮೀರ್ ಖಾನ್ ಅಭಿನಯದ 'ತಲಾಶ್' ಚಿತ್ರ ಬೇರೆ ಬಿಡುಗಡೆಯಾಗಿದೆ.
ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಪಟ್ಟಿ ಇಂತಿದೆ:
1. ಹೊಸ ಪ್ರೇಮ ಪುರಾಣ: ಶಿವಕುಮಾರ್ ನಿರ್ದೇಶಿಸಿ, ಪ್ರಸಾದ್ ಸಾಲುಮರ ನಿರ್ಮಿಸುತ್ತಿರುವ ಚಿತ್ರ. ನಿತಿನ್ ನಾಯಕನಾಗಿರುವ ಚಿತ್ರಕ್ಕೆ ಶ್ರದ್ದಾ ದಾಸ್, ಪೂಜಾ ಗಾಂಧಿ ಮತ್ತು ರಾಧಿಕಾ ಗಾಂಧಿ ನಾಯಕಿಯರು. ರಾಜೇಶ್ ರಾಮನಾಥ್ ಚಿತ್ರದ ಸಂಗೀತ ನಿರ್ದೇಶಕರು.
2. ಒಲವಿನ ಓಲೆ : ಟೇಶಿ ಫಿಲಂಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಟೇಶಿ ವೆಂಕಟೇಶ್ ನಿರ್ದೇಶಕರು. ಸಂತೋಷ್ ಮತ್ತು ನೇಹಾ ಪಾಟೀಲ್ ಪ್ರಮುಖ ಭೂಮಿಕೆಯಲ್ಲಿರುವ ಚಿತ್ರಕ್ಕೆ ಯಶೋವರ್ಧನ್ ಸಂಗೀತ ನೀಡಿದ್ದಾರೆ. ಮಮತಾ ವೆಂಕಟೇಶ್ ಚಿತ್ರದ ನಿರ್ಮಾಪಕರು.
3. ಆಶಾ ಕಿರಣಗಳು: ಜಿ ವಿ ರಾಮರಾವ್ ಚಿತ್ರಕಥೆ ನೀಡಿ ನಿರ್ದೇಶಿಸಿದ ಈ ಚಿತ್ರಕ್ಕೆ ಡಿ ಲಕ್ಷ್ಮಣ್ ನಾಯಕ್ ನಿರ್ಮಾಪಕರು. ದುನಿಯಾ ರಶ್ಮಿ, ಜಗದೀಶ್, ಜಯಲಕ್ಷ್ಮಿ ಪ್ರಮುಖ ಭೂಮಿಕೆಯಲ್ಲಿರುವ ಚಿತ್ರಕ್ಕೆ ಸಾಯಿ ಗುರುನಾಥ್ ಸಂಗೀತ ನೀಡಿದ್ದಾರೆ.
4. ಸಂಸಾರದಲ್ಲಿ ಗೋಲ್ ಮಾಲ್ : ತೆಲುಗು 'ಆದಿವಾರಂ ಅಡವಾಲಕ್ಕು ಸೆಲವು 2007 ' ಚಿತ್ರದ ಕನ್ನಡ ಅವತರಿಣಿಕೆ. ಪ್ರಭಾಕರ್ ರೆಡ್ಡಿ ನಿರ್ಮಿಸುತ್ತಿರುವ ಚಿತ್ರಕ್ಕೆ ಓಂ ಸಾಯಿ ಪ್ರಕಾಶ್ ನಿರ್ದೇಶಕರು. ಉಮಾಶ್ರೀ - ರಾಜು ತಾಳಿಕೋಟೆ, ತಾರಾ - ಸಿಹಿಕಹಿ ಚಂದ್ರ, ಲಕ್ಷ್ಮೀ ಭಾಗವತರ್ - ತಬಲಾ ನಾಣಿ, ನಯನ ಕೃಷ್ಣಾ - ಸಾಧು ಕೋಕಿಲಾ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ.
5. ಚೌಡೇಶ್ವರಿ ದೇವಿ ಮಹಿಮೆ : ಸರೋಜಾ ರಾಮಣ್ಣ ನಿರ್ಮಿಸುತ್ತಿರುವ ಚಿತ್ರವನ್ನು ಮ.ರಾಮಣ್ಣ ಕಥೆ, ಚಿತ್ರಕಥೆ ಹಣೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪಾತ್ರವರ್ಗದಲ್ಲಿ ಭವ್ಯಶ್ರೀ ರೈ, ಶೋಭಾರಾಜ್, ರೇಖಾ, ಗಿರೀಶ್ ಕುಮಾರ್, ನವ್ಯಾ, ಮುನಿ ಮುಂತಾದವರು ಅಭಿನಯಿಸಿದ್ದಾರೆ. ಲಕ್ಷ್ಮೀನಾರಾಯಣ ಗೂಚಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.


Click it and Unblock the Notifications











