ಥಿಯೇಟರ್ ಮುಂದೆ ಕುಣಿದ ರಾಘಣ್ಣ.. "ಇದು ಅಪ್ಪು ಬಿಗಿನಿಂಗ್" ಎಂದು ಶಿವಣ್ಣ ಭಾವುಕ!
ಪುನೀತ್ ರಾಜ್ಕುಮಾರ್ ಕೊನೆಯ ಸಿನಿಮಾ 'ಗಂಧದಗುಡಿ' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ರಾಜ್ಯಾದ್ಯಂತ 200ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಈ ಡಾಕ್ಯು ಡ್ರಾಮಾ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಥಿಯೇಟರ್ ಅಂಗಳದಲ್ಲಿ ಸಂಭ್ರಮಾಚರಣೆ ಮಾಡಿ ಚಿತ್ರವನ್ನು ಸ್ವಾಗತಿಸಿದ್ದಾರೆ. ರಾಘಣ್ಣ ಥಿಯೇಟರ್ ಮುಂದೆ ಕುಣಿದಿದ್ದಾರೆ. ಶಿವಣ್ಣ ಅಪ್ಪು ನೆನೆದು ಭಾವುಕರಾಗಿದ್ದಾರೆ.
ಒಂದೂವರೆ ಗಂಟೆಯ ಡಾಕ್ಯು ಡ್ರಾಮಾ ಸಿನಿಮಾ 'ಗಂಧದಗುಡಿ' ಪ್ರೇಕ್ಷಕರನ್ನು ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಎಲ್ಲರೂ ಪುನೀತ್ ರಾಜ್ಕುಮಾರ್ ಜೊತೆಗೆ ಕರ್ನಾಟಕದ ಕಾಡು ಮೇಡು ಸುತ್ತಾಡಿ ಬಂದ ಅನುಭವ ಆಗುತ್ತದೆ. ಒಂದಷ್ಟು ಒಳ್ಳೆ ಮೌಲ್ಯಗಳ ಜೊತೆಗೆ ಅಪ್ಪು ರಾಜ್ಯದ ಅರಣ್ಯ ಸಂಪತ್ತು, ವನ್ಯ ಸಂಪತ್ತಿನ ದರ್ಶನ ಮಾಡಿಸುತ್ತಾರೆ. ಪುನೀತ್ ರಾಜ್ಕುಮಾರ್ ಅವರಾಗಿಯೇ ಕಾಣಿಸಿಕೊಂಡಿರೋ ಅಪರೂಪದ ಪ್ರಯತ್ನ 'ಗಂಧದಗುಡಿ'. ಅಪ್ಪು ಕನಸಿಗೆ ಅಮೋಘ ವರ್ಷ ಅಂಡ್ ಟೀಂ ಸಾಥ್ ನೀಡಿದ್ದಾರೆ. ಸಿನಿಮಾ ನೋಡಿ ಎಲ್ಲರೂ ಒಂದು ಕ್ಷಣ ಅಪ್ಪು ನೆನೆದು ಭಾವುಕರಾಗುತ್ತಿದ್ದಾರೆ.
ನಿನ್ನೆ ಸಂಜೆಯಿಂದಲೇ ರಾಜ್ಯಾದ್ಯಂತ 'ಗಂಧದಗುಡಿ' ಪೇಯ್ಡ್ ಪ್ರೀಮಿಯರ್ ಶೋಗಳು ಪ್ರದರ್ಶನ ಆಗಿ ಸೂಪರ್ ಹಿಟ್ ಆಗಿದೆ. ಇಂದು ಕೂಡ ಬೆಳ್ಳಂಬೆಳಗೆಯಿಂದಲೇ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಆಗುತ್ತಿದೆ.ದೊಡ್ಮನೆ ಸದಸ್ಯರು, ಚಿತ್ರರಂಗದ ತಾರೆಯರು, ಪ್ರೇಕ್ಷಕರು ಸಿನಿಮಾ ನೋಡಿ ಪುನೀತರಾಗಿದ್ದಾರೆ. ರಾಘಣ್ಣ ನರ್ತಕಿ ಥಿಯೇಟರ್ನಲ್ಲಿ ಸಿನಿಮಾ ವೀಕ್ಷಿಸಿದರು.

ಥಿಯೇಟರ್ ಮುಂದೆ ರಾಘಣ್ಣ ಡ್ಯಾನ್ಸ್
ನರ್ತಕಿ ಥಿಯೇಟರ್ನಲ್ಲಿ ಅಭಿಮಾನಿಗಳ ಜೊತೆ ರಾಘವೇಂದ್ರ ರಾಜ್ಕುಮಾರ್ 'ಗಂಧದಗುಡಿ' ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಲು ಥಿಯೇಟರ್ ಅಂಗಳಕ್ಕೆ ಬಂದ ರಾಘಣ್ಣ ತಮಟೆ ತಾಳಕ್ಕೆ ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸಿದರು. ತಮ್ಮನನ್ನು ನೆನೆದು ಹೆಜ್ಜೆ ಹಾಕುತ್ತಾ ನೆರೆದಿದ್ದವರನ್ನು ಹುರಿದುಂಬಿಸಿದರು. ಈ ವಿಡಿಯೋ ಈಗ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ 'ಲಕ್ಕಿಮ್ಯಾನ್' ಸಿನಿಮಾ ವೀಕ್ಷಿಸುವಾಗ ರಾಘಣ್ಣ ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ್ದರು.

'ಗಂಧದಗುಡಿ' ಒಂದು ಭಾವನೆ: ಶಿವಣ್ಣ
ಬೆಳಗ್ಗೆ ಮನೆ ಪಕ್ಕದ ಪಾರ್ಕ್ನಲ್ಲಿ ವಾಕಿಂಗ್ ತೆರಳಿದ್ದ ನಟ ಶಿವರಾಜ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ಸಂಜೆ 7 ಗಂಟೆಗೆ ಒರಾಯನ್ ಮಾಲ್ನಲ್ಲಿ ಸಿನಿಮಾ ನೋಡ್ತೀನಿ. 'ಗಂಧದಗುಡಿ' ಒಂದು ಭಾವನೆ. ಅದು ಒಂದು ಫೀಲ್. ಅಪ್ಪು ಬೇರೆ ಸಿನಿಮಾಗಳನ್ನು ನೋಡುವುದಕ್ಕೂ ಇದನ್ನು ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ. ಬೇರೆ ಸಿನಿಮಾಗಳಲ್ಲಿ ಒಂದು ಪಾತ್ರ ಆಗಿ ಇರುತ್ತಿದ್ದ. ಇದರಲ್ಲಿ ಅವನಾಗಿಯೇ ಇದ್ದಾನೆ. ಅದು ಹೆಚ್ಚು ಮನಸ್ಸಿಗೆ ಟಚ್ ಆಗುತ್ತದೆ. ಪ್ರೀತಿಯಿಂದ ಮಾಡಿದ ಸಿನಿಮಾ ಎನ್ನುವುದಕ್ಕಿಂತ ಬಹಳ ಉತ್ತಮ ಸಿನಿಮಾ. ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ಎಷ್ಟು ಮುಖ್ಯ. ಭಾರತ ಮಾತ್ರವಲ್ಲ ಪ್ರಪಂಚದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಮಾನ್ಸೂನ್ ಸೀಸನ್ನಲ್ಲಿ ಮಳೆ ಆಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಅರಣ್ಯ ನಾಶ. ಅದನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡಿರೋದು ವಿಶೇಷ.

ನನ್ನ ಪುಣ್ಯ ಪಾರ್ಟ್- 2 ಮಾಡಿದ್ದೆ
"ಅಪ್ಪಾಜಿ 'ಗಂಧದಗುಡಿ' ಫಸ್ಟ್ ಪಾರ್ಟ್ ಮಾಡಿದ್ದರು. ಅವತ್ತಿನ ಕಾಲಕ್ಕೆ ಎಷ್ಟು ಅದ್ಭುತವಾಗಿತ್ತು. ಫಾರೆಸ್ಟ್ ಆಫೀಸರ್ ಆಗಿ ಅಪ್ಪಾಜಿ ಕಾಣಿಸಿಕೊಂಡಿದ್ದರು. ಫಾರೆಸ್ಟ್ ಆಫಿಸರ್ ಅಂದರೆ ಹೀಗಿರಬೇಕು ಎಂದು ಎಷ್ಟೊ ಜನ ಪ್ರೇರಣೆಗೊಂಡಿದ್ದರು. ಆಮೇಲೆ ನನ್ನ ಭಾಗ್ಯ, 2ನೇ ಪಾರ್ಟ್ನಲ್ಲಿ ಎಂ. ಪಿ ಶಂಕರ್ ಅವರ ಬ್ಯಾನರ್ನಲ್ಲಿ ನಟಿಸಿದ್ದೆ. ಈಗ ಅಪ್ಪು 'ಗಂಧದಗುಡಿ' ಮಾಡಿದ್ದಾನೆ. ನಮ್ಮ ಫ್ಯಾಮಿಲಿಗೆ 'ಗಂಧದಗುಡಿ' ಆ ಗಂಧ ಆಗಿ ಬಂದಿದೆ ಎನ್ನಿಸ್ತಿದೆ.

ಇದು ಅಪ್ಪು ಬಿಗಿನಿಂಗ್: ಶಿವಣ್ಣ
"ಎಲ್ಲರೂ ಸಿನಿಮಾ ನೋಡಬೇಕು. ಅದನ್ನು ಅರಿತುಕೊಳ್ಳಬೇಕು. ಸಿನಿಮಾ ಹೇಗಿದೆ ಎನ್ನುವುದು ಮುಖ್ಯ ಅಲ್ಲ. ನಾವು ಅಪ್ಪು ಮೇಲಿನ ಪ್ರೀತಿ ಗೌರವ ಸಲ್ಲಿಸುವ ರೀತಿ ಇದು. ಅಪ್ಪಾಜಿ ಚಿತ್ರದ ಕಾಡು ಉಳಿಸಿ ಅನ್ನುವ ಡೈಲಾಗ್ ಜೊತೆಗೆ ಸಿನಿಮಾ ಶುರುವಾಗುತ್ತದೆ. ಇದು ಅಪ್ಪು ಕೊನೆಯ ಸಿನಿಮಾ ಅಲ್ಲ. ಇದು ಅಪ್ಪು ಬಿಗಿನಿಂಗ್. ಪುನೀತ್ ಯಾವಾಗಲೂ ನಮ್ಮೊಟ್ಟಿಗೆ ಇರುತ್ತಾನೆ, ನಾವು ಜೊತೆಯಲ್ಲಿ ಬೆಳೆಸಿಕೊಂಡು ಹೋಗಬೇಕು" ಎಂದು ಕೇಳಿಕೊಳ್ತೀನಿ.


Click it and Unblock the Notifications











