ಅಪ್ಪುಗೆ ಆನೆ ಎಂದರೆ ಭಯ-ಪ್ರೀತಿ-ಕಾಳಜಿ, ಇದಕ್ಕೆ ಕಾರಣವೂ ಇದೆ
ಅಪ್ಪುವಿನ ಅರಣ್ಯ ಪಯಣ 'ಗಂಧದ ಗುಡಿ' ಡಾಕ್ಯು-ಡ್ರಾಮಾ ಇಂದು ಬಿಡುಗಡೆ ಆಗಿದೆ. ಡಾಕ್ಯುಮೆಂಟರಿಯಲ್ಲಿ ಕರ್ನಾಟಕದ ಪ್ರಕೃತಿ ಸಂಪತ್ತಿನ ಜೊತೆಗೆ ಅಪ್ಪುವಿನ ವ್ಯಕ್ತಿತ್ವದ ಮಾಹಿತಿಯೂ ಅನಾವರಣಗೊಳ್ಳುತ್ತದೆ.
ಅಮೋಘ ವರ್ಷ ಜೊತೆ ಕಾಡಿಗೆ ಹೋಗುವ ಅಪ್ಪು, ತಮ್ಮ ಇಷ್ಟ, ಭಯ, ಆತಂಕಗಳನ್ನು, ಅವಕ್ಕೆ ಕಾರಣಗಳನ್ನು ಆಗಾಗ್ಗೆ ಹೇಳಿಕೊಳ್ಳುತ್ತಾರೆ. ಕಾಡಿನಲ್ಲಿ ಹುಲಿ ನೋಡಬೇಕು, ಟೆಂಟ್ ಹಾಕಿ ವಾಸಿಸಬೇಕು ಎಂಬುದರ ಜೊತೆಗೆ ಆನೆ ನೋಡಬೇಕು ಎಂಬ ಬಯಕೆಯೂ ಅಪ್ಪು ಅವರದ್ದಾಗಿರುತ್ತದೆ.
ಅಂತೆಯೇ ಅಮೋಘ ವರ್ಷ ಜೊತೆಗೆ ಹೋಗಿ ಕಾಡಿನಲ್ಲಿ ಸ್ವಚ್ಛವಂದವಾಗಿ ಅಲೆಯುತ್ತಿರುವ ಹುಲಿಯನ್ನು ಕಂಡು ರೋಮಾಂಚನಗೊಳ್ಳುವ ಅಪ್ಪು, ಆನೆಯನ್ನು ಕಂಡು ಅಷ್ಟೇ ಖುಷಿ ಪಡುತ್ತಾರೆ. ಆನೆಯ ಬಗ್ಗೆ ತಮಗೆ ಬಹಳ ಪ್ರೀತಿ, ಗೌರವ ಆದರೆ ಅಷ್ಟೇ ಭಯವೂ ಇದೆ ಎಂದು ತಮ್ಮ ಬಾಲ್ಯದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ.
'ಭಕ್ತ ಪ್ರಹ್ಲಾದ' ಸಿನಿಮಾದಲ್ಲಿ ಪ್ರಹ್ಲಾದ ಪಾತ್ರಧಾರಿಯಾಗಿದ್ದ ಅಪ್ಪುವನ್ನು ಆನೆಯಿಂದ ತುಳಿಸುವ ದೃಶ್ಯವಿದೆ. ಸಣ್ಣ ಬಾಲಕ ಅಪ್ಪು ನೆಲದ ಮೇಲೆ ಮಲಗಿರುತ್ತಾರೆ ಅವರ ಎದುರು ಎಂಟು-ಹತ್ತು ಆನೆಗಳು ಒಟ್ಟಿಗೆ ಓಡಿ ಬರುತ್ತವೆ. ಆ ದೃಶ್ಯ ನೋಡಿ ಅಪ್ಪು ಬಹಳ ಹೆದರಿಬಿಟ್ಟಿದ್ದರಂತೆ. ಆಗಿನಿಂದಲೂ ಆನೆಗಳೆಂದರೆ ಅಪ್ಪುಗೆ ಭಯ ಆದರೆ ಅವುಗಳ ಬೃಹತ್ತತೆ, ಗಂಭೀರತೆ ನೋಡಿ ಪ್ರೀತಿ ಗೌರವವೂ ಮೂಡುತ್ತದೆಯಂತೆ.
ಅಪ್ಪು 'ಗಂಧದ ಗುಡಿ' ಜರ್ನಿಯಲ್ಲಿ ಕಾಡಿನಲ್ಲಿ ಆನೆಯನ್ನು ಕಂಡಾಗ ಅದನ್ನು ಹತ್ತಿರದಿಂದ ನೋಡುವ ಬಯಕೆಯನ್ನು ಅಮೋಘ ವರ್ಷ ಬಳಿ ವ್ಯಕ್ತಪಡಿಸಿದ್ದಾರೆ. ಆದರೆ ಕಾಡಿನ ಸಲಗದ ಬಗ್ಗೆ ಎಚ್ಚರಿಕೆ ನೀಡುವ ಅಮೋಘ ವರ್ಷ, ಕಾಡಿನಲ್ಲಿ ಆನೆಗಳಷ್ಟು ಅಪಾಯಕಾರಿ ಯಾವುದೂ ಇಲ್ಲ. ಚಿರತೆ, ಹುಲಿಗಳು ಮನುಷ್ಯರ ಮೇಲೆ ದಾಳಿ ಮಾಡಲು ಹೆದರುತ್ತವೆ ಆದರೆ ಆನೆಗಳ ತಂಟೆಗೆ ಹೋದರೆ ಹಿಂಜರಿಕೆ ಇಲ್ಲದೆ ಆನೆಗಳು ದಾಳಿ ಮಾಡುತ್ತವೆ. ಆದರೆ ಅವುಗಳ ತಂಟೆಗೆ ಹೋದರೆ ಮಾತ್ರ. ದೂರದಿಂದ ಬೇಕಾದರೆ ನೋಡಿಕೊಳ್ಳಿ ಹತ್ತಿರಕ್ಕೆ ಹೋಗುವುದು ಬೇಡ ಎನ್ನುತ್ತಾರೆ ಅಮೋಘ ವರ್ಷ.

ಆನೆ ಪಳಗಿಸುವ ಕ್ಯಾಂಪ್ಗೆ ವಿಸಿಟ್
ಬಳಿಕ ಅವರ ಮಾತು ಆನೆ ಪಳಗಿಸುವ ಕ್ಯಾಂಪ್ ಹಾಗೂ ಮಾವುತರ ಕಡೆಗೆ ತಿರುಗುತ್ತದೆ. ಅಲ್ಲಿಗೆ ಹೋಗಿ ಆನೆ ಕ್ಯಾಂಪ್ ನೋಡುತ್ತಾರೆ, ಕಾಡಾನೆಗಳನ್ನು ಬಂಧಿಸುವ ದೊಡ್ಡ-ದೊಡ್ಡ ಮರದ ಜೈಲು ಮಾದರಿ ರಚನೆಗಳನ್ನು ನೋಡಿ ಆಶ್ಚರ್ಯ ಪಡುತ್ತಾರೆ. ಮಾವುತರೊಟ್ಟಿಗೆ ಮಾತನಾಡುತ್ತಾರೆ, ಬೆರೆಯುತ್ತಾರೆ. ಪಳಗಿಸಿದ ಆನೆಗಳ ಮೈಮುಟ್ಟಿ ತಡವಿ ಅವಕ್ಕೆ ಆಹಾರ ತಿನ್ನಿಸುತ್ತಾರೆ. ವಿಶೇಷವೆಂದರೆ ಬೆಳೆ ನಾಶ ಮಾಡಲು ಬಂದ ಕಾಡಾನೆ ಓಡಿಸಲು ಅರಣ್ಯ ರಕ್ಷಕರ ಜೊತೆ ಹೋಗುತ್ತಾರೆ.

ಆನೆ ಓಡಿಸಲು ಹೋಗುವ ಅಪ್ಪು!
ಅರಣ್ಯ ರಕ್ಷಕರ ಜೊತೆ ಕಾಡಿನಲ್ಲಿ ಅಲೆಯಬೇಕಾದರೆ, ಕಾಡಾನೆಯೊಂದು ಬೆಳೆ ಹಾಳು ಮಾಡುತ್ತಿದೆ ಎಂದು ಗಾರ್ಡ್ಗಳಿಗೆ ವೈರ್ಲೆಸ್ ಸಂದೇಶವೊಂದು ಬರುತ್ತದೆ, ಅವರು ಹೊರಡಲು ಅನುವಾಗುತ್ತಾರೆ ಅವರೊಡನೆ ಅಪ್ಪು ಹಾಗೂ ಅಮೋಘ ವರ್ಷ ಸಹ ಹೋಗುತ್ತಾರೆ. ಅರಣ್ಯ ರಕ್ಷಕರು ಕಾಡಾನೆಯನ್ನು ಹೇಗೆ ಓಡಿಸುತ್ತಾರೆ ಎಂಬುದನ್ನು ಭಯ ಮಿಶ್ರಿತ ಆಶ್ಚರ್ಯದಿಂದಲೇ ನೋಡುತ್ತಾರೆ. ಆ ರೋಚಕ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಾರೆ ಅಪ್ಪು.

ಆನೆ ಹಿಡಿಯುವ ವಿಡಿಯೋ ನೋಡಿ ಶಾಕ್ ಆದ ಅಪ್ಪು!
ಆ ಬಳಿಕ ಎಲ್ಲವನ್ನೂ ಮುಗಿಸಿ ಮಾವುತರ ಗುಡಿಸಿಲಿನಲ್ಲಿ ಅವರೊಟ್ಟಿಗೆ ಊಟಕ್ಕೆ ಕೂತಿದ್ದಾಗ, ಕಾಡಾನೆಗಳ ಬಗ್ಗೆ ಚರ್ಚೆ ಬಂದು, ಹೊಲಕ್ಕೆ ನುಗ್ಗಿದ ಆನೆ ಹೋಗಲಿಲ್ಲವೆಂದರೆ ಏನು ಮಾಡುತ್ತಾರೆ ಎಂದು ಪ್ರಶ್ನೆ ಕೇಳುತ್ತಾರೆ ಅಪ್ಪು, ಅದಕ್ಕೆ ಅಮೋಘ ವರ್ಷ, ಆಗ ಸಾಕಾನೆಗಳನ್ನು ಕರೆಸಿ ಸಲಗವನ್ನು ಹಿಡಿಯಲಾಗುತ್ತದೆ. ಇಲ್ಲಿ ನೋಡಿ, ಸಲಗವನ್ನು ಹಿಡಿಯುವ ರೋಚಕ ದೃಶ್ಯ ಎಂದು ಆನೆಯನ್ನು ಹಿಡಿಯುವ, ಅದನ್ನು ಪಳಗಿಸುವ ವಿಡಿಯೋ ಕ್ಲಿಪ್ಪಿಂಗ್ ಅನ್ನು ಅಪ್ಪುಗೆ ಅಮೋಘ ವರ್ಷ ತೋರಿಸುತ್ತಾರೆ.

ಹಿಂಸಾತ್ಮಕ ಎಂದ ಪುನೀತ್ ರಾಜ್ಕುಮಾರ್
ಹಿಂಸಾತ್ಮಕ ರೀತಿಯಲ್ಲಿ ಆನೆಯನ್ನು ಹಿಡಿಯುವ ದೃಶ್ಯ ನೋಡಿ ಅಪ್ಪು ಅವಾಕ್ಕಾಗಿ ಬಿಡುತ್ತಾರೆ. ಇದು ಬಹಳ ಕ್ರೂಯೆಲ್ (ಹಿಂಸಾತ್ಮಕ) ಆಯಿತು. ಬೇರೆ ಅಹಿಂಸಾತ್ಮಕ, ಅಥವಾ ಕಡಿಮೆ ಹಿಂಸಾತ್ಮಕ ಮಾರ್ಗ ಇಲ್ಲವೆ ಎಂದು ಕೇಳುತ್ತಾರೆ. ಆ ನಂತರ ಮತ್ತೆ ಆನೆಗಳ ಬಗ್ಗೆಯೇ ಮಾತನಾಡುತ್ತಾ, ಆನೆಗಳು ಏಕೆ ನಾಡಿಗೆ ಬರುತ್ತವೆ? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅಮೋಘ ವರ್ಷ, ಆನೆಗಳು ತಲೆ ತಲಾಂತರಗಳಿಂದಲೂ ಕಾಡಿನಲ್ಲಿ ಒಂದು ಹಾದಿಯಲ್ಲಿ ನಡೆದಿರುತ್ತವೆ ಆದರೆ ಆ ಕಾಡೆಲ್ಲ ಈಗ ಊರಾಗಿಬಿಟ್ಟಿವೆ ಅಸಲಿಗೆ ನಾವು ಆನೆಗಳ ಜಾಗಕ್ಕೆ ಬಂದಿದ್ದೇವೆ ಎನ್ನುತ್ತಾರೆ.

'ತಡೆಯಲು ಸಾಧ್ಯವೇ ಇಲ್ಲವೆ?'
''ಹಾಗಿದ್ದರೆ ಆನೆಗಳು ನಾಡಿಗೆ ನುಗ್ಗುವುದನ್ನು ತಡೆಯಲು ಸಾಧ್ಯವೇ ಇಲ್ಲವೆ'' ಎಂದು ಕಾಳಜಿಯಿಂದ ಕೇಳುತ್ತಾರೆ ಅಪ್ಪು, ಅದಕ್ಕೆ ಉತ್ತರ ನೀಡುವ ಅಮೋಘ ವರ್ಷ, ''ಸರ್ಕಾರಗಳು ಆನೆ ಕಾರಿಡಾರ್ ಅನ್ನು ನಿರ್ಮಿಸುತ್ತಿದೆ. ಆನೆಗಳು ಓಡಾಡುವ ಖಾಸಗಿ ಜಾಗಗಳನ್ನು ಸರ್ಕಾರವೇ ಖರೀದಿಸಿ ಅದನ್ನು ಆನೆಗಳಿಗಾಗಿ ಬಿಟ್ಟುಕೊಡುವ ಯತ್ನಗಳು ನಡೆಯುತ್ತಿವೆ. ಅದು ಆದರೆ ಆನೆಗಳಿಗೆ ಅನುಕೂಲವಾಗುತ್ತದೆ'' ಎನ್ನುತ್ತಾರೆ. ಇಲ್ಲಿ, ಪ್ರಾಣಿಗಳ ಬಗ್ಗೆ ಅಪ್ಪುವಿನ ಕಾಳಜಿಯ ಜೊತೆಗೆ ಅವರಿಗೆ ಇದ್ದ ಕುತೂಹಲ, ಕಾಳಜಿ, ಮಾಹಿತಿ ತಿಳಿದುಕೊಳ್ಳುವ ಹಂಬಲಗಳು ಎದ್ದು ಕಾಣುತ್ತವೆ.


Click it and Unblock the Notifications











