ಹುಟ್ಟುಹಬ್ಬದಂದೇ ಆದಿವಾಸಿ ಜನಾಂಗದ 10 ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ ನೀಡಲು ಮುಂದಾದ ಹಂಸಲೇಖ!
ನಾದಬ್ರಹ್ಮ ಹಂಸಲೇಖ ಅವರು ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮಲಾಪುರ ಹಾಡಿಯಲ್ಲಿ ತಮ್ಮ 71ನೇ ಹುಟ್ಟು ಹಬ್ಬವನ್ನು ಆದಿವಾಸಿ ಮಕ್ಕಳೊಂದಿಗೆ ಆಚರಿಸಿಕೊಂಡರು. ಹಾಡಿ ಮಕ್ಕಳೊಂದಿಗೆ ಮಧ್ಯಾಹ್ನದ ಊಟ ಸವಿದ ಹಂಸಲೇಖ ಸ್ಥಳದಲ್ಲೇ ಆದಿವಾಸಿ ಗಿರಿಜನ 10 ಮಕ್ಕಳನ್ನು ಉಚಿತ ಸಂಗೀತ ಅಭ್ಯಾಸಕ್ಕೆ ಆಯ್ಕೆ ಮಾಡಿದರು. ಸಂಗೀತದ ಬಗ್ಗೆ ಆಸಕ್ತಿ ಹೊಂದಿರುವ ಈ ಮಕ್ಕಳಿಗೆ ಉಚಿತವಾಗಿ ಸಂಗೀತ ಶಿಕ್ಷಣ ಕೊಡಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷ ತಮ್ಮ 69ನೇ ಹುಟ್ಟುಹಬ್ಬದಲ್ಲಿ 69 ಮಂದಿ ಗಾಯಕರು ಹಾಡಿ ರಂಜಿಸಿದರು. ಈ ಬಾರಿ ಕಾಂಕ್ರಿಟ್ ನಾಡಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎಂದುಕೊಂಡು ಕಾಡಿನ ನಡುವೆ ಕಾಡು ಮಕ್ಕಳ ನಡುವೆ ಆಚರಿಸಿಕೊಳ್ಳೋಣ ಎಂದು ಇಲ್ಲಿಗೆ ತಮ್ಮ ಪತ್ನಿಯೊಂದಿಗೆ ಬಂದೆ. ಆದರೂ, ಕಾರ್ಯಕ್ರಮ ವ್ಯವಸ್ಥಾಪಕರು ಕೇಕ್ ತಂದಿದ್ದಾರೆ ಎಂದು ಖುಷಿ ಪಟ್ಟು ಕೇಕ್ ಕತ್ತರಿಸಿದರು. ಇಂದಿನ ಹುಟ್ಟುಹಬ್ಬ ತಮಗೆ ಮರೆಯಲಾಗದ ದಿನ ಎಂದು ಸ್ಮರಿಸಿದರು.

ಹಂಸಲೇಖ ಹೇಳಿದ್ದೇನು?
''ಈ ಮಕ್ಕಳಿಗೆ ಸಂಗೀತ ಕಲಿಯಲು ಬೇಕಾಗುವ ಸಂಗೀತ ಉಪಕರಣಗಳು ಮತ್ತು ಟ್ಯಾಬ್ಲೆಟ್ ಕೊಡಲಾಗುವುದು. ಆದಿವಾಸಿಗಳ ಮಕ್ಕಳು ಹುಟ್ಟು ಕಲಾವಿದರು. ಅವರಲ್ಲಿರುವ ಆಸಕ್ತಿ ಗಮನಿಸಿ ಇಂದು 10 ಮಕ್ಕಳನ್ನು ಆಯ್ಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮತ್ತಷ್ಟು ಮಕ್ಕಳನ್ನು ಆಯ್ಕೆ ಮಾಡಿಕೊಂಡು ಉಚಿತವಾಗಿ ಸಂಗೀತ ಶಿಕ್ಷಣ ನೀಡಲಾಗುವುದು,'' ಎಂದರು.

ಹಂಸಲೇಖ ಕಂಡುಕೊಂಡ 'ದಯಾ'
ಆಗಸ್ಟ್ 15ರಂದು ಆನ್ಲೈನ್ನಲ್ಲೇ ಉಚಿತ ಸಂಗೀತ ಶಿಕ್ಷಣ ಪ್ರಾರಂಭ ಮಾಡಲಿದ್ದು, ಆಸಕ್ತಿ ಇರುವ ಯಾರೂ ಬೇಕಾದರೂ ಸಂಗೀತವನ್ನು ಉಚಿತವಾಗಿ ಪಡೆಯಬಹುದು. ಅದಕ್ಕೆ ಈ ಯೋಜನೆಗೆ ''ದಯಾ'' ಎಂದು ಹೆಸರಿಡಲಾಗಿದೆ,''ಎಂದು ಇದೇ ಸಂದರ್ಭದಲ್ಲಿ ಹಂಸಲೇಖ ಹೇಳಿದ್ದಾರೆ.

ದಿಗ್ಗಜರಿಂದ ಹಂಸಲೇಖ ಬರ್ತ್ಡೇ
ಲತಾ ಹಂಸಲೇಖ, ಬಿರ್ಸಾ ಮುಂಡಾ ಬುಡಕಟ್ಟು ಸಮಾಜಗಳ ಅಭಿವೃದ್ಧಿ ಹಾಗೂ ಸೇವಾಸಂಸ್ಥೆಯ ಅಧ್ಯಕ್ಷ ಶೇಖರ್ ಎಲೆಹುಂಡಿ, ಕಾರ್ಯದರ್ಶಿ ಬಸವನಗಿರಿ ಹಾಡಿಯ ಬಿ.ಎಂ. ನಟರಾಜು, ಸದರಿ ಸಂಘಟನೆಯ ಮಹಾಪೋಷಕ ಜಿ.ಎನ್. ದೇವದತ್ತ, ಬೂದನೂರು ವೆಂಕಟೇಶ್, ಚಕ್ಕೋಡನಹಳ್ಳಿ ಗ್ರಾಪಂ ಅಧ್ಯಕ್ಷ ಕಾಳಿಂಗೇಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾರಾಯಣಪ್ಪ, ಗಿರಿಜನ ಸಮನ್ವಯಾಧಿಕಾರಿ ನಾಗರಾಜು ಮತ್ತಿತರರು ಹಾಜರಿದ್ದರು.

ಸಮಾಜಮುಖಿ ಕೆಲಸದಲ್ಲೂ ಭಾಗಿ
ಹಂಸಲೇಖ ಸಂಗೀತದ ಜೊತೆ ಜೊತೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದಿವಾಸಿ ಜನಾಂಗ, ಹಿಂದುಳಿದವರ ಪರವಾಗಿ ನಿಂತಿದ್ದಾರೆ. ಇತ್ತೀಚೆಗೆ ಕೆಲವು ವಿವಾದಗಳಿಗೂ ನಾದಬ್ರಹ್ಮ ಸಿಕ್ಕಿಕೊಂಡಿದ್ದರು. ಸಂಗೀತದ ರಿಯಾಲಿಟಿ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಹಂಸಲೇಖ ಇಂದು (ಜೂನ್ 23) ಅರ್ಥಪೂರ್ಣವಾಗಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.


Click it and Unblock the Notifications











