Exclusive: ಅರ್ಧಕ್ಕೆ ನಿಂತ ಸಿನಿಮಾ ಮರೆತ ರಮ್ಯಾ, ಮೋಹಕ ತಾರೆ ಕೈ ಬಿಟ್ಟ ಸಿನಿಮಾ ಕಥೆಯೇನು?
ಮೋಹಕ ತಾರೆ ರಮ್ಯಾ ಲಾಂಗ್ ಗ್ಯಾಪ್ ಕೊಟ್ಟು ಮತ್ತೆ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಲಕ್ಕಿ ಗರ್ಲ್ ಎಂಟ್ರಿ ಕೊಟ್ಟಿದ್ದು ಅವರ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ಕೊಟ್ಟಿದೆ. ಒಳಗೊಳಗೆ ರಮ್ಯಾ ಫ್ಯಾನ್ಸ್ ಮತ್ತೆ ಅವರನ್ನು ತೆರೆಮೇಲೆ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
'ಗರುಡ ಗಮನ ವೃಷಭ ವಾಹನ' ನಿರ್ದೇಶಕ ರಾಜ್ ಬಿ ಶೆಟ್ಟಿ ಸಿನಿಮಾದ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅಂದ್ರೆ, ಈ ಬಾರಿ ರಮ್ಯಾ ಕೇವಲ ನಟಿಯಾಗಿ ಅಷ್ಟೇ ಅಲ್ಲ. ನಿರ್ಮಾಪಕಿಯಾಗಿಯೂ ಅಖಾಡಕ್ಕೆ ಇಳಿದಿರೋದು ಸ್ಯಾಂಡಲ್ವುಡ್ನಲ್ಲಿ ಹೊಸ ಸಂಚಲನ ಮೂಡಿಸಿದೆ.
ರಮ್ಯಾ ಹಿಡಿದ ಕೆಲಸ ಮುಗಿಸದೆ ಬಿಡೋದಿಲ್ಲ. ಅದರಲ್ಲೂ ಹೊಸಬರ ಬೆಂಬಲಕ್ಕೆ ಸದಾ ನಿಲ್ಲುತ್ತಿರೋ ನಟಿ ಅರ್ಧಕ್ಕೆ ಬಿಟ್ಟ ಒಂದು ಸಿನಿಮಾ ತಿರುಗಿ ಕೂಡ ನೋಡುತ್ತಿಲ್ಲ. ರಮ್ಯಾ ಜೊತೆ ಸಿನಿಮಾ ಮಾಡೋ ಕನಸು ಕಂಡಿದ್ದ ಆ ನಿರ್ದೇಶಕ ಪಾಡು ಹೇಳ ತೀರದಾಗಿದೆ. ಹೀಗಿದ್ದರೂ, ಕಳೆದ ಎಂಟು-ಒಂಬತ್ತು ವರ್ಷಗಳಿಂದ ಕ್ಯಾರೇ ಅಂತನೂ ಅನಿಸುತ್ತಿಲ್ಲ. ಅಷ್ಟಕ್ಕೂ ಆ ಸಿನಿಮಾ ಮತ್ಯಾವೂ ಅಲ್ಲ 'ದಿಲ್ ಕಾ ರಾಜ'. ಸದ್ಯ ರಮ್ಯಾ, ಪ್ರಜ್ವಲ್ ಬಿಟ್ಟು ಈ ಸಿನಿಮಾವನ್ನು ಮುಗಿಸೋಕೆ ನಿರ್ದೇಶಕ ಮುಂದಾಗಿದ್ದಾರೆ.

'ದಿಲ್ ಕಾ ರಾಜ'ನನ್ನು ರಮ್ಯಾ ಮರೆತೇ ಬಿಟ್ರಾ?
ಅರ್ಧಕ್ಕೆ ನಿಂತಿರೋ 'ದಿಲ್ ಕಾ ರಾಜ' ಸಿನಿಮಾವನ್ನು ರಮ್ಯಾ ಸಂಪೂರ್ಣವಾಗಿ ಮರೆತೇ ಬಿಟ್ರಾ? ಹೊಸ ಸಿನಿಮಾ ಶುರು ಮಾಡುವುದಕ್ಕೂ ಮುನ್ನ ಈ ಸಿನಿಮಾ ನೆನಪಿಗೆ ಬರಲಿಲ್ವಾ? ಅನ್ನೋ ಪ್ರಶ್ನೆಯಂತೂ ಸಿನಿಪ್ರಿಯರನ್ನು ಕಾಡದೇ ಇರೋದಿಲ್ಲ. 2013ರಲ್ಲಿ ಸೆಟ್ಟೇರಿದ್ದ ಈ ಸಿನಿಮಾ ಸುಮಾರು ಶೇ.60 ರಿಂದ ಶೇ.70 ಭಾಗದ ಚಿತ್ರೀಕರಣನೂ ಮುಗಿದಿತ್ತು. ಇನ್ನೇನು ಸಿನಿಮಾ ಮುಗಿಯಬೇಕು ಅನ್ನುವಾಗಲೇ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಮತ್ತೆ ರಮ್ಯಾ ಸಿನಿಮಾ ತಂಡ ಕೈಗೆ ಸಿಗಲೇ ಇಲ್ಲ.

ಕಾದೂ ಕಾದೂ ಸುಸ್ತಾಗಿದ್ದ ನಿರ್ದೇಶಕ
ಯಾವುದೇ ಸಿನಿಮಾ ಅಂದ್ಕೊಂಡಿದ್ದ ಸಮಯಕ್ಕೆ ಸಿನಿಮಾ ಮುಗಿಯೋದಿಲ್ಲ. ಪೋಸ್ಟ್ ಪೋನ್ ಆಗೋದು, ಡೇಟ್ ಮ್ಯಾಚ್ ಆಗದೆ ಸಿನಿಮಾ ನಿಂತಿರೋ ಉದಾಹರಣೆಗಳಿಗೇನು ಕಮ್ಮಿಯಿಲ್ಲ. ಆದರೆ, ರಮ್ಯಾ ರಾಜಕೀಯ ಎಂಟ್ರಿ ಸಲುವಾಗಿ ಸಿನಿಮಾಗಳಿಗೆ ಬ್ರೇಕ್ ಹಾಕಿದ್ದರು. ಇಲ್ಲಿಂದ ಸಿನಿಮಾ ಮತ್ತೆ ಶುರು ಮಾಡಬೇಕು ಅಂತ ಹೊರಟಾಗಲೆಲ್ಲಾ ಚಿತ್ರತಂಡಕ್ಕೆ ಒಂದಲ್ಲಾ ಒಂದು ಅಡೆತಡೆಗಳು ಎದುರಾಗುತ್ತಲೇ ಇತ್ತು. ರಮ್ಯಾ ಚುನಾವಣೆ ಗೆದ್ದ ಬಳಿಕ ಸಿನಿಮಾ ಕಡೆ ಮುಖ ಮಾಡಲೇ ಇಲ್ಲ. ಹೀಗಾಗಿ 'ದಿಲ್ ಕಾ ರಾಜ' ದಿನದಿಂದ ದಿನಕ್ಕೆ ಡಬ್ಬದೊಳಗೆ ಧೂಳು ಹಿಡಿಯುತ್ತಾ ಕೂತಿತ್ತು.

ವಿದೇಶದಲ್ಲಿ ರಮ್ಯಾ.. ಸಾಲದ ಸುಳಿಯಲ್ಲಿ ನಿರ್ಮಾಪಕಿ
"ರಮ್ಯಾ ಎರಡನೇ ಬಾರಿ ಚುನಾವಣೆಗೆ ನಿಂತಾಗ, ಸೋಲು ಕಂಡಿದ್ದರು. ಈ ಸೋಲಿನ ಬಳಿಕ ಕೆಲವು ದಿನ ರಮ್ಯಾ ವಿದೇಶಕ್ಕೆ ಹಾರಿದ್ದರು. ಅಲ್ಲಿಂದ ರಮ್ಯಾ ಜೊತೆ ಚಿತ್ರತಂಡ ಸಂಪೂರ್ಣ ಸಂಪರ್ಕವನ್ನೇ ಕಳೆದುಕೊಂಡಿತ್ತು. ರಮ್ಯಾ ದಿನದಿಂದ ದಿನಕ್ಕೆ ದೂರವಾಗುತ್ತಿದ್ದರು. ಅತ್ತ ಸಿನಿಮಾ ಮೇಲೆ ಹಾಕಿದ ಬಂಡವಾಳದ ಮೇಲೆ ಬಡ್ಡಿ ಬೆಳೆಯುತ್ತಲೇ ಇತ್ತು. 2.75 ಕೋಟಿ ರೂಪಾಯಿ ಬಜೆಟ್ ಸಿನಿಮಾ ಬಡ್ಡಿ ಮೇಲೆ ಬಡ್ಡಿ ಬೆಳೆದು 5 ಕೋಟಿ ರೂಪಾಯಿಗೂ ಅಧಿಕ ಹೊರೆ ಬಿದ್ದಿದೆ. ಇದೇ ವೇಳೆ ನಿರ್ಮಾಪಕರು ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಅದಕ್ಕೆ ಈ ಸಿನಿಮಾ ಕಂಪ್ಲೀಟ್ ಮಾಡಲೇ ಬೇಕು ಅಂತ ನಿರ್ದೇಶಕರು ಪಣ ತೊಟ್ಟಿದ್ದಾರೆ." ಅಂತ ಸ್ಯಾಂಡಲ್ವುಡ್ ಮೂಲಗಳು ಸ್ಪಷ್ಟಪಡಿಸಿವೆ.

'ದಿಲ್ ಕಾ ರಾಜ' ಹೇಗೆ ಮುಗಿಯೋದು?
'ದಿಲ್ ಕಾ ರಾಜ' ಯಾಕೆ ತಡವಾಯ್ತು? ತಪ್ಪು ಯಾರದ್ದು ಸ್ಪಷ್ಟ ಉತ್ತರ ಯಾರಿಗೂ ಇಲ್ಲ. ನಿರ್ದೇಶಕ ಸೋಮನಾಥ್ ಪಾಟೀಲ್ ಈ ಹಿಂದೆ ಹಲವು ಬಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ರೂ. ರಮ್ಯಾ- ಪ್ರಜ್ವಲ್ ದೇವರಾಜ್ ಬಗ್ಗೆ ಆರೋಪ ಕೂಡ ಮಾಡಿಲ್ಲ. ಇತ್ತ ರಮ್ಯಾ ಕಮ್ ಬ್ಯಾಕ್ ಸಿನಿಮಾ ಅನೌನ್ಸ್ ಮಾಡಿದ್ದರೂ, ಅರ್ಧಕ್ಕೆ ಕೈ ಬಿಟ್ಟು ಬಂದ ಈ ಸಿನಿಮಾ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಆದರೆ, ರಮ್ಯಾ ಹಾಗೂ ಪ್ರಜ್ವಲ್ ದೇವರಾಜ್ಗಾಗಿ ಕಾದೂ ಕಾದು ಸುಸ್ತಾದ ನಿರ್ದೇಶಕ ಸೋಮನಾಥ್ ಪಾಟೀಲ್ 'ದಿಲ್ ಕಾ ರಾಜ' ಮುಗಿಸಲೇಬೇಕು ಅಂತ ತೀರ್ಮಾನ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಈ ಸಿನಿಮಾಯೋಕೆ ಹೇಗೆ ಸಾಧ್ಯ?
'ದಿಲ್ ಕಾ ರಾಜ' ಸಿನಿಮಾ ಶೇ.60 ರಿಂದ ಶೇ.70 ಭಾಗ ಕಂಪ್ಲೀಟ್ ಆಗಿದೆ. ಇನ್ನೂ ಶೇ.30ರಷ್ಟು ಸಿನಿಮಾ ಮುಗಿಯಬೇಕು. ಆದರೆ, ರಮ್ಯಾ ಹಾಗೂ ಪ್ರಜ್ವಲ್ ಇಬ್ಬರೂ ಈಗ ಬದಲಾಗಿದ್ದಾರೆ. ಈಗ ಸಿನಿಮಾದಲ್ಲಿ ನಟಿಸಲು ಮುಂದೆ ಬಂದರೂ ಹೊಂದಾಣಿಕೆ ಆಗುವುದಿಲ್ಲ. ಹೀಗಿರುವಾಗ 'ದಿಲ್ ಕಾ ರಾಜ' ಸಿನಿಮಾ ಮುಗಿಯೋದು ಹೇಗೆ? ಅನ್ನೋ ಅನುಮಾನವಂತೂ ಇದ್ದೇ ಇದೆ. ಈ ಬಗ್ಗೆ ನಿರ್ದೇಶಕ ಸೋಮನಾಥ್ ಪಾಟೀಲ್, ಮೋಹಕತಾರೆ ರಮ್ಯಾ, ಪ್ರಜ್ವಲ್ ದೇವರಾಜ್ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಯಿತು. ಆದರೆ, ಸಂಪರ್ಕಕ್ಕೆ ಸಿಗಲಿಲ್ಲ. ಈ ಮೂವರು ಸಂಪರ್ಕಕ್ಕೆ ಸಿಕ್ಕ ಬಳಿಕ ಈ ಸುದ್ದಿಯನ್ನು ಅಪ್ಡೇಟ್ ಮಾಡಲಾಗುತ್ತದೆ.


Click it and Unblock the Notifications











