ಯಾರ್ರೀ ಹೇಳಿದ್ದು, ನಾನು ಬಿಎಸ್ವೈ ಪಕ್ಷ ಸೇರ್ತೀನೀಂತ?

ಶನಿವಾರದಂದು (ಡಿಸೆಂಬರ್ 8) ನಾನು ಯಡಿಯೂರಪ್ಪನವರನ್ನು ಭೇಟಿಯಾಗಿದ್ದೆ. ನನ್ನ ಮುಂದಿನ 'ಎಲೆಕ್ಷನ್' ಚಿತ್ರದ ಮಹೂರ್ತಕ್ಕೆ ಅವರನ್ನು ಆಹ್ವಾನಿಸಲು ಹೋಗಿದ್ದೆ. ಅದನ್ನು ತಪ್ಪಾಗಿ ಅರ್ಥೈಸಿ ನಾನು ಕೆಜೆಪಿ ಸೇರುತ್ತಿದ್ದೇನೆ ಎಂದು ಹೇಳಲಾಯಿತು.
ಯಡಿಯೂರಪ್ಪನವರ ಮಗಳು ಕೂಡಾ ನನಗೆ ಚೆನ್ನಾಗಿ ಪರಿಚಯ. ನಾನು ಕೆಜೆಪಿ ಸೇರುತ್ತಿದ್ದೇನೆ ಎನ್ನುವುದು ಸುಳ್ಳು ಸುದ್ದಿ ಎಂದು ಮಾಲಾಶ್ರೀ ಹೇಳಿದ್ದಾರೆ.
ಪೂಜಾ ಗಾಂಧಿ, ದೊಡ್ಡಣ್ಣ, ಮದನ್ ಪಟೇಲ್, ಶ್ರುತಿ ಮುಂತಾದವರು ಯಡಿಯೂರಪ್ಪನವರ ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇವರೆಲ್ಲರ ಜೊತೆ ಮಾಲಾಶ್ರೀ ಹೆಸರೂ ಕೂಡಾ ಸೇರ್ಪಡೆಯಾಗಿತ್ತು.
ಮಾಲಾಶ್ರೀ ಮುಖ್ಯ ಭೂಮಿಕೆಯಲ್ಲಿರುವ ಓಂ ಪ್ರಕಾಶ್ ರಾವ್ ನಿರ್ದೇಶನದ 'ಎಲೆಕ್ಷನ್' ಚಿತ್ರದ ಶೂಟಿಂಗ್ ಆರಂಭವಾಗಿದೆ. ಚುನಾವಣಾ ಆಯುಕ್ತರ ಪಾತ್ರದಲ್ಲಿ ಮಾಲಾಶ್ರೀ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ರಾಮು ನಿರ್ಮಾಪಕರು.
ರಾಮು ಎಂಟರ್ ಪ್ರೈಸಸ್ ಬ್ಯಾನರ್ ನ ಲಾಕಪ್ ಡೆತ್, ಎಕೆ 47, ಸಿಂಹದ ಮರಿ, ಕಲಾಸಿಪಾಳ್ಯ, ಕನ್ನಡದ ಕಿರಣ್ ಬೇಡಿ ಹಿಟ್ ಚಿತ್ರಗಳನ್ನು ಕೊಟ್ಟವರು ಓಂ.
ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಹಾಗೂ ಸಾಹಿತ್ಯ, ರಾಜೇಶ್ ಅವರ ಛಾಯಾಗ್ರಹಣವಿರುತ್ತದೆ. ಶ್ರೀನಿವಾಸಮೂರ್ತಿ, ಲೋಕನಾಥ್, ಮೈಕೋ ನಾಗರಾಜ್, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಶೋಭರಾಜ್ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ.


Click it and Unblock the Notifications











