ದರ್ಶನ್ ಮೇಲೆ ಚಪ್ಪಲಿ ಎಸೆತ: ಡಿ-ಬಾಸ್ ಬೆಂಬಲಕ್ಕೆ ನಿಂತ ನಟರ್ಯಾರು? ಏನು ಹೇಳಿದರು?
ಹೊಸಪೇಟೆಯಲ್ಲಿ ತಮ್ಮ ಹೊಸ ಸಿನಿಮಾ 'ಕ್ರಾಂತಿ'ಯ ಪ್ರಚಾರಕ್ಕೆ ತೆರಳಿದ್ದ ವೇಳೆ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ.
ನಟ ದರ್ಶನ್ ಮೇಲೆ ಚಪ್ಪಲಿ ಎಸದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಚಪ್ಪಲಿ ಎಸೆದಿದ್ದು ಯಾರು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಅಪ್ಪು ಅಭಿಮಾನಿಗಳು ಚಪ್ಪಲಿ ಎಸೆದಿದ್ದಾರೆ ಎಂದು ಕೆಲವರು, ರಾಜಕಾರಣಿಯ ಕೆಲವು ಬೆಂಬಲಿಗರು ಹೀಗೆ ಮಾಡಿದ್ದಾರೆ ಎಂದು ಇನ್ನು ಕೆಲವರು ಮಾತನಾಡುತ್ತಿದ್ದಾರೆ.
ಇವುಗಳ ನಡುವೆ ದರ್ಶನ್ ಬೆಂಬಲಕ್ಕೆ ಹಲವು ಚಿತ್ರರಂಗದ ನಟ-ನಟಿಯರು ಧಾವಿಸಿದ್ದು, ದರ್ಶನ್ ಮೇಲೆ ಚಪ್ಪಲಿ ಎಸೆದ ಕೃತ್ಯವನ್ನು ಖಂಡಿಸಿದ್ದಾರೆ. ಯಾವ ನಟರು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ, ಏನೆಂದು ಟ್ವೀಟ್ ಮಾಡಿದ್ದಾರೆ ನೋಡೋಣ.

ಶಿವರಾಜ್ ಕುಮಾರ್ ವಿಡಿಯೋ ಸಂದೇಶ
ಘಟನೆ ಕುರಿತು ನಟ ಶಿವರಾಜ್ ಕುಮಾರ್ ಟ್ವೀಟ್ ಒಂದನ್ನು ಮಾಡಿದ್ದು, ''ನಿನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ ಅಭಿಮಾನದಿಂದ ಪ್ರೀತಿಯನ್ನು ತೋರಿ; ದ್ವೇಷ ಅಗೌರವವನ್ನಲ್ಲ'' ಎಂದಿದ್ದಾರೆ. ಇದರ ಜೊತೆಗೆ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ.

ನಟ ಜಗ್ಗೇಶ್ ಟ್ವೀಟ್
''ನಟ ದರ್ಶನ್ರ ಮೇಲೆ ನಿನ್ನೆ ನಡೆದ ಘಟನೆ ತಪ್ಪು ಹಾಗು ಖಂಡನೀಯ. ದಯವಿಟ್ಟು ಕಲಾವಿದರನ್ನು ಹೀಗೆ ಅಪಮಾನ ಮಾಡದಿರಿ. ಕಲಾವಿದರಿಗೆ ಗೊತ್ತಿರುವುದು ಕಲಾಪ್ರೇಮಿಗಳ ಸಂತೋಷ ಪಡಿಸುವ ಕಾಯಕ ಮಾತ್ರ. ಎಲ್ಲಾ ಕಲಾವಿದರು ಶಾರದೆಯ ಮಕ್ಕಳು. ಅವರ ಮೇಲೆ ಪ್ರೀತಿ ಇರಲಿ ದ್ವೇಷ ಬೇಡ ನನ್ನ ವಿನಂತಿ. ದರ್ಶನ ಸ್ವಲ್ಪ ನೇರನುಡಿ ಮನಸ್ಸು ಮಗುವಂತೆ. ಧನ್ಯವಾದ'' ಎಂದಿದ್ದಾರೆ ಹಿರಿಯ ನಟ, ರಾಜಕಾರಣಿ ಜಗ್ಗೇಶ್.

ಅಭಿಮಾನ ಅತಿರೇಕ ಆಗದಿರಲಿ: ವಸಿಷ್ಠ ಸಿಂಹ
''ಅಭಿಮಾನ ಅತಿರೇಕ ಆಗದಿರಲಿ. ಯಾವುದೇ ಕಲಾವಿದನಿಗೆ ಅವಮಾನ ಮಾಡುವುದೆಂದರೆ ಕಲೆಗೆ ಅಗೌರವ ತೋರಿದಂತೆ. ಕಲಾಸೇವೆಯಲ್ಲಿರುವ ನಮ್ಮವರಿಗೆ ಅವಮಾನ ಮಾಡಿರುವುದು ಖಂಡನೀಯ. ಚಪ್ಪಲಿ ಎಸೆಯುವ ದುಷ್ಕೃತ್ಯ ನಮ್ಮ ಮಣ್ಣಿನ ಸಂಸ್ಕೃತಿಯೂ ಅಲ್ಲ ಕನ್ನಡತನಕ್ಕೆ ಶೋಭೆಯೂ ಅಲ್ಲ'' ಎಂದಿದ್ದಾರೆ ನಟ ವಸಿಷ್ಠ ಸಿಂಹ.

ಸತೀಶ್ ನೀನಾಸಂ ಹೇಳಿದ್ದೇನು?
ನಟ ಸತೀಶ್ ನೀನಾಸಂ ಸಹ ದರ್ಶನ್ ಪರವಾಗಿ ಸಂದೇಶ ಹಂಚಿಕೊಂಡಿದ್ದು, ''ಎತ್ತ ತಲುಪುತ್ತಿದ್ದೇವೆ ನಾವು? ಮನುಷ್ಯತ್ವವಿಲ್ಲದ ಪ್ರಪಂಚದ ಕಡೆಗಾ? ನಾವೆಲ್ಲರು ಒಂದೇ ಕುಲದವರು ಒಡೆದಾಡದಿರಿ.ನೀರು ಗಾಳಿ,ಅನ್ನ ಎಲ್ಲರಿಗೂ ಒಂದೇ. ಜಗತ್ತಿನ ಎಲ್ಲ ಕಲಾವಿದರು ಒಂದೇ. ಈ ರೀತಿ ದರ್ಶನ್ ಅವರ ಮೇಲೆ ಎಸೆದ ಎಸೆತ ಸರಿಯೇ? ಸಾಕು. ತಪ್ಪು ಮಾಡಿದವರು ಕ್ಷಮೆ ಕೇಳಿ ಮನುಷ್ಯರಾಗಿ. ಒಬ್ಬರಿಗೊಬ್ಬರು ನಮ್ಮ ನಮ್ಮಲ್ಲೆ ಕಿತ್ತಾಡೋದು ನಿಲ್ಲಿಸಿ. ಯಾರೋ ಒಬ್ಬರು ಮಾಡೋ ತಪ್ಪು ಎಲ್ಲರಿಗು ಅವಮಾನ. ನಾವು ನಿಮ್ಮೊಟ್ಟಿಗಿದ್ದೇವೆ ಸಾರ್'' ಎಂದಿದ್ದಾರೆ.

ವಿನೋದ್ ಪ್ರಭಾಕರ್ ಸಂದೇಶ
''ಬಾಸ್ ನಿಮ್ಮ ಸಹಸ್ರ ಅಭಿಮಾನಿಗಳಲ್ಲಿ ನಾನೂ ಒಬ್ಬ. ನಿನ್ನೆ ಹೊಸಪೇಟೆಯಲ್ಲಿ ನಡೆದ ಘಟನೆ ಮನಸ್ಸಿಗೆ ಬೇಸರ ಮೂಡಿಸಿದೆ. ಆದರೆ ಬಾಸ್ ನೀವು ಹೇಳಿದ ಮಾತು, ''ಪರ್ವಾಗಿಲ್ಲ ಚಿನ್ನ ಈ ಥರಹದ್ದು ಎಷ್ಟೋ ನೋಡಿದ್ದೀನಿ ಬಿಡ್ರೊ'' ಎಂದು ನಗುತ್ತಾ ಅಭಿಮಾನಿಗಳಿಗೆ ಸಮಾಧಾನ ನಿಮ್ಮ ಮೇಲಿನ ಗೌರವವನ್ನು ಸಾವಿರ ಹೆಚ್ಚು ಮಾಡಿದೆ. ನನ್ನ ಕೊನೆಯ ಉಸಿರು ಇರುವವರೆಗೆ ನಿಮ್ಮೊಂದಿಗೆ'' ಎಂದಿದ್ದಾರೆ ನಟ ವಿನೋದ್ ಪ್ರಭಾಕರ್.

25 ವರ್ಷಗಳಿಂದಲೂ ಮನೊರಂಜಿಸುತ್ತಿದ್ದಾರೆ: ಅಮೃತಾ ಐಯ್ಯಂಗಾರ್
''ಎಂಥಹಾ ಸನ್ನಿವೇಶದಲ್ಲಿಯೇ ಆದರು ಯಾವುದೇ ಕಲಾವಿದನಿಗೆ ಈ ರೀತಿಯ ಅಗೌರವ ಮಾಡಬಾರದು. ನಟ ದರ್ಶನ್, ಕರ್ನಾಟಕ ಮತ್ತು ಹೊರರಾಜ್ಯದವರನ್ನು ಸಹ ಸತತ 25 ವರ್ಷಗಳಿಂದಲೂ ಮನೊರಂಜಿಸುತ್ತಾ ಬಂದಿದ್ದಾರೆ. ಅವರೊಬ್ಬ ಲೋಕೋಪಕಾರಿ ವ್ಯಕ್ತಿ, ಅದ್ಭುತವಾದ ಪ್ರಾಣಿ ಪ್ರೇಮಿ ಮತ್ತು ಸ್ಟಾರ್ಡಂ ಮೀರಿದ ವ್ಯಕ್ತಿ. ನಾವು ನಿಮ್ಮೊಂದಿಗಿದ್ದೇವೆ ಸರ್'' ಎಂದು ದರ್ಶನ್ ಅವರನ್ನು ಹೊಗಳಿದ್ದಾರೆ ನಟಿ ಅಮೃತಾ ಐಯ್ಯಂಗಾರ್.

ಅಪ್ಪು ಅವರ ಹೆಸರಿನ ಗುರಾಣಿಯ ಬಳಕೆ ಎಂದ ಕವಿರಾಜ್
''ಚಪ್ಪಲಿ ಎಸೆದ ಕೈ ಒಂದಾದರೆ ಚಪ್ಪಾಳೆ ಹೊಡೆದು ಪ್ರೀತಿಸುವ ಮನಸುಗಳು ಕೋಟಿಗಟ್ಟಲೇ ಅದು ಕೇವಲ ಹುಚ್ಚು ಅಭಿಮಾನಿಗಳ ಕೃತ್ಯವಲ್ಲ. ಯಾವತ್ತೂ ಯಾರಿಗು ಕೇಡು ಬಯಸದ ಅಪ್ಪು ಅವರ ಹೆಸರಿನ ಗುರಾಣಿ ಹಿಡಿದು ಕುತಂತ್ರಿಗಳು ನಡೆಸಿದ ಹುನ್ನಾರ. ಇಂತಹಾ ದುಷ್ಟಶಕ್ತಿಗಳ ಅಟ್ಟಹಾಸ ಇತ್ತೀಚೆಗೆ ಹೆಚ್ಚಾಗಿದೆ. ಕಡಿವಾಣ ಹಾಕದೇ ಹೋದರೆ ಇಂತಹಾ ಅಹಿತಕರ ಘಟನೆಗಳನ್ನು ಎಲ್ಲರು ಎದುರಿಸಬೇಕಾದೀತು'' ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ ನಟ ಕವಿರಾಜ್. ಅದೇ ಪೋಸ್ಟ್ನ ಕಮೆಂಟ್ನಲ್ಲಿ ''ಅಪ್ಪು ಅವರ ಅಭಿಮಾನಿಗಳ ಕೃತ್ಯ ಅಲ್ಲಾ ಅಂತಲೇ ನಾನು ಪೋಸ್ಟ್ ಹಾಕಿರೋದು'' ಎಂದಿದ್ದಾರೆ ಸಹ.


Click it and Unblock the Notifications











