'ಛತ್ರಪತಿ' ಚಿತ್ರದ ವಿರುದ್ಧ ಸಿಡಿದೆದ್ದ ಶಿವಾಜಿ ಯುವಸೇನೆ
ಕನ್ನಡದ 'ಛತ್ರಪತಿ' ಚಿತ್ರದ ವಿರುದ್ಧ ಹಿಂದೂ ಶಿವಾಜಿ ಯುವಸೇನೆ ಸಿಡಿದೆದ್ದಿದೆ. ಇದಕ್ಕೆ ಕಾರಣವಾಗಿರುವುದು ಚಿತ್ರದ ಅಡಿಬರಹ. ಛತ್ರಪತಿ, 'ಅಂಡರ್ ವರ್ಲ್ಡ್ ಗೆ ಅಧಿಪತಿ' ಎಂಬ ಟ್ಯಾಗ್ ಲೈನ್ ಶಿವಾಜಿ ಯುವಸೇನೆಯ ಕೆಂಗಣ್ಣಿಗೆ ಗುರಿಯಾಗಿದೆ.
ಈ ಸಂಬಂಧ ಹಿಂದೂ ಶಿವಾಜಿ ಯುವಸೇನೆಯ ಕಾರ್ಯಕರ್ತರು ಗುರುವಾರ (ಡಿ.5) ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಕೂಡಲೆ ಚಿತ್ರದ ನಿರ್ಮಾಪಕ ದಿನೇಶ್ ಗಾಂಧಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿತು.

ದೇಶದ ದಾಸ್ಯಮುಕ್ತಿಗಾಗಿ, ಸ್ವಾಭಿಮಾನಿ ಸ್ವತಂತ್ರ ಜೀವನಕ್ಕಾಗಿ, ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಮರ್ದ್ ಮರಾಠಾ ನಮ್ಮೆಲ್ಲರ ಹೆಮ್ಮೆಯ ವೀರ ಶಿವಾಜಿ. ಅಂಥಹ ಮಹಾನ್ ತ್ಯಾಗಜೀವಿಯನ್ನು ಅಂಡರ್ ವರ್ಲ್ಡ್ ಗೆ ಡಾನ್ ಎಂದು ಕರೆದಿರುವುದು ಅಕ್ಷ್ಯಮ್ಯ ಅಪರಾಧ ಎಂದು ಶಿವಾಜಿ ಯುವಸೇನೆ ಚಿತ್ರದ ನಿರ್ಮಾಪಕರ ವಿರುದ್ಧ ಸಿಡಿದೆದ್ದಿದೆ.
ತೆಲುಗಿನ ಛತ್ರಪತಿ ಚಿತ್ರದ ರೀಮೇಕ್ ಇದಾಗಿದೆ. ಮೂಲ ಚಿತ್ರವನ್ನು ಎಸ್.ಎಸ್.ರಾಜಮೌಳಿ ನಿರ್ದೇಶಿಸಿದ್ದರು. ಕನ್ನಡದ ಛತ್ರಪತಿ ಚಿತ್ರಕ್ಕೆ ನಿರ್ಮಾಣದ ಜೊತೆಗೆ ದಿನೇಶ್ ಗಾಂಧಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಾತ್ರವರ್ಗದ ಬಗ್ಗೆ ಸಿದ್ಧಾಂತ್ (ಎ.ಕೆ.56), ಪ್ರಿಯದರ್ಶಿನಿ, ಭಾನುಪ್ರಿಯ, ರಚನಾ ಮೌರ್ಯ ಮುಂತಾದವರಿದ್ದಾರೆ.
ಎ.ಆರ್.ಬಾಬು ಅವರೊಟ್ಟಿಗೆ ಚಿತ್ರದ ನಿರ್ದೇಶಕರೂ ದಿನೇಶ್ಗಾಂಧಿ ಸಂಭಾಷಣೆಯನ್ನೂ ಬರೆದಿದ್ದಾರೆ. ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ದಾಸರಿಸೀನು ಛಾಯಾಗ್ರಹಣವಿದೆ. ಎಸ್.ಮನೋಹರ್ ಸಂಕಲನ, ಇಸ್ಮಾಯಿಲ್ ಕಲಾ ನಿರ್ದೇಶನ ಹಾಗೂ ಪ್ರದೀಪ್ ಅಂಥೋನಿ ನೃತ್ಯ ನಿರ್ದೇಶನ 'ಛತ್ರಪತಿ' ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











