ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್ಗೆ ಗೌರವ ಸಲ್ಲಿಸಿದ ಗೂಗಲ್
ಒಂದೇ ವಾರದ ಅಂತರದಲ್ಲಿ ಅದೂ ಬಹುತೇಕ ಒಂದೇ ಸಮಯಕ್ಕೆ ಭಾರತೀಯ ಚಿತ್ರರಂಗ ಇಬ್ಬರು ಯುವ ಕಲಾವಿದರನ್ನು ಕಳೆದುಕೊಂಡು ಆಘಾತ ಅನುಭವಿಸಿದೆ. ಕಳೆದ ಭಾನುವಾರವಷ್ಟೇ ಕನ್ನಡದ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. 35ನೇ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿದ್ದು ದೇಶದೆಲ್ಲೆಡೆ ಚರ್ಚೆಗೆ ಒಳಗಾಗಿತ್ತು. ಚಿರಂಜೀವಿ ಅವರನ್ನು ಬಲ್ಲ ಕನ್ನಡಿಗರು ಈ ಸಾವಿನಿಂದ ತೀವ್ರ ದುಃಖಿತರಾಗಿದ್ದರು.
Recommended Video
ಈ ಘಟನೆ ಹಸಿಯಾಗಿರುವಾಗಲೇ ಜೂನ್ 14ರ ಭಾನುವಾರ ಮತ್ತೊಂದು ಶಾಕಿಂಗ್ ಸುದ್ದಿ ಮುಂಬೈನಿಂದ ಬಂದಿತ್ತು. ಯಾವುದೇ ಗಾಡ್ ಫಾದರ್ಗಳಿಲ್ಲದೆ, ತನ್ನ ಅಭಿನಯದ ಮೂಲಕವೇ ಹೆಸರು ಮಾಡಿದ್ದ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಇಡೀ ದೇಶವನ್ನು ದಿಗ್ಭ್ರಾಂತಿಗೊಳಿಸಿದೆ. ಅವರ ಸಾವಿಗೆ ಮಾನಸಿಕ ಖಿನ್ನತೆ ಕಾರಣ ಎನ್ನಲಾಗುತ್ತಿದೆ. ಒಂದೇ ವಾರದ ಅಂತರದಲ್ಲಿನ ಎರಡು ಸಾವುಗಳು ಮೂಡಿಸಿರುವ ನೋವಿನ ಛಾಯೆ ಗಾಢವಾಗಿದೆ.

ಗೂಗಲ್ ಇಂಡಿಯಾ ಶೋಕ
ಇಬ್ಬರ ಹಠಾತ್ ಅಗಲುವಿಕೆಗೆ ಗೂಗಲ್ ಇಂಡಿಯಾ ಶೋಕ ವ್ಯಕ್ತಪಡಿಸಿದ್ದು, ಸೋಮವಾರ ಇಬ್ಬರು ಕಲಾವಿದರೂ ಗೌರವ ಸಲ್ಲಿಸಿದೆ. 'ಕಳೆದ ಕೆಲವು ದಿನಗಳಲ್ಲಿ ನಾವು ಇಬ್ಬರು ಅದ್ಭುತ ನಟರ ಅಗಲುವಿಕೆಗೆ ಸಾಕ್ಷಿಯಾಗಿದ್ದೇವೆ. ಅವರು ನಮ್ಮೊಂದಿಗೆ ಹಂಚಿಕೊಂಡ ಕಥೆಗಳು ಮತ್ತು ಮ್ಯಾಜಿಕ್ಗಾಗಿ ಅವರಿಗೆ ಸಲ್ಲಿಸುತ್ತಿರುವ ಗೌರವ. ಅವು ನಮ್ಮೊಂದಿಗೆ ಬದುಕುವುದನ್ನು ಮುಂದುವರಿಯುತ್ತವೆ' ಎಂದು ಗೂಗಲ್ ಇಂಡಿಯಾ ಟ್ವೀಟ್ ಮಾಡಿದೆ.

ಸಹಾಯ ಕೇಳಬಹುದು
'ಇದು ಕಷ್ಟಕರವಾದ ಸಮಯ. ನಾವು ದೂರ ದೂರ ಉಳಿಯುತ್ತಿದ್ದೇವೆ. ಒಬ್ಬರಿಗೊಬ್ಬರು ಸಂಪರ್ಕದಲ್ಲಿ ಇರುವುದು ಹಿಂದೆಂದಿಗಿಂತಲೂ ಬಹಳ ಮುಖ್ಯವಾಗಿದೆ. ಯಾರಾದರೂ ಈ ರೀತಿ ಕಷ್ಟದಲ್ಲಿ ಒದ್ದಾಡುತ್ತಿರುವುದು ನಿಮಗೆ ತಿಳಿಸಿದರೆ 08046110007ಕ್ಕೆ ಕರೆ ಮಾಡಿ ಸಹಾಯ ಕೇಳಬಹುದು ಎಂದು ಗೂಗಲ್ ಹೇಳಿದೆ.

ಚಿರು ಸರ್ಜಾ ಅಗಲಿಕೆ
ಕನ್ನಡ ನಟ ಚಿರಂಜೀವಿ ಸರ್ಜಾ ಜೂನ್ 7ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. 35 ವರ್ಷದ ಚಿರಂಜೀವಿ ಸರ್ಜಾ, ಅವರು ಹಠಾತ್ ಸಾವು ಕನ್ನಡ ಚಿತ್ರಪ್ರೇಮಿಗಳಿಗೆ ಆಘಾತ ಉಂಟು ಮಾಡಿತ್ತು. ಎದೆನೋವು ಎಂದು ಹೇಳಿದ್ದ ಚಿರಂಜೀವಿ ಅವರನ್ನು ಆಸ್ಪತ್ರೆಗೆ ಕರೆತರುವಾಗಲೇ ಕೊನೆಯುಸಿರೆಳೆದಿದ್ದರು.

ಸುಶಾಂತ್ ಆತ್ಮಹತ್ಯೆ
ಚಿರಂಜೀವಿ ಸರ್ಜಾ ಅಗಲಿದ ಸರಿಯಾಗಿ ಒಂದು ವಾರದ ಬಳಿಕ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಭಾರತವನ್ನು ತಲ್ಲಣಗೊಳಿಸಿದೆ. ಸ್ಫುರದ್ರೂಪಿ ಮತ್ತು ಹಸನ್ಮುಖಿ ನಟ ಸುಶಾಂತ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದು ಅನೇಕರಿಗೆ ತಿಳಿದಿದ್ದರೂ, ಅವರು ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ ಎಂದು ಎಣಿಸಿರಲಿಲ್ಲ.


Click it and Unblock the Notifications











