ಪ್ರೀತಂಗುಬ್ಬಿ ಜತೆ ಗಣೇಶ್ 'ದಿಲ್ ರಂಗೀಲ' ಆಟ
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಕಾಂಬಿನೇಷನ್ ಚಿತ್ರ ಗಣೇಶ ಚತುರ್ಥಿ (ಸೆ.9) ದಿನ ಚಿತ್ರ ಸೆಟ್ಟೇರಿದೆ. ಗಣೇಶನಿಗೆ ಈ ಬಾರಿ ವಿಘ್ನರಾಜನ ಆಶೀರ್ವಾದ ಖಂಡಿತ ಸಿಗುತ್ತದೆ ಮತ್ತೊಮ್ಮೆ ಗಣೇಶ್ ಚಿತ್ರರಂಗದಲ್ಲಿ ಮೆರೆಯಲಿದ್ದಾರೆ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಅವರು ನಿರ್ಮಿಸುತ್ತಿರುವ ದಿಲ್ ರಂಗೀಲ' ಚಿತ್ರ ಗಣೇಶನ ಹಬ್ಬದ ಶುಭದಿನ ಜೆ.ಪಿ.ನಗರದ ವರಪ್ರದ ವೆಂಕಟೇಶ್ವರ ದೇವಸ್ಥಾನದಲ್ಲಿ ಆರಂಭವಾಯಿತು.
ಗಣೇಶನ ಮೇಲೆ ಸೆರೆಹಿಡಿಯಲಾದ ಪ್ರಥಮ ಸನ್ನಿವೇಶಕ್ಕೆ ಶಿಲ್ಪಾಗಣೇಶ್ ಆರಂಭಫಲಕ ತೋರಿದರೆ ರಾಮು ಕ್ಯಾಮೆರಾ ಚಾಲನೆ ಮಾಡಿದರು.
ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಚಿತ್ರವನ್ನು ಪ್ರೀತಂಗುಬ್ಬಿ ಅವರೇ ನಿರ್ದೇಶಿಸಿದ್ದರು. ಪ್ರೀತಂಗುಬ್ಬಿ ಗಣೇಶ್ ಅವರು ಮುಂಗಾರುಮಳೆ ದಿನಗಳಿಂದ ಒಟ್ಟಿಗೆ ಕಲೆತು ಬೆರೆತು ವರ್ಕ್ ಮಾಡಿರುವುದರಿಂದ ಇಬ್ಬರ ಕಾಂಬಿನೇಷನ್ ಚಿತ್ರ ವಾಗಿರುತ್ತದೆ ಎಂಬ ನಂಬಿಕೆ ಇದೆ.
ಗಣೇಶ್ ಅವರ ಪತ್ನಿಶಿಲ್ಪಾ ಅವರು ನಿರ್ಮಾಪಕಿಯಾಗಿ ಸ್ವಂತ ಬ್ಯಾನರ್ ಚಿತ್ರದ ನಿರ್ದೇಶನಕ್ಕೆ ಮೊದಲು ಆಯ್ಕೆ ಮಾಡಿದ್ದು ಪ್ರೀತಂಗುಬ್ಬಿ ಅವರನ್ನೇ ಎಂಬುದನ್ನು ಮರೆಯುವಂತಿಲ್ಲ. ಮಳೆಯಲಿ ಜೊತೆಯಲಿ ಚಿತ್ರದ ಹಾಡುಗಳಂತೂ ಇಂದಿಗೂ ಸಿನಿರಸಿಕರು ಗುಣುಗುವಂತೆ ಮಾಡುತ್ತದೆ.

ಬುಲ್ ಬುಲ್ ಬೆಡಗಿ ರಚಿತಾ ರಾಂ, ಪ್ರಿಯಾಂಕ ರಾವ್, ರಂಗಾಯಣರಘು, ಅಚ್ಯುತಕುಮಾರ್, ಯಮುನ, ಶ್ರೀನಿಧಿ, ಗಿರಿ ಮುಂತಾದವರು ಈ ಚಿತ್ರದ ತಾರಾಬಳಗಕ್ಕೆ ಆಯ್ಕೆಯಾಗಿದ್ದಾರೆ.
ನಿರ್ದೇಶಕ ಪ್ರೀತಂ ಗುಬ್ಬಿ ಅವರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ದೀಪು.ಎಸ್.ಕುಮಾರ್ ಸಂಕಲನ, ಮುರಳಿ ನೃತ್ಯ ನಿರ್ದೇಶನವಿರಲಿದೆ.
ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು, ಗೋವಾ ಹಾಗೂ ವಿದೇಶದಲ್ಲಿ ನಡೆಯಲಿದೆಯಂತೆ. 'ದಿಲ್ ರಂಗೀಲ'ಕ್ಕೆ ಪ್ರಶಾಂತ್ ಸಂಭಾಷಣೆ ಬರೆದರೆ ಯೋಗರಾಜ್ ಭಟ್, ಜಯಂತಕಾಯ್ಕಿಣಿ ಗೀತರಚನೆ ಮಾಡಿದ್ದಾರೆ.
ಗಣೇಶ್ ಅವರ ಆಟೋರಾಜ ಹಾಗೂ ಪ್ರೀತಂ ಅವರ ನಮ್ ದುನಿಯಾ ನಮ್ ಸ್ಟೈಲ್ ಚಿತ್ರಗಳು ನಿರೀಕ್ಷಿಸಿದ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲಿಲ್ಲ. ಇಬ್ಬರ ಆಸೆಗಳನ್ನೂ ದಿಲ್ ರಂಗೀಲಾ ಚಿತ್ರ ಈಡೇರಿಸುತ್ತದೆ ಎಂಬ ನಿರೀಕ್ಷೆ ಗಾಂಧಿನಗರದಲ್ಲಿ ಹುಟ್ಟಿಕೊಂಡಿದೆ.


Click it and Unblock the Notifications











