ಆರ್ ಆರ್ ನಗರದಲ್ಲಿ ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಸ್ಪರ್ಧೆ
ಇತ್ತೀಚಿಗಷ್ಟೆ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ವಿರುದ್ಧ ಗುಡುಗಿದ್ದ ಹುಚ್ಚ ವೆಂಕಟ್ ಈಗ ನೇರವಾಗಿ ಅವರ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ. ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ಹುಚ್ಚ ವೆಂಕಟ್ ತಿಳಿಸಿದ್ದಾರೆ. ಈ ಬಗ್ಗೆ ಇಂದು ಮಧ್ಯಾಹ್ನ ಅವರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಈ ಹಿಂದೆ ಶಾಸಕ ಮುನಿರತ್ನ ತಮ್ಮ ಕ್ಷೇತ್ರದ ಮತದಾರರಿಗೆ ಕುಕ್ಕರ್ ಹಂಚುತ್ತಿದ್ದಾರೆ ಎಂದು ಹುಚ್ಚ ವೆಂಕಟ್ ಆರೋಪ ಮಾಡಿದ್ದರು. ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿ ಅವರು ಮತದಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಗರಂ ಆಗಿದ್ದರು. ಆದರೆ ಇದೀಗ ಮುನಿರತ್ನ ವಿರುದ್ಧ ಡೈರೆಕ್ಟ್ ಆಗಿ ಹುಚ್ಚ ವೆಂಕಟ್ ಯುದ್ಧ ಸಾರಿದ್ದಾರೆ.
ಕೆಲ ದಿನದ ಹಿಂದೆ ಮಂಗಳೂರಿನಲ್ಲಿ ಮಾತನಾಡಿದ್ದ ಹುಚ್ಚ ವೆಂಕಟ್ ಒಂದಲ್ಲ ಒಂದು ದಿನ ನಾನೂ ಪ್ರಧಾನ ಮಂತ್ರಿ ಆಗುತ್ತೇನೆ ಎಂಬ ಹೇಳಿಕೆ ನೀಡಿದ್ದರು. ಜೊತೆಗೆ ಇಂದಿರಾ ಕ್ಯಾಂಟೀನ್ ಐಡಿಯಾ ತಪ್ಪು, ತೆರಿಗೆದಾರರ ಹಣವನ್ನು ಇದಕ್ಕೆ ಬಳಸಲಾಗುತ್ತಿದೆ ಎಂದಿದ್ದರು. ಪದೇ ಪದೇ ರಾಜಕೀಯದ ಬಗ್ಗೆ ಮಾತನಾಡಿದ್ದ ಹುಚ್ಚ ವೆಂಕಟ್ ಈಗ ಅಕಾಡಕ್ಕೆ ಇಳಿಯಲಿದ್ದಾರೆ. ಯಾವುದೇ ಪಕ್ಷಕ್ಕೆ ಸೇರದೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲಿದ್ದಾರೆ.

ಇನ್ನು ಇಷ್ಟು ದಿನ ತನ್ನ ಹುಚ್ಚಾಟಗಳ ಮೂಲಕ ಸುದ್ದಿ ಮಾಡುತ್ತಿದ್ದ ಹುಚ್ಚ ವೆಂಕಟ್ ಈಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಇನ್ನೊಂದು ಕಡೆ ಜನರು ಹುಚ್ಚ ವೆಂಕಟ್ ಅವರನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಸಹ ಮೂಡುತ್ತದೆ.


Click it and Unblock the Notifications











