ನಿಖಿಲ್- ರೇವತಿ ಮದುವೆ ಹೇಗೆ ನಡೆಯುತ್ತದೆ? ಕುಮಾರಸ್ವಾಮಿ ಹೇಳಿದ್ದೇನು?
ನಿಖಿಲ್ ಕುಮಾರ್ ಮತ್ತು ರೇವತಿ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಯಸಿದ್ದರು. ಅದಕ್ಕೆ ಭರ್ಜರಿ ಸಿದ್ಧತೆಯನ್ನೂ ನಡೆಸಿದ್ದರು. ರಾಮನಗರ-ಚನ್ನಪಟ್ಟಣ ನಡುವಿನ ಜಾನಪದ ಲೋಕದಲ್ಲಿ ಮದುವೆ ನಡೆಸಲು ತೀರ್ಮಾನಿಸಲಾಗಿತ್ತು. ಅದಕ್ಕೆ ಬೃಹತ್ ಮೈದಾನದಲ್ಲಿ ಮಂಟಪವನ್ನು ತಯಾರಿಸುವ ಕಾರ್ಯ ನಡೆದಿತ್ತು. ಆದರೆ ಎಲ್ಲ ಲೆಕ್ಕಾಚಾರ ತಲೆ ಕೆಳಗಾಗಿದೆ.
ಕೊರೊನಾ ವೈರಸ್ ಸೋಂಕಿನ ಭೀತಿ ಎದುರಾದ ಹಿನ್ನೆಲೆಯಲ್ಲಿ ಮೊದಲು ಮದುವೆಯನ್ನು ಜಾನಪದ ಲೋಕದ ಬದಲು ಬೆಂಗಳೂರಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ನಿಗದಿ ಮಾಡಿದ ಸ್ಥಳದಲ್ಲಿಯೇ ಮದುವೆ ಮಾಡಿದರೆ ರಾಮನಗರ, ಚನ್ನಪಟ್ಟಣ, ಮಂಡ್ಯ ಮುಂತಾದ ಜೆಡಿಎಸ್ ಪ್ರಭಾವ ಹೆಚ್ಚಿರುವ ಸ್ಥಳಗಳಿಂದ ಅಧಿಕ ಸಂಖ್ಯೆಯಿಂದ ಜನರು ಆಗಮಿಸುವ ಸಾಧ್ಯತೆ ಇತ್ತು. ಈ ಭಾಗದಲ್ಲಿ ಮದುವೆ ಆಯೋಜನೆ ಮಾಡಿದ್ದರ ಉದ್ದೇಶವೂ ಅದೇ ಆಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಮದುವೆ ನೆರವೇರಿಸುವುದು ಕಷ್ಟ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ನಿಗದಿತ ದಿನದಂದೇ ಮದುವೆ ನಡೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಮುಂದೆ ಓದಿ

ಮದುವೆ ಮುಂದೂಡುವುದಿಲ್ಲ
ಮೊದಲೇ ನಿಗದಿಪಡಿಸಿದಂತೆ ಏಪ್ರಿಲ್ 17ರಂದೇ ನಿಖಿಲ್ ಕುಮಾರ್ ಮತ್ತು ರೇವತಿ ಮದುವೆ ನಡೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಅದ್ಧೂರಿಯಾಗಿ ನಡೆಸಲು ಉದ್ದೇಶಿಸಿದ್ದ ಮದುವೆ ಸಮಾರಂಭದ ಸ್ಥಳ ಬದಲಾದರೂ ಅದನ್ನು ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ಕುಟುಂಬದರಷ್ಟೇ ಬಾಕಿ
ಏ. 17ಕ್ಕೆ ನಿಗದಿಪಡಿಸಿರುವ ಮುಹೂರ್ತದಲ್ಲಿಯೇ ಮದುವೆ ನಡೆಯಲಿದೆ. ಆದರೆ ಅತ್ಯಂತ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಸಮಾರಂಭದಲ್ಲಿ ಕುಮಾರಸ್ವಾಮಿ ಕುಟುಂಬದವರು ಹಾಗೂ ಅವರ ಬೀಗರಾದ ಎಂ. ಕೃಷ್ಣಪ್ಪ ಅವರ ಕುಟುಂಬದವರು ಮಾತ್ರ ಪಾಲ್ಗೊಳ್ಳಲಿದ್ದಾರೆ.

ನಿಶ್ಚಯವಾದ ದಿನ ಒಳ್ಳೆಯದಿದೆ
ಇಂತಹ ಪರಿಸ್ಥಿತಿಯಲ್ಲಿ ಮದುವೆಯನ್ನು ಅದ್ಧೂರಿಯಾಗಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಮನೆ ಅಥವಾ ಅವರ ಮನೆಯಲ್ಲಿ ಸರಳವಾಗಿ ಮದುವೆ ಮಾಡುತ್ತೇವೆ. ಮದುವೆ ನಿಶ್ಚಯವಾಗಿರುವ ದಿನ ಒಳ್ಳೆಯದಿದೆ. ಹೀಗಾಗಿ ಅದನ್ನು ಮುಂದೆ ಹಾಕಲು ಸಾಧ್ಯವಿಲ್ಲ. ಮುಂದೆ ಎಲ್ಲವೂ ಸರಿಯಾದ ಬಳಿಕ ಅವಕಾಶ ಸಿಕ್ಕರೆ ರಾಮನಗರದಲ್ಲಿ ಕಾರ್ಯಕ್ರಮ ಆಯೋಜಿಸುತ್ತೇನೆ ಎಂದು ತಿಳಿಸಿದರು.

ತಯಾರಿಗಳೆಲ್ಲವೂ ವ್ಯರ್ಥ
ರಾಮನಗರದಲ್ಲಿ ವಿಜೃಂಭಣೆಯಿಂದ ಮದುವೆ ನಡೆಸಲು ಸಕಲ ತಯಾರಿ ನಡೆಸಲಾಗಿತ್ತು. ವಾಸ್ತು ಪ್ರಕಾರ ಕಲ್ಯಾಣ ಮಂಟಪ ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಸುಮಾರು ಎಂಟು ಲಕ್ಷ ಜನರಿಗೆ ಮದುವೆ ಆಮಂತ್ರಣ ಪತ್ರ ತಯಾರಾಗಿತ್ತು. ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುತ್ತಿರುವ ಈ ಜಿಲ್ಲೆಗಳ ಜನರಿಗೆ ಊಟ ಹಾಕಿಸುವ ಕನಸು ಕಂಡಿದ್ದರು. ಆದರೆ ಈಗ ಅವರ ತಯಾರಿಗಳೆಲ್ಲವೂ ವ್ಯರ್ಥವಾಗಿದೆ.


Click it and Unblock the Notifications











