ದರ್ಶನ್ ಫ್ಯಾನ್ಸ್-ಜಗ್ಗೇಶ್ ವಿವಾದ: ಫಿಲಂ ಚೇಂಬರ್ ಮೊರೆ ಹೋದ ಜಗ್ಗೇಶ್ ಅಭಿಮಾನಿಗಳು
ಹಿರಿಯ ನಟ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ನಿನ್ನೆ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಮುತ್ತಿಗೆ ಹಾಕಿದ್ದ ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್ ಅವರ ವಿರುದ್ಧ ಧಿಕ್ಕಾರ ಕೂಗಿದ್ದರು.
'ತೋತಾಪುರಿ's ಸಿನಿಮಾ ಶೂಟಿಂಗ್ ನಿಲ್ಲಿಸಿ ನವರಸ ನಾಯಕನ ವಿರುದ್ಧ ಪ್ರತಿಭಟಿಸಿದ್ದರು. ದರ್ಶನ್ ಅಭಿಮಾನಿಗಳನ್ನು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದರು. ಡಿ ಫ್ಯಾನ್ಸ್ ನಡೆಯಿಂದ ತೀವ್ರವಾಗಿ ಬೇಸರಗೊಂಡ ಜಗ್ಗೇಶ್ ಚಿತ್ರರಂಗದ ಪರಿಸ್ಥಿತಿ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಇದೀಗ, ಜಗ್ಗೇಶ್ ಅಭಿಮಾನಿಗಳು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದಾರೆ. ಶೂಟಿಂಗ್ ಸ್ಥಳಕ್ಕೆ ದಾಳಿ ಮಾಡಿ ಜಗ್ಗೇಶ್ ಅವರಿಗೆ ಅಪಮಾನ ಮಾಡಲಾಗಿದೆ, ಅವರು ದರ್ಶನ್ ಅಭಿಮಾನಿಗಳು ಎನ್ನುವುದು ಅನುಮಾನ ಇದೆ. ಬೇರೆ ಯಾವುದೋ ಉದ್ದೇಶದಿಂದ ಇಂತಹ ಕೆಲಸ ಮಾಡಿರಬೇಕು. ಈ ಬಗ್ಗೆ ಫಿಲಂ ಚೇಂಬರ್ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಗ್ಗೇಶ್ ಅವರ ಅಭಿಮಾನಿ ಸಂಘದ ಹಲವರು ಸದಸ್ಯರು ಬೆಂಗಳೂರಿನ ಶಿವಾನಂದ ವೃತ್ತದಲ್ಲಿರುವ ಫಿಲಂ ಚೇಂಬರ್ ಬಳಿ ಜಮಾಯಿಸಿದ್ದು, ಮಂಡಳಿಗೆ ಮನವಿ ಮಾಡಿದ್ದಾರೆ.
ದರ್ಶನ್ ಅಭಿಮಾನಿಗಳನ್ನಾಗಲಿ ಅಥವಾ ದರ್ಶನ್ ಅವರ ಬಗ್ಗೆ ನಮ್ಮ ಪ್ರತಿಭಟನೆ ಅಲ್ಲ, 40 ವರ್ಷದಿಂದ ಚಿತ್ರರಂಗದಲ್ಲಿ ಕಲಾಸೇವೆ ಮಾಡುತ್ತಿರುವ ಜಗ್ಗೇಶ್ ಅವರಿಗೆ ಅಗೌರವ ತೋರಿದವರು ವಿರುದ್ಧ ಕ್ರಮ ಜರುಗಿಸಬೇಕಿದೆ ಎಂದು ಜಗ್ಗೇಶ್ ಅಭಿಮಾನಿಗಳು ತಿಳಿಸಿದ್ದಾರೆ.
ಇನ್ನು ದರ್ಶನ್ ಅಭಿಮಾನಿಗಳ ವರ್ತನೆಯಿಂದ ತೀವ್ರವಾಗಿ ನೊಂದಿರುವ ಜಗ್ಗೇಶ್, ಟ್ವಿಟ್ಟರ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಇನ್ಮುಂದೆ ಯಾವುದೇ ಸಿನಿಮಾ ಕಾರ್ಯಕ್ರಮ, ಹುಟ್ಟುಹಬ್ಬ, ಸಮಾರಂಭಗಳಿಗೆ ನಾನು ಹೋಗುವುದಿಲ್ಲ. ರೌಡಿಸಂ, ಸ್ಟಾರ್ಡಂ ಎಲ್ಲವೂ ನನಗೆ ಬೇಕಿಲ್ಲ'' ಎಂದಿದ್ದಾರೆ.


Click it and Unblock the Notifications











