ಮತ್ತೆ ಡೆಮೊಕ್ರಸಿಯನ್ನು ತಂದುಕೊಡಲಿ ಹಾಲಿನ ಮುಖ್ಯಮಂತ್ರಿ ಸಿದ್ಧರಾಮಯ್ಯ: ಮತ್ತೆ ಸಿಎಂ ಆಗಲಿ ಎಂದ ಹಂಸಲೇಖ
ನಾದಬ್ರಹ್ಮ ಹಂಸಲೇಖ ಇತ್ತೀಚೆಗೆ ಪೇಜಾವರ ಶ್ರೀಗಳ ಬಗ್ಗೆ ಕೊಟ್ಟ ಹೇಳಿಕೆಯೊಂದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕನ್ನಡದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ತನ್ನ ಹೇಳಿಕೆಯಿಂದಲೇ ಪೊಲೀಸ್ ಠಾಣೆಯ ಮೆಟ್ಟಿಲೇರುವಂತಹ ಸಂದರ್ಭ ಕೂಡ ಒದಗಿಬಂದಿತ್ತು. ಆ ಬಳಿಕ ವೇದಿಕೆ ಮೇಲೆ ಕಾಣಿಸಿಕೊಳ್ಳದ ಹಂಸಲೇಖ ಹಿರಿಯ ಸಾಹಿತಿಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಅವರ 'ಯರೆಬೇವು' ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ, ಡೆಮೊಕ್ರಸಿ ಹಾಗೂ ಸಿದ್ಧರಾಮಯ್ಯ ಅವರ ಬಗ್ಗೆ ಮಾತಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾರ್ಯಗಳನ್ನು ಮನಸಾರೆ ಹೊಗಳಿದ್ದಾರೆ. ಕರ್ನಾಟಕಕ್ಕೆ ಸಿದ್ಧರಾಮಯ್ಯ ನೀಡಿದ ಕೊಡುಗೆಗಳ ಬಗ್ಗೆ ವೇದಿಕೆ ಮೇಲೆ ಮಾತಾಡಿದ್ದಾರೆ. ಮತ್ತೆ ಈ ರಾಜ್ಯಕ್ಕೆ ಸಿದ್ದರಾಮ್ಯ ಮುಖ್ಯಮಂತ್ರಿ ಆಗಬೇಕು ಅಂತ ಹಂಸಲೇಖ ಹೇಳಿದ್ದಾರೆ.

ಹಾಲಿನ ಮುಖ್ಯಮಂತ್ರಿ ಮತ್ತೆ ಸಿಎಂ ಆಗಲಿ
'ಯರೆಬೇವು' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಕರ್ನಾಟಕ ರಾಜ್ಯದ ಮಕ್ಕಳಿಗೆ ಹಾಲು ನೀಡಿದ ಮುಖ್ಯಮಂತ್ರಿ ಅಂದರೆ ಸಿದ್ದರಾಮಯ್ಯ. ಹಾಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಈ ರಾಜ್ಯ ಸಿಎಂ ಆಗಲಿ ಎಂದು ಹಂಸಲೇಖ ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ನೀಡಿದ ಅನ್ನಭಾಗ್ಯ ಯೋಜನೆ, ದೇಶಿ ಶಾಲೆಗಳಿಗೂ ನೆರವು ನೀಡಿದ ಬಗ್ಗೆ ಹಂಸಲೇಖ ವೇದಿಕೆ ಮೇಲೆ ಮಾತಾಡಿದ್ದಾರೆ.

ಡೆಮೊಕ್ರಸಿಯನ್ನು ತಂದುಕೊಡಲಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯಗೆ ಶರಣರ ಪರಂಪರೆ ಬಗ್ಗೆ ಅರಿವಿದೆ. ಹೀಗಾಗಿ "ಈ ಧರ್ಮೋಕ್ರಸಿಯನ್ನು ಪಕ್ಕಕ್ಕೆ ಸರಿಸಿ, ಡೆಮೊಕ್ರಸಿಯನ್ನು ತಂದುಕೊಡಲಿ. ಹಾಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಾಡನ್ನು ಮತ್ತೆ ಹಾಲಾಗಿಸಲಿ" ಎಂದು ನಾದಬ್ರಹ್ಮ ಹಂಸಲೇಖ ವೇದಿಕೆ ಮೇಲೆ ಹೇಳಿಕೆ ಕೊಟ್ಟಿದ್ದಾರೆ. ಇದೇ ವೇಳೆ ವಿವಾದದ ಹೇಳಿಕೆ ನೀಡಿದಾಗ, ಹೀಗೆಲ್ಲಾ ಆಗುತ್ತೆ ಎಂದು ನನಗೆ ಗೊತ್ತಿರಲಿಲ್ಲ. ಆಗ ನನ್ನ ಬೆಂಬಲಕ್ಕೆ ನಿಂತಿದ್ದು, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ. ಸಾರವನ್ನು ವೃದ್ಧಿಸುವ ಅಮೃತವರ್ಷಿಣಿ ಎಸ್ಜಿಎಸ್ ಅವರಿಗೆ 100 ವರ್ಷ ತುಂಬಲಿ." ಎಂದು ವಿವಾದದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಹಂಸಲೇಖ ಕೊಟ್ಟ ಹೇಳಿಕೆ ಅಪರಾಧ ಹೇಗೆ?
ಇದೇ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಭಾಗವಹಿಸಿದ್ದರು. ಈ ವೇಳೆ ಹಂಸಲೇಖ ಪೇಜಾವರ ಶ್ರೀಗಳ ಬಗ್ಗೆ ಈ ಹಿಂದೆ ಕೊಟ್ಟಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಹಂಸಲೇಖ ಭಾರಿ ಅಪರಾಧದ ಸ್ಟೆಟ್ಮೆಂಟ್ ಕೊಟ್ಟಿದ್ರಾ? ವಾಸ್ತವಿಕ ನೆಲೆಗಟ್ಟಿನಲ್ಲಿ ಒಂದು ಸ್ಟೆಟ್ಮೆಂಟ್ ಕೊಟ್ಟಿದ್ದರು. ಅದಕ್ಕೇನು ದೊಡ್ಡ ರಂಪ, ಕ್ರಿಮಿನಲ್ ಕೇಸ್ ಹಾಕಿದ್ದರು. ಅದ್ಯಾವ ಸೆಕ್ಷನ್ನಲ್ಲಿ ಬರುತ್ತದೋ ನನಗಂತೂ ಗೊತ್ತಿಲ್ಲ. 295 ಯಾವುದಕ್ಕೆ ಬಳಸಬೇಕೋ ಅದಕ್ಕೆ ಬಳಸಲ್ಲ." ಎಂದು ಸಿದ್ದರಾಮಯ್ಯ ನಾದಬ್ರಹ್ಮ ಹಂಸಲೇಖರನ್ನು ಬೆಂಬಲಿಸಿದ್ದಾರೆ.

ಹಂಸಲೇಖ ವಚನ ಸಾಹಿತ್ಯ ಪಾಠ
"ವಚನಗಳ ಬುತ್ತಿಯನ್ನು ಕಟ್ಟಿಕೊಂಡನು. ಜೀವನದ ಪಯಣದಲ್ಲಿ ಬುತ್ತಿ ಬಿಚ್ಚಿಡಲಿಲ್ಲ. ಡೆಮೊಕ್ರಸಿಯ ಹಸಿವು ಇಂಗಿಸಿಕೊಂಡಿದ್ದಾನೆ. ಲಿಟರಸಿಯ ಮಹಾ ರುಚಿಯನ್ನು ಕಂಡುಕೊಳ್ಳುತ್ತಾನೆ. ಮರ್ಸಿ(ದಯೆ) ಮುರ್ಸಿ ಮುನ್ನುಗುತ್ತಾನೆ. ವಚನಗಳು ನಮ್ಮ ಆತ್ಮ ಆಗಿದ್ದರೆ, ನಮ್ಮ ಆತ್ಮ ವಚನಾತ್ಮವಾಗಿದ್ದರೆ, ಈ ಭಾರತ ಡೆಮೊಕ್ರಸಿಯಲ್ಲೇ ಬದುಕುತ್ತೆ ಎನ್ನುವುದಕ್ಕೆ ಈ ಪುಸ್ತಕ ಬರೆದಿದ್ದಾರೆ." ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರ ಪುಸ್ತಕದ ಬಗ್ಗೆ ಹಂಸಲೇಖ ಮಾತಾಡಿದ್ದಾರೆ.


Click it and Unblock the Notifications











