ಗೋಲ್ಡನ್ ಸ್ಟಾರ್ ಗಣೇಶ್ ಮೇಲೆ ಉಪೇಂದ್ರ 'ಬ್ರಹ್ಮಾಸ್ತ್ರ'
ಇದು ಚತುರ್ಮುಖ ಬ್ರಹ್ಮ ಹಾಗೂ ಪಂಚಮುಖಿ ಗಣೇಶನ ನಡುವಿನ ಕಥೆಯಲ್ಲ. ಕನ್ನಡದ ಇಬ್ಬರು ಸ್ಟಾರ್ ನಟರ ನಡುವಿನ ತಿಕ್ಕಾಟ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಡುವಿನ ಮುಸುಕಿನ ಗುದ್ದಾಟ.
ಗಣೇಶ್ ಹಾಗೂ ಅಮೂಲ್ಯ ಜೋಡಿಯ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಫೆಬ್ರವರಿ 7ಕ್ಕೆ ಉಪೇಂದ್ರ ಅಭಿನಯದ ಬ್ರಹ್ಮ ಚಿತ್ರ ರಿಲೀಸ್ ಆಗುತ್ತಿದೆ. 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರವನ್ನು ಎತ್ತಂಗಡಿ ಮಾಡಿಸಿ 'ಬ್ರಹ್ಮ' ರಿಲೀಸ್ ಮಾಡಲಾಗುತ್ತಿದೆ.
ಈ ಸಂಬಂಧ ಶ್ರಾವಣಿ ಚಿತ್ರದ ನಿರ್ಮಾಪಕ ಸುರೇಶ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ತಮ್ಮ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದರೂ ಎತ್ತಂಗಡಿ ಮಾಡಿಸಲಾಗುತ್ತಿದೆ. ನಮಗೆ ನ್ಯಾಯ ಒದಗಿಸಿಕೊಡಿ ಎಂದು ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ.

ಫಿಲಂ ಚೇಂಬರ್ ನಲ್ಲಿ ಗಣೇಶ Vs ಬ್ರಹ್ಮ ತಿಕ್ಕಾಟ
ಅತ್ತ ಬ್ರಹ್ಮ ಚಿತ್ರದ ನಿರ್ಮಾಪಕ ಮಂಜುನಾಥ ಬಾಬು ಹಾಗೂ ಇತ್ತ ಶ್ರಾವಣಿ ಚಿತ್ರದ ನಿರ್ಮಾಪಕ ಸುರೇಶ್ ಅವರನ್ನು ಸಭೆ ಕರೆದು ಚರ್ಚಿಸಿ ತೀರ್ಮಾನಿಸುವುದಾಗಿ ಫಿಲಂ ಚೇಂಬರ್ ಅಧ್ಯಕ್ಷ ಗಂಗರಾಜು ಭರವಸೆ ನೀಡಿದ್ದಾರೆ. ಗಣೇಶ ಮತ್ತು 'ಬ್ರಹ್ಮ'ನ ನಡುವಿನ ತಿಕ್ಕಾಟ ಈಗ ಫಿಲಂ ಚೇಂಬರ್ ಅಂಗಳದಲ್ಲಿದೆ.

ಶ್ರಾವಣಿ ಸುಬ್ರಹ್ಮಣ್ಯರಿಗೆ ಚಂದ್ರು ಚಾಲೆಂಜ್
ಒಂದು ವೇಳೆ ಶ್ರಾವಣಿ ಸುಬ್ರಹ್ಮಣ್ಯ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಆಗುತ್ತಿದೆ ಎಂದು ಅವರು ತೋರಿಸಿದರೆ ತಾನು ಬ್ರಹ್ಮ ಚಿತ್ರವನ್ನು ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲ್ಲ ಎಂದಿದ್ದಾರೆ ನಿರ್ದೇಶಕ ಆರ್ ಚಂದ್ರು. ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರವನ್ನು ಎತ್ತಂಗಡಿ ಮಾಡಿಸುವ ಜರೂರತ್ತು ತಮಗೂ ಇಲ್ಲ ಎಂದಿದ್ದಾರೆ.

ಎರಡು ವಾರಗಳಿಂದ ಶ್ರಾವಣಿ ಕಲೆಕ್ಷನ್ ಡಲ್
ಸಂತೋಷ್ ಚಿತ್ರಮಂದಿರದಲ್ಲಿ ಬ್ರಹ್ಮ ಚಿತ್ರವನ್ನು ಬಿಡುಗಡೆ ಮಾಡಲು ಶ್ರಾವಣಿ ಸುಬ್ರಹ್ಮಣ್ಯ ಚಿತ್ರದ ವಿತರಕ ಜಯಣ್ಣ ಅವರೇ ಎನ್ಓಸಿ ಕೊಟ್ಟಿದ್ದಾರೆ. ಕಳೆದ ಎರಡು ವಾರಗಳಿಂದ ಶ್ರಾವಣಿ ಚಿತ್ರದ ಕಲೆಕ್ಷನ್ ಡಲ್ ಆಗಿದೆ. ಹಾಗಾಗಿ ತಮ್ಮ ಬ್ರಹ್ಮ ಚಿತ್ರಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದಿದ್ದಾರೆ ಚಂದ್ರು.

ಸುರೇಶ್ ವಿರುದ್ಧ ಆರ್ ಚಂದ್ರು ಗರಂ
ಚಿತ್ರದ ವಿತರಕರೇ ಎನ್ಓಸಿ ಕೊಟ್ಟಿದ್ದಾರೆ. ಈಗ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರದ ನಿರ್ಮಾಪಕ ಸುರೇಶ್ ಅವರು ಆಗಲ್ಲ ಎನ್ನುತ್ತಿರುವ ಬಗ್ಗೆ ಆರ್ ಚಂದ್ರು ಗರಂ ಆಗಿದ್ದು, ಅವರೂ ಕೆಎಫ್ ಸಿಸಿ ಮೆಟ್ಟಿಲೇರಿದ್ದಾರೆ.

ಸಂತೋಷ್ ಚಿತ್ರಮಂದಿರದಲ್ಲಿ ಸುಬ್ರಹ್ಮಣ ಹೌಸ್ ಫುಲ್
ಆದರೆ ಕೆ.ಎ.ಸುರೇಶ್ ಅವರು ತಮ್ಮ ಚಿತ್ರ ಸಂತೋಷ್ ಚಿತ್ರಮಂದಿರದಲ್ಲಿ ಬಾಲ್ಕನಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸೆಕೆಂಡ್ ಕ್ಲಾಸ್ ಶೇ.70ರಷ್ಟು ಭರ್ತಿಯಾಗಿ ಪ್ರದರ್ಶನ ಕಾಣುತ್ತಿದೆ ಎಂದಿದ್ದಾರೆ.

ಶ್ರಾವಣಿ ಸುಬ್ರಹ್ಮಣ್ಯರಿಗೆ ಬ್ರಹ್ಮನ ಅಡ್ಡಗಾಲು
ಶ್ರಾವಣಿ ಸುಬ್ರಹ್ಮಣ್ಯ ಚಿತ್ರ ಈಗಾಗಲೆ ನಲವತ್ತು ದಿನಗಳನ್ನು ಪೂರೈಸಿದ್ದು ಐವತ್ತನೇ ದಿನದತ್ತ ದಾಪುಗಾಲಾಗುತ್ತಿದೆ. ಇದೇ ಸಂದರ್ಭದಲ್ಲಿ 'ಬ್ರಹ್ಮ' ಅಡ್ಡಗಾಲಿಡುತ್ತಿದ್ದಾನೆ ಎಂದು ನಿರ್ಮಾಪಕ ಸುರೇಶ್ ಅವರು ಆರೋಪಿಸುತ್ತಿದ್ದಾರೆ. ಆದರೆ ಈ ಆರೋಪವನ್ನು ಆರ್.ಚಂದ್ರು ಒಪ್ಪುತ್ತಿಲ್ಲ.


Click it and Unblock the Notifications











