ಸತ್ಯಾನಂದ ಚಿತ್ರಕ್ಕೆ ಕೋರ್ಟ್ ಆರೆಂಜ್ ಸಿಗ್ನಲ್!

ಬಹುತೇಕ ನಿತ್ಯಾನಂದನನ್ನೇ ಹೋಲುವಂಥ ಪಾತ್ರ ಸೃಷ್ಟಿಸಿ ನಟ ರವಿಚೇತನ್ ಎಂಬ ಕಲಾವಿದನಿಗೆ ಕಾವಿ ತೊಡಿಸಲಾಗಿತ್ತು. ಚಿತ್ರೀಕರಣವೆಲ್ಲ ಮುಗಿದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದರೂ, ಸತ್ಯಾನಂದನಿಗೆ ಬೆಳ್ಳಿಪರದೆ ಸ್ಪರ್ಶಿಸುವ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ. ಯಾಕೆಂದರೆ ಈ ಚಿತ್ರದ ಮೂಲಕ ನಿತ್ಯಾನಂದ ಸ್ವಾಮಿಗಳ ಕೀರ್ತಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿ ನಿತ್ಯಾನಂದನ ಭಕ್ತರೊಬ್ಬರು ಹೈಕೋರ್ಟ್ ಮೆಟ್ಟಲೇರಿದ್ದಾರೆ.
ಹಾಗಾಗಿ ಸತ್ಯಾನಂದ ಸಮಸ್ಯೆ ಬಗೆಹರಿಸಿಕೊಳ್ಳದೆ ಬಿಡುಗಡೆ ಕಾಣುವಂತಿಲ್ಲ. ಈ ಆದೇಶ ಪ್ರಶ್ನಿಸಿ ನಿರ್ಮಾಪಕ ಮದನ್ ಪಟೇಲ್ ಹೈಕೋರ್ಟ್ ಗೆ ಮೇಲ್ಮನನವಿ ಸಲ್ಲಿಸಿದ್ದರು. ನಿತ್ಯಾನಂದ ಸ್ವಾಮಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೋದು ಅವರ ವಾದ. ಹಾಗಾಗಿ ಬಿಡುಗಡೆಗೆ ಕೋರ್ಟ್ ಆದೇಶ ನೀಡಬೇಕು ಎಂದು ಕೋರಿದ್ದರು ಮದನ್.
'ಸತ್ಯಾನಂದ' ಚಿತ್ರ ಸೆನ್ಸಾರ್ ಮಾಡಿಸಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು ಎಚ್ ಜಿ ರಮೇಶ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಹಾಗಾಗಿ ಸತ್ಯಾನಂದ ಸೆನ್ಸಾರ್ ಅಧಿಕಾರಿಗಳ ಮುಂದೆ ಪ್ರದರ್ಶನಕ್ಕೆ ಬರಲಿದ್ದಾನೆ. ಆದರೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದರೂ ಕೂಡಾ ಮದನ್ ಪಟೇಲ್ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮಾಡುವಂತಿಲ್ಲ.
ತಾನು ಮುಂದಿನ ಆದೇಶ ನೀಡುವವರೆಗೂ 'ಸತ್ಯಾನಂದ' ಚಿತ್ರವನ್ನು ಬಿಡುಗಡೆ ಮಾಡಕೂಡದು ಅಂತಲೂ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಜೊತೆಗೆ ನಿತ್ಯಾನಂದನ ಕಡೆಯವರಿಗೆ ಚಿತ್ರದ ಪೂರ್ವ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದೂ ಕೋರ್ಟ್ ಹೇಳಿದೆ. ಹೀಗಾಗಿ ಅರ್ಧ ಯುದ್ಧ ಗೆದ್ದು ಸಿಹಿ ತಿಂದಿದ್ದ ಮದನ್ ಪಟೇಲ್, ಇನ್ನರ್ಧಕ್ಕೆ ಕಡಿವಾಣ ಬಿದ್ದಿದ್ದರಿಂದ ಮುಖ ಬಾಡಿಸಿಕೊಂಡಿದ್ದಾರೆ.
ತಮ್ಮ ಚಿತ್ರ ಸ್ವಾಮಿ ನಿತ್ಯಾನಂದ ಜೀವನ ಚರಿತ್ರೆ ಕುರಿತಾದದ್ದಲ್ಲ. ಡೋಂಗಿ ಹಾಗೂ ಕಪಟ ಸ್ವಾಮಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಸ್ವಾಮಿ ನಿತ್ಯಾನಂದನ ಬಗ್ಗೆ ನಮ್ಮ ಬಳಿ ಹೆಚ್ಚಿನ ಮಾಹಿತಿಯೂ ಇಲ್ಲ ಎಂದಿದ್ದಾರೆ ಮದನ್ ಪಟೇಲ್. (ಏಜೆನ್ಸೀಸ್)


Click it and Unblock the Notifications











