ಕೆಜಿಎಫ್ ಟ್ರೇಲರ್ ಬಿಡುಗಡೆಯಲ್ಲಿ ಸ್ಫೂರ್ತಿಯಾಗಿದ್ದು ರವಿಚಂದ್ರನ್ ತಂದೆ ಎನ್. ವೀರಾಸ್ವಾಮಿ!
ಶುಕ್ರವಾರ (ಏ. 17) ಕನ್ನಡಕ್ಕೆ ಅಪರೂಪದ ಚಿತ್ರಗಳನ್ನು ನೀಡಿದ ನಿರ್ಮಾಪಕ ಎನ್. ವೀರಾಸ್ವಾಮಿ ಅವರ ಜನ್ಮದಿನ. 1932ರ ಏ. 17ರಂದು ತಮಿಳುನಾಡಿನ ತಿರವಳ್ಳೂರು ಜಿಲ್ಲೆಯಲ್ಲಿ ಜನಿಸಿದ ಅವರು ಬಳಿಕ ಕನ್ನಡಿಗರೇ ಆದರು. ಕನ್ನಡ ಚಿತ್ರರಂಗ ಮರೆಯಲಾಗದ ಚಿತ್ರಗಳನ್ನು ನೀಡಿದರು. ಅವರ ಮಗ ವಿ. ರವಿಚಂದ್ರನ್ ಮತ್ತೊಂದು ಮಟ್ಟದ ಪ್ರಯೋಗಗಳನ್ನು ಮಾಡುವ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದರು.
ಹೀಗೂ ಸಿನಿಮಾ ಮಾಡಬಹುದೇ ಎಂದು ಅಚ್ಚರಿ ಮೂಡುವಂತೆ ಮಾಡಿದ ನಿರ್ಮಾಪಕ ಎನ್ ವೀರಾಸ್ವಾಮಿ ಅವರು ತಮಗೆ ಸ್ಫೂರ್ತಿ ಎಂದು ಕೆಜಿಎಫ್ ಚಿತ್ರತಂಡ ಹೇಳಿಕೊಂಡಿದೆ. ಎನ್. ವೀರಾಸ್ವಾಮಿ ಅವರಂತೆ, ಸಿನಿಮಾ ಉದ್ಯಮದ ಲೆಕ್ಕಾಚಾರಗಳು ಬದಲಾದ ಈ ಕಾಲದಲ್ಲಿ ಕನ್ನಡದತ್ತ ಭಾರತೀಯ ಚಿತ್ರರಂಗವು ಬೆರಗಿನಿಂದ ತಿರುಗಿ ನೋಡುವಂತೆ ಮಾಡಿರುವುದು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರ. ಕೆಜಿಎಫ್ನ ಎರಡನೆಯ ಭಾಗಕ್ಕಾಗಿ ಎಲ್ಲಾ ಭಾಷೆಯ ಪ್ರೇಕ್ಷಕರೂ ಕಾದಿರುವುದು ಇದಕ್ಕೆ ಸಾಕ್ಷಿ. ಮುಂದೆ ಓದಿ..

ಭಾರತೀಯ ಮಾಧ್ಯಮ ಭಾಗಿ
ಕೆಜಿಎಫ್ ಚಿತ್ರದ ಟ್ರೇಲರ್ ಲಾಂಚ್ ಕನ್ನಡದ ಮಟ್ಟಿಗೆ ದೊಡ್ಡ ಸಾಧನೆಯೇ ಸರಿ. ಏಕೆಂದರೆ ಐದು ಭಾಷೆಗಳಲ್ಲಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಅದಕ್ಕೆ ಇಡೀ ಭಾರತೀಯ ಮಾಧ್ಯಮಗಳನ್ನು ಬೆಂಗಳೂರಿಗೆ ಕರೆಸಲಾಗಿತ್ತು.

ಟ್ರೇಲರ್ ಬಿಡುಗಡೆಗೆ ಸ್ಫೂರ್ತಿ
ಹೀಗೆ ಎಲ್ಲ ಮಾಧ್ಯಮಗಳನ್ನೂ ಆಹ್ವಾನಿಸಿದ್ದಕ್ಕೆ 'ಶಾಂತಿ ಕ್ರಾಂತಿ' ಚಿತ್ರವೇ ಸ್ಫೂರ್ತಿ ಎಂದು ಕೆಜಿಎಫ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ತಿಳಿಸಿದ್ದಾರೆ. 'ಶಾಂತಿ ಕ್ರಾಂತಿ' ಮುಹೂರ್ತದ ಕಾರ್ಯಕ್ರಮದ ಸ್ಫೂರ್ತಿಯೇ ಕೆಜಿಎಫ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಇಡೀ ಭಾರತೀಯ ಚಿತ್ರರಂಗವನ್ನು ಆಹ್ವಾನಿಸುವ ಆಲೋಚನೆ ಮೂಡಿಸಿತ್ತು ಎಂದು ಅವರು ಹೇಳಿದ್ದಾರೆ.

ವೀರಾಸ್ವಾಮಿ ಸ್ಮರಿಸಿಕೊಂಡ ರಘುರಾಮ್
ನಿರ್ದೇಶಕ ರಘುರಾಮ್, ವೀರಾಸ್ವಾಮಿ ಅವರ ಜನ್ಮದಿನದ ನೆನಪಿನ ಫೋಟೊವನ್ನು ಶೇರ್ ಮಾಡಿದ್ದರು. ಅದನ್ನು ಹಂಚಿಕೊಂಡಿರುವ ಕಾರ್ತಿಕ್ ಈ ಮಾಹಿತಿ ನೀಡಿದ್ದಾರೆ. ವೀರಾಸ್ವಾಮಿ ಅವರು ಬದುಕಿದ್ದರೆ 88 ವರ್ಷವಾಗಿರುತ್ತಿತ್ತು ಅವರು ತಮ್ಮ 60ನೇ ವಯಸ್ಸಿನಲ್ಲಿ 1992ರ ಆಗಸ್ಟ್ 23ರಂದು ನಿಧನರಾಗಿದ್ದರು.

ಪ್ಯಾನ್ ಇಂಡಿಯಾಕ್ಕೆ ಇವರೇ ಸ್ಫೂರ್ತಿ
ಒಬ್ಬ ಸಾಧಾರಣ ಶ್ರೀ ಸಾಮಾನ್ಯ ಕನ್ನಡ ಚಿತ್ರಗಳ ನಿರ್ಮಾಪಕ ವಿತರಕನಾಗಿ ದೇಶಾದ್ಯಂತ ಬೆಳೆದ ವ್ಯಕ್ತಿ..ಇಂದು pan india ಸಿನಿಮಾ ಮಾಡೋ ಎಲ್ಲ ನಿರ್ಮಾಪಕರಿಗೆ ಇವರೇ ಸ್ಪೂರ್ತಿ.. ಈಶ್ವರಿ ಸಂಸ್ಥೆಯ ಶಕ್ತಿ. ಕನಸುಗಾರನನ್ನು ಚಿತ್ರರಂಗಕ್ಕೆ ಕೊಟ್ಟ ಕೀರ್ತಿ.. ನೀವು ನಿರ್ಮಾಣ ಮಾಡಿರುವ ಚಿತ್ರಗಳು ಕನ್ನಡಿಗರ ಆಸ್ತಿ ಎಂದು ನಿರ್ದೇಶಕ ರಘುರಾಂ, ವೀರಾಸ್ವಾಮಿ ಅವರನ್ನು ಸ್ಮರಿಸಿಕೊಂಡಿದ್ದಾರೆ.


Click it and Unblock the Notifications











