ದರ್ಶನ್ ಮೇಲೆ ಚಪ್ಪಲಿ ಎಸೆತ: ಬೆಂಬಲಿಕ್ಕೆ ನಿಂತ ಗೆಳೆಯ ಜಮೀರ್
'ಕ್ರಾಂತಿ' ಸಿನಿಮಾದ ಹಾಡು ಬಿಡುಗಡೆಗೆಂದು ಹೊಸಪೇಟೆಗೆ ತೆರಳಿದ್ದ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ಚಿತ್ರರಂಗದ ಹಲವರು ಖಂಡಿಸಿದ್ದಾರೆ. ಚಿತ್ರರಂಗದವರು ಮಾತ್ರವೇ ಅಲ್ಲದೆ ಹಲವು ರಾಜಕಾರಣಿಗಳು ಸಹ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ನಟ ದರ್ಶನ್ ಅವರ ಗೆಳೆಯರೂ ಆಗಿರುವ, ಹಾಲಿ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಸಹ ಘಟನೆಯನ್ನು ಖಂಡಿಸಿ ಸರಣಿ ಟ್ವೀಟ್ ಮಾಡಿದ್ದು, ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ.
ಹೆಸರಾಂತ ನಟ, ಆತ್ಮೀಯ ಗೆಳೆಯ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದಿರುವುದು ಅತ್ಯಂತ ಹೇಯ ಕೃತ್ಯ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪೊಲೀಸ್ ಇಲಾಖೆ ಈ ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

ದರ್ಶನ್ ಬಳಿಕ ಅಹಂಕಾರವಿಲ್ಲ: ಜಮೀರ್
ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡು, ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿ, ಅಭಿಮಾನಿಗಳಿಂದ 'ಡಿ ಬಾಸ್' ಎಂದು ಕರೆಸಿಕೊಂಡರೂ ಅವರಲ್ಲಿ ಕಿಂಚಿತ್ತೂ ಅಹಂಕಾರವಿಲ್ಲ. ಕಷ್ಟ ಎಂದು ಮನೆಬಾಗಿಲಿಗೆ ಬಂದವರಿಗೆ ಕೈಲಾದಷ್ಟು ಸಹಾಯ ಮಾಡುವ, ಬಡವ ಬಲ್ಲಿದನೆನ್ನದೆ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುವ, ಚಿತ್ರರಂಗಕ್ಕೆ ಕಾಲಿಡುವ ಯುವನಟರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ನಿಷ್ಕಲ್ಮಶ ವ್ಯಕ್ತಿತ್ವ ದರ್ಶನ್ ಅವರದ್ದು ಎಂದಿದ್ದಾರೆ ಜಮೀರ್.

ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುವ ದರ್ಶನ್: ಜಮೀರ್
ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುವ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದಿರುವುದರಿಂದ ದರ್ಶನ್ರ ವ್ಯಕ್ತಿತ್ವಕ್ಕಾಗಲಿ, ಅವರ ಮೇಲೆ ನಾವಿಟ್ಟಿರುವ ಪ್ರೀತಿ, ಅಭಿಮಾನಕ್ಕಾಗಲಿ ಯಾವ ಧಕ್ಕೆಯಾಗಿಲ್ಲ. ಇದು ಚಪ್ಪಲಿ ಎಸೆದವನ ಹೀನ ಮನಸ್ಥಿತಿಯನ್ನು ಅನಾವರಣಗೊಳಿಸಿದೆ ಎಂದಿದ್ದಾರೆ ಜಮೀರ್ ಅಹ್ಮದ್.

ಚಪ್ಪಲಿ ಎಸೆಯುವುದು ಸಂಸ್ಕೃತಿಯಲ್ಲ: ಜಮೀರ್
ಕನ್ನಡ ನಾಡು ಸುಸಂಸ್ಕೃತರ ನೆಲ, ಸಿನಿಮಾ ನಟರನ್ನು ಅಣ್ಣ ತಮ್ಮಂದಿರಂತೆ, ಗುರುವಿನಂತೆ ಕಂಡ ಇತಿಹಾಸ ಈ ನೆಲಕ್ಕಿದೆ. ಚಪ್ಪಲಿ ಎಸೆಯುವುದು ನಾಡಿಗೆ ಒಗ್ಗುವುದಿಲ್ಲ. ಇಂಥಾ ಹೀನ ಕೃತ್ಯವನ್ನು ಯಾರೂ ಬೆಂಬಲಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಇದು ಇಲ್ಲಿಗೆ ಕೊನೆಯಾಗಬೇಕು. ಗೆಳೆಯ ದರ್ಶನ್ ಅವರ ಜೊತೆ ನಾವಿದ್ದೇವೆ. ಇಂಥಾ ಘಟನೆ ಮತ್ತೆಂದೂ ಮರುಕಳಿಸದಿರಲಿ. ಕನ್ನಡ ನಾಡೆಂಬ ಕುಟುಂಬದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವ ಕೆಟ್ಟ ಮನಸುಗಳಿಗೆ ನನ್ನ ದಿಕ್ಕಾರವಿದೆ ಎಂದಿದ್ದಾರೆ ಜಮೀರ್ ಅಹ್ಮದ್.

ಜಮೀರ್-ದರ್ಶನ್ ಗೆಳೆತನ
ಜಮೀರ್ ಅಹ್ಮದ್ ಹಾಗೂ ದರ್ಶನ್ ನಡುವೆ ಆತ್ಮೀಯ ಗೆಳೆತನವಿದೆ. ಪ್ರತಿವರ್ಷ ರಂಜಾನ್ ವೇಳೆಗೆ ನಟ ದರ್ಶನ್, ಜಮೀರ್ ಮನೆಗೆ ಆಗಮಿಸಿ ಶುಭ ಹಾರೈಸಿ ಆತಿಥ್ಯ ಸ್ವೀಕರಿಸುತ್ತಾರೆ. ಅಲ್ಲದೆ ಇತ್ತೀಚೆಗಷ್ಟೆ ಜಮೀರ್ ಪುತ್ರ ಝೈದ್ ಖಾನ್ ನಾಯಕ ನಟನಾಗಿ ಎಂಟ್ರಿ ಕೊಟ್ಟ 'ಬನಾರಸ್' ಸಿನಿಮಾವನ್ನು ದರ್ಶನ್ ಅವರೇ ಪ್ರೆಸೆಂಟ್ ಮಾಡಿದ್ದರು. ಸಿನಿಮಾದ ಪ್ರಚಾರಕ್ಕೂ ಆಗಮಿಸಿ, ಝೈದ್ ಖಾನ್ಗೆ ಹರಸಿದ್ದರು.


Click it and Unblock the Notifications











