ಮೊಮ್ಮಗನಲ್ಲಿ ಅಣ್ಣಾವ್ರನ್ನು ಕಂಡ ಅಭಿಮಾನಿಗಳು: ಭಾವುಕರಾದ ಯುವ ರಾಜ್ ಕುಮಾರ್
ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಕಾಲಿರಿಸಲು ವೇದಿಕೆ ಸಿದ್ಧವಾಗುತ್ತಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೆಯ ಮಗ ಯುವ ರಾಜ್ ಕುಮಾರ್ ಅವರ ಹೊಸ ಸಿನಿಮಾದ ತಯಾರಿ ಸಾಗುತ್ತಿದೆ. ರಾಜ್ ಕುಮಾರ್ ಅವರ ಜನ್ಮದಿನವಾದ ಏ. 24ರಂದು ಅವರ ಚೊಚ್ಚಲ ಚಿತ್ರದ ಪೋಸ್ಟರ್ ಲುಕ್ ಅನಾವರಣಗೊಂಡಿತ್ತು.
Recommended Video
ಉದ್ದನೆಯ ಭರ್ಜಿ ಹಿಡಿದ ಯುವ ರಾಜ್ ಕುಮಾರ್ ಅವರ ಲುಕ್ ಅಪಾರ ಪ್ರಶಂಸೆಗೆ ಒಳಗಾಗಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜತೆ ಸಹಾಯಕರಾಗಿ ಕೆಲಸ ಮಾಡಿದ್ದ ಪುನೀತ್ ರುದ್ರನಾಗ್ ಮೊದಲ ಬಾರಿಗೆ ಸ್ವತಂತ್ರವಾಗಿ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮಗೊಂಡಿಲ್ಲ. ಸದ್ಯಕ್ಕೆ 'ಯುವ 01' ಶೀರ್ಷಿಕೆ ಇರಿಸಲಾಗಿದೆ. ನಟ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಅನೇಕರು ಯುವ ರಾಜ್ಕುಮಾರ್ ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಅನೇಕರು ಯುವ ಅವರಲ್ಲಿ ರಾಜ್ ಕುಮಾರ್ ಅವರನ್ನೇ ಕಂಡಿದ್ದಾರೆ. ಅವರ ಪೋಸ್ಟರ್ಗೆ ಆರತಿ ಎತ್ತಿದ್ದಾರೆ. ಮುಂದೆ ಓದಿ...

ಕಿಚ್ಚ ಸುದೀಪ್ ಶುಭ ಹಾರೈಕೆ
ಯುವ ರಾಜ್ ಕುಮಾರ್ಗೆ ಶುಭ ಹಾರೈಸಿರುವ ಕಿಚ್ಚ ಸುದೀಪ್, ನಿಮ್ಮ ವೃತ್ತಿ ಬದುಕು ಅದ್ಭುತವಾಗಿರಲಿ. ಬೆಳೆಯಿರಿ ಮತ್ತು ಬೆಳಗಿರಿ ಎಂದು ತಮ್ಮದೇ ಶೈಲಿಯಲ್ಲಿ ಅವರು ಹರಸಿದ್ದಾರೆ. ಜನರ ಮೆಚ್ಚುಗೆಗಳಿಂದ ಪುಳಕಿತರಾದ ಯುವ ರಾಜ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪುಟ್ಟದೊಂದು ಭಾವುಕ ಬರಹ ಹಂಚಿಕೊಂಡಿದ್ದಾರೆ.

ಹೃದಯದಲ್ಲಿ ಬದುಕಲು ಶ್ರಮಿಸುತ್ತೇನೆ
'ನೀವು ನನ್ನ ಮೇಲೆ ಸುರಿಸಿದ ಪ್ರೀತಿ ಆಶೀರ್ವಾದಗಳ ಸುರಿಮಳೆಗೆ, ಧನ್ಯವಾದಗಳು ಸಾಕಾಗುವುದಿಲ್ಲ, ಜೀವನದುದ್ದಕ್ಕೂ ನುಡಿಯ ಸೇವಕನಾಗಿ ನಿಮ್ಮ ಹೃದಯದಲ್ಲಿ ಬದುಕಲು ಶ್ರಮಿಸುತ್ತೇನೆ...' ಎಂದು ಯುವ ರಾಜ್ ಕುಮಾರ್ ವಿನಯದಿಂದ ಹೇಳಿದ್ದಾರೆ.

ನಿಮ್ಮ ಮಡಿಲಿಗೆ ಹಾಕಿದ್ದೇವೆ
ಯುವ ರಾಜ್ ಕುಮಾರ್ ತಂದೆ ರಾಘವೇಂದ್ರ ರಾಜ್ ಕುಮಾರ್ ಕೂಡ ವಿಡಿಯೋವೊಂದನ್ನು ಹಂಚಿಕೊಂಡಿದ್ದು, 'ಚಿಕ್ಕ ಮಗನ ಫಸ್ಟ್ ಲುಕ್ ಪೋಸ್ಟರ್ ನಿಮ್ಮ ಮಡಿಲಿಗೆ ಹಾಕಿದ್ದೆವು. ಅದಕ್ಕೆ ನೀವೆಲ್ಲ ಪ್ರತಿಕ್ರಿಯೆ ಕಳಿಸಿ ಅನಿಸಿಕೆ ಹಂಚಿಕೊಂಡಿರಿ. ರಿವ್ಯೂಸ್ ಹಂಚಿಕೊಂಡಿರಿ. ನಾವು ಎಲ್ಲವನ್ನೂ ಓದಿದ್ದೇವೆ. ಬಹಳ ಖುಷಿಯಾಯ್ತು ಎಂದು ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ.
ಮಂಗಳಾರತಿ ಬೆಳಗಿದರು
ಯುವ ರಾಜ್ ಕುಮಾರ್ ಅವರ ಚಿತ್ರದ ಪೋಸ್ಟರ್ಅನ್ನು ಲ್ಯಾಪ್ಟಾಪ್ನಲ್ಲಿ ಓಪನ್ ಮಾಡಿದ ಅಭಿಮಾನಿಯೊಬ್ಬರು ಅದಕ್ಕೆ ಮಂಗಳಾರತಿ ಮಾಡಿದ್ದಾರೆ. ಅದನ್ನು ಕೂಡ ರಾಘವೇಂದ್ರ ರಾಜ್ ಕುಮಾರ್ ಹಂಚಿಕೊಂಡಿದ್ದು, ನಿಮಗೆ ಹೇಗೆ ನಾವು ಕೃತಜ್ಞತೆ ಸಲ್ಲಿಸುವುದು? ಆಗುವುದಿಲ್ಲ ನಮ್ಮ ಕೈಯಲ್ಲಿ. ಥ್ಯಾಂಕ್ಸ್ ಹೇಳಿದರೆ ತುಂಬಾ ಚಿಕ್ಕ ಮಾತಾಗುತ್ತದೆ ಎಂದು ಭಾವುಕರಾಗಿ ನುಡಿದಿದ್ದಾರೆ.

ನಿರೀಕ್ಷೆಗೆ ಮೀರಿದ ಸಿನಿಮಾ ಪ್ರಯತ್ನಿಸುತ್ತೇವೆ
ಒಂದೆಡೆ ಖುಷಿಯಾಯ್ತು, ಇನ್ನೊಂದೆಡೆ ಭಯ, ಭಕ್ತಿ, ಜವಾಬ್ದಾರಿ ಹೆಚ್ಚಾಗಿದೆ. ಎಲ್ಲಕ್ಕೂ ಇಷ್ಟು ಮೆಚ್ಚಿಕೊಂಡಿದ್ದೀರಲ್ಲ, ಇವರಿಗೆ ಯಾವ ರೀತಿ ಸಿನಿಮಾ ಕೊಡಬಹುದು ಎನ್ನುವುದು ಚಾಲೆಂಜ್ ಆಗಿದೆ. ನಿಮ್ಮ ಅನಿಸಿಕೆಗಳನ್ನು ಕಣ್ಣಿಗೆ ಒತ್ತಿಕೊಂಡು ಶ್ರದ್ಧೆಯಿಂದ ಭಕ್ತಿಯಿಂದ ಕೆಲಸ ಮಾಡಿಕೊಂಡು ಹೋಗಿ ನಿಮ್ಮ ನಿರೀಕ್ಷೆಗೆ ಮೀರಿದ ಸಿನಿಮಾ ನೀಡಲು ಪ್ರಯತ್ನಮಾಡುತ್ತೇವೆ. ನಿಮ್ಮ ಪ್ರೀತಿ ವಿಶ್ವಾಸ ಅರವತ್ತು ವರ್ಷದಿಂದ ಕುಟುಂಬವನ್ನು ಕಾಪಾಡಿಕೊಂಡು ಬಂದಿದೆ. ಅದನ್ನು ಯಾವತ್ತೂ ಮರೆಯೊಲ್ಲ. ನಿಮಗೆ ಯಾವಾಗಲೂ ಚಿರರುಣಿಯಾಗಿರುತ್ತೇವೆ ಎಂದಿದ್ದಾರೆ.

ಅಣ್ಣಾವ್ರ ತರ ಕಾಣಿಸಿದ್ರಿ
ಹುಲಿಯ ಹಾಲಿನ ಮೇವು ಸಿನಿಮಾದಲ್ಲಿ ಅಣ್ಣಾವ್ರ ತರ ಕಾಣಿಸಿದ್ರಿ...ಅದೇ ಮೈಕಟ್ಟು ಅಲ್ ದ ಬೆಸ್ಟ್- ಪ್ರಭಾಕರ್

ಗೌರವ ಕಡಿಮೆಯಾಗೊಲ್ಲ
ನಿಮ್ಮ ಮೇಲೆ ಮತ್ತು ನಿಮ್ಮ ರಾಜ ವಂಶದ ಮೇಲಿರುವ ಗೌರವ ಯಾವುದು ಕೂಡಾ ಕಡಿಮೆ ಆಗುವುದಿಲ್ಲ ಬಿಡಿ...ನಿಮ್ಮ ಎಲ್ಲ ಒಳ್ಳೆಯ ಕೆಲಸಕ್ಕೆ ಎಲ್ಲರ ಪ್ರೋತ್ಸಾಹ ಇದ್ದೆ ಇರುತ್ತೆ- ಶಿವರಾಮ್


Click it and Unblock the Notifications











