ಅಮ್ಮನ ಕೈ ಅಡುಗೆ ನೆನೆದು ಕಣ್ಣೀರಿಟ್ಟ ಜಗ್ಗೇಶ್: 'ಸಂಪ್ರದಾಯಕ್ಕೆ ಬೆಲೆ ಕೊಡಿ'
ನವರಸ ನಾಯಕ ಜಗ್ಗೇಶ್ ತಮ್ಮ ಅಮ್ಮನ ಕೈ ಅಡುಗೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆಧುನಿಕ ಸಂಪ್ರದಾಯದ ಅಡುಗೆ ಮುಂದೆ ಅಮ್ಮ ತಯಾರಿಸುತ್ತಿದ್ದ ರುಚಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆ ಸಮಯದಲ್ಲಿ ಅಮ್ಮನ ಅಡುಗೆಯನ್ನು ಹಂಗಿಸಿದ್ದೆ, ಆದ್ರೆ, ಇಂದು ಅಮ್ಮನ ಮಾತುಗಳು ನನ್ನನ್ನು ಕಾಡುತ್ತಿದೆ ಎಂದು ಜಗ್ಗೇಶ್ ಭಾವುಕರಾಗಿದ್ದಾರೆ.
Recommended Video
ಅಮ್ಮನ ಅಡುಗೆ ಕುರಿತು ಜಗ್ಗೇಶ್ ಅವರು ಇನ್ಸ್ಟಾಗ್ರಾಂನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. ಜಗ್ಗೇಶ್ ಅವರ ಬರಹವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.
''ನಮ್ಮದು ಸಂಪ್ರದಾಯ ಗಂಗಟಿಗಾರ ಒಕ್ಕಲಿಗ ಮನೆತನ. ಹಾಸನ ತುಮಕೂರು ಮಂಡ್ಯ, ಬೆಂಗಳೂರು ಗ್ರಾಮಾಂತರದ ಸಂತತಿ. ಎಲ್ಲರ ಊಟದ ತಯಾರಿಕೆ ಒಂದೆಬಗೆ. ಅಂತೆಯೇ ಎಲ್ಲಾ ತಲೆಮಾರು ಪದ್ಧತಿ ಅಮ್ಮ ಅನುಸರಿಸುತ್ತಿದ್ದಳು. ಕಾಲೇಜಿನಲ್ಲಿ ಎಲ್ಲಾ ಜನಾಂಗದ ಮಿತ್ರರು ನನಗಿದ್ದರು. ಅದರಲ್ಲಿ ರವಿಚಂದ್ರ (ಜೈನ ಪಂಕ್ತದವರು) ಅವನ ಸಹವಾಸದಿಂದ ಅವರ ಮನೆಯ ಊಟ ತಿಂಡಿ ನನಗೆ ಪಂಚಪ್ರಾಣ. ನಮ್ಮ ಮನೆಯಲ್ಲಿ ಅಮ್ಮ ಮಾಡುತ್ತಿದ್ದ ಮಸ್ಸೊಪ್ಪು, ಬಸ್ಸಾರು, ಉಪ್ ಸಾರು, ರಾಗಿ ರೊಟ್ಟಿ ಉಚ್ಚೆಳ್ ಚಟ್ನಿ, ಹುಣಿಸೆ ಗೊಜ್ಜು ಚಿತ್ರಾನ್ನ ದಿನ ನಿತ್ಯದ ಅಡುಗೆ ಆಗಿತ್ತು''. ಮುಂದೆ ಓದಿ....

ಅಮ್ಮನ ಅಡುಗೆ ಹಂಗಿಸಿದ್ದೆ
''ಬೆಳಿಗ್ಗೆಯೇ ಮುದ್ದೆ ಸಾರು ತಿನ್ನಬೇಕಿತ್ತು. ಸ್ನೇಹಿತನ ಮನೆಯ ತಿಂಡಿ ಪಳಗಿದ ನಾನು ಅಮ್ಮನ ಅಡುಗೆ ಹಂಗಿಸಿ, ಬರಿ ಇದೆ ತಿಂದು ಸಾಯಬೇಕು ಎಂದು ತಟ್ಟೆ ಎಸೆದು ಹೋಗುತ್ತಿದ್ದೆ. ಆಗ ನೊಂದ ಅಮ್ಮ ಮಗನೆ ಈಶ ನಾವು ಹಳ್ಳಿ ಮಕ್ಕಳು ನನಗೆ ನಮ್ಮ ಹಿರಿಯರು ಕಲಿಸಿದ್ದು ಮಾತ್ರ ಕಲಿತಿರುವೆ. ನಿನ್ನ ಸ್ನೇಹಿತರ ಮನೆಯ ಅಡುಗೆ ನನಗೆ ಬರದು ಕಂದ. ನಾವು ಎಷ್ಟೆ ಬೆಳೆದರು ನಮ್ಮ ಸಂಪ್ರದಾಯ ಬಿಡಬಾರದು ಕಂದ. ಭಗವಂತ ಕೊಟ್ಟು ನೋಡುತ್ತಾನೆ ಬದಲಾದರೆ ಅದನ್ನೆ ಬಯಸಿಕೊರಗುವ ದಿನ ಕೊಡುತ್ತಾನೆ ಎಂದು ಬುದ್ದಿ ಹೇಳುತ್ತಿದ್ದಳು.'' -ಜಗ್ಗೇಶ್

ಯವ್ವನದ ಮದ ಅಂದು ಅರಿವಾಗಲಿಲ್ಲಾ
''ಯವ್ವನದ ಮದ ಅಂದು ಅರಿವಾಗಲಿಲ್ಲಾ. ಇಂದು ಆ ಸಂಪ್ರದಾಯದ ಅಜ್ಜಿ ಅಮ್ಮ ದೊಡ್ಡಮ್ಮ ಚಿಕ್ಕಮ್ಮ ಯಾರು ಇಲ್ಲಾ. ಇಂದು ನಾನು ಬಯಸಿದ್ದು ಎಲ್ಲಾ ಊಟ ಉಪಚಾರ ಸಿಗುತ್ತಿದೆ. ಆದರೆ ಅಮ್ಮನ ನೆಚ್ಚಿನ ಕೈ ಅಡುಗೆ ಸಿಗುತ್ತಿಲ್ಲಾ. ಅಂದು ನಮ್ಮ ಸಂಪ್ರದಾಯದ ಊಟ ಜರಿದ ನಾನು ಇಂದು ಅದೆ ಊಟ ಬಯಸುತ್ತಿರುವೆ ಆ ಕಾಲದ ಸಂಪ್ರದಾಯ ಕಲಿತವರು ಯಾರು ಇಲ್ಲಾ. ಎಲ್ಲಾ ಆಧುನಿಕ ಅಡುಗೆ ಕಲಿತವರೆ ಇದ್ದಾರೆ.''-ಜಗ್ಗೇಶ್

ಉಪ್ ಸಾರು ಮಾಡಿಕೊಟ್ಟ ಸಹೋದರಿ
''ನನ್ನ ಪುಣ್ಯಕ್ಕೆ ನನ್ನ ಹಿರಿ ಅಕ್ಕ ಮಹಾದೇವಿ ಅಮ್ಮನ ಕೈಚಳಕ ಕಲಿತವಳು ಇದ್ದಾಳೆ. ಏನು ಮಾಡೋದು ಅವಳ ಮಕ್ಕಳು ಅಮೇರಿಕ ದುಬೈನಲ್ಲಿ ಇದ್ದಾರೆ ಹಾಗಾಗಿ ಎರಡುವರ್ಷ ಅವಳು ದೂರ ಇದ್ದಳು. ಕಳೆದ ವಾರ ವಾಪಸ್ ಬಂದುಬಿಟ್ಟಳು. ಆಕೆ ಏನು ಬೇಕು? ಎಂದು ಕೇಳಿದ್ದೆ ತಡ. ಮಾದೇವಮ್ಮ ಅಮ್ಮನಂತೆ ಉಪ್ಪ್ ಸಾರು ಮಾಡಿಕೊಡಮ್ಮ ಎಂದದ್ದೆ ತಡ ಬಹಳ ಖುಷಿಯಿಂದ ಉಪ್ ಸಾರು ಅವರೆ ಪಲ್ಯ ಮಾಡಿಕೊಟ್ಟಳು.''- ಜಗ್ಗೇಶ್

ಅಮ್ಮನ ಅಡುಗೆ ನೆನೆದು ಕಣ್ಣೀರು
''ಯಾರ ಬಳಿ ಮಾತಾಡದೆ ತಿನ್ನುತ್ತಿದ್ದೆ ಕಣ್ಣೀರು. ಅಮ್ಮನ ನೆನೆದು ಕನ್ನೆಯಿಂದ ಜಾರುತ್ತಿತ್ತು. ಸೂಕ್ಷ್ಮ ಮನಸ್ಸು ಯವ್ವನದಲ್ಲಿ ಅಮ್ಮನ ಊಟ ಜರಿದ ನನ್ನ ಕ್ಯಾಕರಿಸಿ ಉಗಿಯುತ್ತಿತ್ತು. ಸ್ನೇಹಿತರೆ ಲೋಕ ಎಷ್ಟೆ ಮುಂದೆ ಹೋದರು ಅನೇಕರು ಅನೇಕ ಪದ್ದತಿ ಪಾಲಿಸಿದರು. ನಾವು ಬೆಳೆದ ಪರಿಸರ, ಅಪ್ಪ ಅಮ್ಮನ ಮಡಿಲು ಅವರ ಊಟದಪದ್ದತಿ ಸಂಪ್ರದಾಯ ಅವರ ಭಾವನಾತ್ಮಕ ಸಂಬಂಧ ಅವರ ನಿಶ್ಕಲ್ಮಷ ಪ್ರೀತಿ. ಜಗತ್ತಿನಲ್ಲಿ ಯಾವುದು ಸಮವಲ್ಲಾ. ಇದ್ದಾಗ ಅವರ ಅನುಸರಿಸಿ ಮುಂದಿನ ಜನ್ಮಕ್ಕಾಗುವಷ್ಟು ಪ್ರೀತಿಸಿಬಿಡಿ. ಅವರು ನಮ್ಮ ಬಿಟ್ಟು ಹೋದರೆ ಜನ್ಮಕ್ಕು ನಮಗೆ ಸಿಗದೆ ನೆನಪು ಕಣ್ಣೀರು. ಬಿಟ್ಟು ಹೋಗಿಬಿಡುತ್ತಾರೆ. ಅಮ್ಮನ ಕೈ ರುಚಿ ನನ್ನ ಹಿಂದಕ್ಕೆಸರಿಸಿ ಅಣಕಿಸಿತು. ಅಮ್ಮ I Love You'' - ಜಗ್ಗೇಶ್


Click it and Unblock the Notifications











