ಕನ್ನಡ ನಿರ್ಮಾಪಕರಿಗೆ ನಟ ಜಗ್ಗೇಶ್ ಮಾಡಿರುವ ಮನವಿ ಇದು
ಕನ್ನಡ ನಾಡು, ನುಡಿ, ಜಲ ವಿಷಯ ಬಂದಾಗ ಸ್ವಾಭಿಮಾನಿ ಕನ್ನಡಿಗನಾಗಿ ಕನ್ನಡಿಗರ ಪರ ಸದಾ ದನಿ ಎತ್ತುವ ನಟ ಜಗ್ಗೇಶ್, ಕನ್ನಡ ಚಿತ್ರರಂಗದ ದೌರ್ಭಾಗ್ಯದ ಬಗ್ಗೆ ಇತ್ತೀಚೆಗಷ್ಟೇ ಬೇಸರ ವ್ಯಕ್ತಪಡಿಸಿದ್ದರು.
''ಕನ್ನಡ ಸಿನಿಮಾಗಳಲ್ಲಿ ನಟಿಸುವ ಯೋಚನೆ ಇಲ್ಲ'' ಎಂದು ಶ್ರುತಿ ಹಾಸನ್ ಹೇಳಿದ್ದನ್ನ ಕೇಳಿ, ''ನಮ್ಮ ಕನ್ನಡದಲ್ಲಿ ನಾಯಕಿಯರಿಗೆ ಕೊರತೆಯೇ.? ಇಂಥ ಮಾತು ಕೇಳಿ ಇವರ ಮನೆ ಮುಂದೆ ನಿಲ್ಲಲು ಕನ್ನಡ ನಿರ್ಮಾಪಕರು ಭಿಕ್ಷುಕರೇ.? ನಮ್ಮವರಿಗೆ ಇನ್ನೂ ಬುದ್ಧಿ ಬಂದಿಲ್ಲ.! ದೌರ್ಭಾಗ್ಯ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದರು.

ಈ ಬಗ್ಗೆ 'ಕನ್ನಡ ನಿರ್ಮಾಪಕರು ಭಿಕ್ಷುಕರೇ.? ಚಿತ್ರರಂಗದ ದೌರ್ಭಾಗ್ಯದ ಬಗ್ಗೆ ಜಗ್ಗೇಶ್ ಆಕ್ರೋಶ.!' ಎಂಬ ಶೀರ್ಷಿಕೆ ಅಡಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವಿಸ್ತೃತ ಲೇಖನ ಪ್ರಕಟಿಸಿತ್ತು. ಈ ಲೇಖನವನ್ನ ಓದಿ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
''ತುಂಬ ದುಃಖವಾಗಿ ಪ್ರತಿಕ್ರಿಯಿಸಿದೆ. ಕಾರಣ ನಮ್ಮ ಕನ್ನಡಿಗರು ಎಷ್ಟು ಪ್ರೀತಿಯಿಂದ ಎಲ್ಲ ಭಾಷೆ ಗೌರವಿಸುತ್ತಾರೆ. ಯಾಕೆ ಅನ್ಯರು ನಮ್ಮ ಗುಣಕ್ಕೆ ಗೌರವ ನೀಡಲ್ಲ.? ಬೇಜಾರಾಯಿತು'' ಎಂದು ನಮ್ಮ ಲೇಖನದ ಟ್ವೀಟ್ ನ ರೀಟ್ವೀಟ್ ಮಾಡಿ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
''ನಮ್ಮ ಕನ್ನಡ ಮಕ್ಕಳನ್ನೇ ನಮ್ಮ ಚಿತ್ರಗಳಲ್ಲಿ ನಟ-ನಟಿಯನ್ನಾಗಿ ಬಳಸಿ. ಸ್ವಾಭಿಮಾನದಿಂದ ಬದುಕೋಣ'' ಎಂದು ಕನ್ನಡ ನಿರ್ಮಾಪಕರಿಗೆ ಜಗ್ಗೇಶ್ ವಿನಂತಿ ಮಾಡಿಕೊಂಡಿದ್ದಾರೆ.
''ದಕ್ಷಿಣ ಭಾರತದಲ್ಲಿ ಬಲಿಷ್ಟವಾಗಿರೋದೇ ನಮ್ಮ ಕನ್ನಡ ಚಿತ್ರರಂಗ. ಪುನೀತ್, ಸುದೀಪ್, ದರ್ಶನ್, ಯಶ್, ಧ್ರುವ ಸರ್ಜಾ, ಗಣೇಶ್, ಚಿರಂಜೀವಿ ಸರ್ಜಾ, ದುನಿಯಾ ವಿಜಯ್, ರಚಿತಾ ರಾಮ್, ರಾಧಿಕಾ ಪಂಡಿತ್, ಹರಿಪ್ರಿಯಾ... ಇನ್ನೂ ಅನೇಕರಿದ್ದಾರೆ. ಚಿಂತೆ ಏಕೆ.?'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
''ಹೊಸಬರಂತೂ ಆಶಾದಾಯಕವಾಗಿ ಸಿಕ್ಸರ್ ಬಾರಿಸುತ್ತಿದ್ದಾರೆ. ನಮ್ಮ ಈ ಪಡೆಯೇ ಸಾಕು ಕನ್ನಡಿಗರನ್ನು ರಂಜಿಸಲು. ಅನ್ಯರಿಗೆ ಸವಲತ್ತು ನೀಡಿ ಕೈ ಮುಗಿಯುವ ದೌರ್ಭಾಗ್ಯವೇಕೆ.? ಅಲ್ಲವೇ ಮಿತ್ರರೇ.?'' ಎಂದು ಟ್ವೀಟಿಗರಲ್ಲಿ ಜಗ್ಗೇಶ್ ಪ್ರಶ್ನೆ ಮಾಡಿದ್ದಾರೆ.
ಜಗ್ಗೇಶ್ ಅವರ ಈ ಮಾತುಗಳಿಗೆ ನೀವೇನಂತೀರಿ.? ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











