ಗೋಲ್ಡನ್ ಗರ್ಲ್ ರಮ್ಯಾ ಮೇಲೆ ಹೆಜ್ಜೇನು ದಾಳಿ
ಗೊಲ್ಡನ್ ಗರ್ಲ್ ರಮ್ಯಾ ಅವರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸೋಮವಾರ ನಡೆದಿದೆ. 'ನೀರ್ ದೋಸೆ' ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅವರ ಮೇಲೆ ಇದ್ದಕ್ಕಿದ್ದಂತೆ ಜೇನುಹುಳುಗಳು ದಾಳಿ ಮಾಡಿವೆ.
ರಮ್ಯಾ ಅವರು ಕೂಡಲೆ ಜೇನುಹುಳುಗಳಿಂದ ತಪ್ಪಿಸಿಕೊಂಡು ತಮ್ಮ ಕಾರ್ವಾನ್ ಸೇರಿಕೊಂಡು ಬಚಾವಾಗಿದ್ದಾರೆ. ರಮ್ಯಾ ಅವರ ಸಹಾಯಕರಿಗೆ ಮಾತ್ರ ಹೆಜ್ಜೇನು ಕುಟುಕಿದೆ. ಕೆಲವರು ಅಲ್ಲೇ ಇದ್ದ ಈಜುಕೊಳಕ್ಕೆ ಜಿಗಿದು ಜೇನುಹುಳುಗಳ ಕಡಿತದಿಂದ ಪಾರಾದರು.
ವಿಜಯ ಪ್ರಕಾಶ್ ನಿರ್ದೇಶಿಸುತ್ತಿರುವ ನೀರ್ ದೋಸೆ ಚಿತ್ರೀಕರಣ ರಾಜರಾಜೇಶ್ವರಿ ನಗರದ ಬೆಸ್ಟ್ ಕ್ಲಬ್ ನಲ್ಲಿ ನಡೆಯುತ್ತಿತ್ತು. ಹೆಜ್ಜೇನು ದಾಳಿಗೆ ಸಿಕ್ಕಿದವರನ್ನೇ ಅಲ್ಲೇ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಒಟ್ಟು ಆರು ಮಂದಿಯನ್ನು ಚೆನ್ನಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.ಜೇನು ದಾಳಿಯಿಂದ ತತ್ತರಿಸಿದ 'ನೀರ್ ದೋಸೆ' ಚಿತ್ರತಂಡ ಶೂಟಿಂಗ್ ಸ್ಪಾಟನ್ನು ಬೇರೆ ಕಡೆಗೆ ಬದಲಾಯಿಸಿದೆ. ಈ ಹೆಜ್ಜೇನುಗಳಿಗೆ 'ನೀರ್ ದೋಸೆ' ಮೇಲೆ ಇಷ್ಟವಾಯ್ತೋ ಅಥವಾ ರಮ್ಯಾ ಅವರ ಮನಸ್ಸಾಯಿತೋ ಯಾರಿಗೆ ಗೊತ್ತು.
ನವರಸ ನಾಯಕ ಜಗ್ಗೇಶ್ ನಾಯಕ ನಟರಾಗಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು ಸುತ್ತಮುತ್ತ ನಡೆಯಲಿದೆ. ಚಿತ್ರದ ನಿರ್ಮಾಪಕ ಸುಧೀಂದ್ರ. ಚಿತ್ರದ ಪಾತ್ರವರ್ಗದಲ್ಲಿ ದತ್ತಣ್ಣ ಹಾಗೂ ಭಾವನಾ ಅವರು ಇದ್ದಾರೆ. ಅಂದಹಾಗೆ ದತ್ತಣ್ಣ ಅವರು ಚಿತ್ರೀಕರಣದಲ್ಲಿದ್ದರಂತೆ, ಅವರು ಜೇನು ದಾಳಿಯಿಂದ ಪಾರಾಗಿದ್ದಾರೆ.
ಈ ಹಿಂದೊಮ್ಮೆ ರಾಗಿಣಿ ದ್ವಿವೇದಿ ಅವರ ಮೇಲೂ ಜೇನು ದಾಳಿ ಮಾಡಿತ್ತು. ಆದರೆ ಅವರು ಹೆಜ್ಜೇನುಗಳ ದಾಳಿಯಿಂದ ಪಾರಾಗಿ ಸೇಫ್ ಆಗಿ ಬೆಂಗಳೂರು ತಲುಪಿದ್ದರು. ಈ ಘಟನೆ ನಡೆದದ್ದು ಕೋಲಾರದಲ್ಲಿ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. (ಏಜೆನ್ಸೀಸ್)


Click it and Unblock the Notifications












