'ಗಂಧದ ಗುಡಿ' ಪ್ರದರ್ಶಿಸುತ್ತಿದ್ದ ಚಿತ್ರಮಂದಿರದಲ್ಲಿ ಹೊಗೆ, ಪ್ರದರ್ಶನ ತಾತ್ಕಾಲಿಕ ಸ್ಥಗಿತ
ಇಂದು (ಅಕ್ಟೋಬರ್ 28) ಬೆಳಗ್ಗೆ ಅಪ್ಪು ಅಭಿನಯದ ಗಂಧದಗುಡಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಅಪ್ಪು ಅಭಿಮಾನಿಗಳು ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರಮಂದಿರಗಳ ಮುಂದೆ ಅಪ್ಪು ಕಟೌಟ್ ನಿಲ್ಲಿಸಿ, ಆಲಿನಭಿಷೇಕ ಮಾಡಿ, ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.
ಆದರೆ ಕೆಲವು ಕಡೆ ಚಿತ್ರಮಂದಿರದ ಒಳಗೂ ಪಟಾಕಿ ಹೊಡೆದಿದ್ದರಿಂದ ಚಿತ್ರಪ್ರದರ್ಶನಕ್ಕೆ ಸಮಸ್ಯೆಯಾಗಿದೆ.
ಚಿಕ್ಕಮಗಳೂರಿನ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಸಿನಿಮಾ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಸ್ಕ್ರೀನ್ನ ಮುಂದೆ ಪಟಾಕಿ ಹಚ್ಚಿದ್ದರಿಂದ ಚಿತ್ರಮಂದಿರದ ಒಳಗೆ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.
ಚಿತ್ರಮಂದಿರದಲ್ಲಿ ಮಹಿಳೆ, ಮಕ್ಕಳು ಸೇರಿದಂತೆ ಹಿರಿಯ ನಾಗರಿಕರು ಕೆಲವು ಸಿನಿಮಾ ವೀಕ್ಷಿಸಲು ಆಗಮಿಸಿದ್ದರು. ಚಿತ್ರಮಂದಿರದಲ್ಲಿ ಹೊಗೆ ತುಂಬಿದ್ದರಿಂದ ಎಲ್ಲರೂ ಗಾಬರಿಯಾದರು. ಚಿತ್ರಮಂದಿರದ ಸ್ಕ್ರೀನ್ಗೆ ಬೆಂಕಿ ತಗಲುವ ಆತಂಕವೂ ಇತ್ತು. ಇದರಿಂದಾಗಿ 10 ನಿಮಿಷಕ್ಕೂ ಹೆಚ್ಚು ಕಾಲ ಚಿತ್ರ ಪ್ರದರ್ಶನ ಸ್ಥಗಿತ ಮಾಡಲಾಯಿತು.

ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ
ಇನ್ನುಳಿದಂತೆ ಜಿಲ್ಲೆಯ ಇತರ ಚಿತ್ರಮಂದಿರಗಳಲ್ಲಿ ಸಿನಿಮಾದ ಪ್ರದರ್ಶನ ಸರಾಗವಾಗಿ ಸಾಗಿತು. ಥಿಯೇಟರ್ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಕಳೆದ ರಾತ್ರಿಯಿಂದಲೇ ಚಿಕ್ಕಮಗಳೂರು ನಗರದ ನಾಗಲಕ್ಷ್ಮಿ ಥಿಯೇಟರ್ ಅನ್ನು ನವ ವಧುವಿನಂತೆ ಶೃಂಗಾರ ಮಾಡಿದ್ದರು. ಥಿಯೇಟರ್ ಮುಂಭಾಗದಲ್ಲಿ ಹಾಕಿದ್ದ ಫ್ಲೆಕ್ಸ್ ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ. ಪುನೀತ್ ರಾಜಕುಮಾರ್ ಅಭಿಮಾನಿಗಳನ್ನು ಅಗಲಿ ಒಂದು ವರ್ಷ ಕಳೆದರೂ ಕೂಡ ಅಭಿಮಾನಿಗಳ ಅಭಿಮಾನ ಕಿಂಚಿತ್ತು ಕಡಿಮೆಯಾಗಿಲ್ಲ. ಪುನೀತ್ ರಾಜಕುಮಾರ್ ಅವರನ್ನ ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದರು. ಟಿಕೆಟ್ ಸಿಗುತ್ತಿದಂತೆ ಒಳಗಡೆ ಬಿಟ್ಟು ಸಿನಿಮಾವನ್ನು ಆರಂಭಿಸುವಂತೆ ಥಿಯೇಟರ್ ಮುಂಭಾಗ ಅಭಿಮಾನಿಗಳು ಕೂಗಾಡುತ್ತಿದ್ದರು.

ಹುಬ್ಬಳ್ಳಿ-ಧಾರಾವಾಡ ಅವಳಿ ಜಿಲ್ಲೆ
ಇನ್ನು ಹುಬ್ಬಳ್ಳಿ-ಧಾರಾವಾಡ ಅವಳಿ ಜಿಲ್ಲೆಗಳಲ್ಲಿಯೂ 'ಗಂಧದ ಗುಡಿ' ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ನಗರದ ಅಪ್ಪು ಅಭಿಮಾನಿಗಳು ಮುಗಿಲೆತ್ತರದ ಪುನೀತ್ ರಾಜ್ಕುಮಾರ್ ಅವರ ಕಟೌಟ್ಗಳನ್ನು ಚಿತ್ರಮಂದಿರದ ಮುಂದೆ ನಿಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮ ಮೇರೆಯುವ ಮೂಲಕ ಪರಮಾತ್ಮನಿಗೆ ಅಭಿಮಾನ ಮೆರೆದರು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮ ಮೇರೆ ಮೀರಿತ್ತು. ಗಂಧದಗುಡಿ ಬಿಡುಗಡೆಗೆ ಅದ್ಧೂರಿ ಸ್ವಾಗತ ಕೋರಲಾಯಿತು.

ಸಿಂಗಾರಗೊಂಡಿದ್ದ ಅಪ್ಸರಾ ಚಿತ್ರಮಂದಿರದ
ನಗರದ ಅಪ್ಸರಾ ಚಿತ್ರ ಮಂದಿರದ ಎದುರು ಸಂಭ್ರಮ ಮುಗಿಲು ಮುಟ್ಟಿತ್ತು. ಅಪ್ಪು ಕಟೌಟ್ಗೆ ಹೂವಿನ ಮಾಲೆ ಹಾಗೂ ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಪಟಾಕಿ ಸಿಡಿಸಿ ವಿವಿಧ ವಾದ್ಯಗಳ ಮೂಲಕ ಚಿತ್ರವನ್ನು ಅಭಿಮಾನಿಗಳು ಬರಮಾಡಿಕೊಂಡರು. ಅಪ್ಪು ಅವರ ಚಿತ್ರದ ಹಾಡುಗಳನ್ನು ಹಾಕಿ ಕುಣಿದು ಕುಪ್ಪಳಿಸಿದರು. ಅಪ್ಪು ಅಭಿಮಾನಿಯೊಬ್ಬ ಅಪ್ಪುವಿನ ಸಿನಿಮಾಗಳ ಹೆಸರುಗಳನ್ನು ಶರ್ಟ್ ಮೇಲೆಲ್ಲ ಚಿತ್ರಿಸಿಕೊಂಡಿದ್ದು ವಿಶೇಷವಾಗಿತ್ತು.

ವಿದ್ಯಾಕಾಶಿಯಲ್ಲೂ ಪವರ್ ಸ್ಟಾರ್ಗೆ ಅದ್ಧೂರಿ ಸ್ವಾಗತ
ವಿದ್ಯಾ ಕಾಶಿ ಧಾರವಾಡದಲ್ಲೂ ಗಂಧದಗುಡಿಯ ಕಂಪು ಜೋರಾಗಿದೆ. ಪುನೀತ್ ಅಭಿನಯದ ಗಂಧಂದಗುಡಿ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ನಗರದ ಪದ್ಮಾ ಚಿತ್ರಮಂದಿರದ ಬಳಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಪಟಾಕಿ ಸಿಡಿಸಿ ಅಪ್ಪು ಹಾಡುಗಳಿಗೆ ಹೆಜ್ಜೆ ಹಾಕಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಪುನೀತ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ, ಕುಂಬಳಕಾಯಿ ಒಡೆದು ಸಂಭ್ರಮಾಚರಣೆ ಮಾಡಿದರು. ಮೊದಲನೆ ಶೋ ಗೆ ಅಪ್ಪುಅವರ ಅಭಿಮಾನಿಗಳ ಬಳಗ ಸಾಗರದಂತೆ ಹರಿದು ಬರುತ್ತಿದೆ. ನಗರದ ಪದ್ಮಾ ಚಿತ್ರಮಂದಿರವನ್ನು ನವ ವಧುವಿನಂತೆ ಸಿಂಗರಿಸಿ ಅಭಿಮಾನಿಗಳು ಅಪ್ಪು ಅವರಿಗೆ ಅಭಿಮಾನ ಮೇರೆದರು.


Click it and Unblock the Notifications











