ವಿಷ್ಣು ಸ್ಮಾರಕ ವಿಚಾರದಲ್ಲಿ ಕಲಾವಿದರನ್ನ ದೂಷಿಸುವುದು ಸರಿಯಲ್ಲ: ಜಗ್ಗೇಶ್
ಡಾ ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರದಲ್ಲಿ ಸಿನಿಮಾ ತಾರೆಯರು ಯಾಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆಯನ್ನ ವಿಷ್ಣು ಅಭಿಮಾನಿಗಳು ಪದೇ ಪದೇ ಕೇಳುತ್ತಿದ್ದಾರೆ. ವಿಷ್ಣು ಅವರ ಹೆಸರನ್ನ ಬಳಸಿಕೊಂಡು ಸಿನಿಮಾ ಮಾಡ್ತಾರೆ, ಆದ್ರೆ, ಸ್ಮಾರಕ ವಿಚಾರದಲ್ಲಿ ಯಾರೊಬ್ಬರು ಮಾತನಾಡುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬೇಸರವನ್ನ ವ್ಯಕ್ತಪಡಿಸಿದ್ದರು.
ಇತ್ತೀಚಿಗಷ್ಟೇ ಕಿಚ್ಚ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಸ್ಮಾರಕ ವಿಚಾರವಾಗಿ ಚರ್ಚೆ ನಡೆಸಿದ್ದರು. ಈ ಬೆಳೆವಣಿಗೆಯ ನಂತರ ಸಿನಿ ಕಲಾವಿದರು ಒಟ್ಟಿಗೆ ಮುಂದೆ ಬರಬೇಕು ಎಂಬ ಒತ್ತಾಯ ಹೆಚ್ಚಾಗಿತ್ತು.
ಹೀಗಿರುವಾಗ, ನವರಸ ನಾಯಕ ಜಗ್ಗೇಶ್ ಅವರು ವಿಷ್ಣು ಸ್ಮಾರಕದ ಬಗ್ಗೆ ಹಾಗೂ ವಿಷ್ಣು ಅಭಿಮಾನಿಗಳಿಗೆ ಒಂದು ವಿಷ್ಯವನ್ನ ಮನದಟ್ಟು ಮಾಡಿಕೊಟ್ಟಿದ್ದಾರೆ. ತಮ್ಮ ಫೇಸ್ ಬುಕ್ ಮೂಲಕ ವಾಸ್ತವದ ಬಗ್ಗೆ ಅರಿವು ಮೂಡಿಸಿದ್ದಾರೆ. ಜಗ್ಗೇಶ್ ಅವರು ಏನಂದ್ರು ಎಂಬುದನ್ನ ಅವರದ್ದೇ ಮಾತುಗಳಲ್ಲಿ ಮುಂದೆ ಓದಿ.....

ಅಭಿಮಾನಿಗಳ ಪ್ರಶ್ನೆಗೆ ಜಗ್ಗೇಶ್ ಉತ್ತರ
''ವಿಷ್ಣು ಎಂಬ ಕನ್ನಡದ ಧ್ರುವತಾರೆಯನ್ನ ಯಾರು ಮರೆಯಲು ಸಾಧ್ಯವಿಲ್ಲಾ. ಮರೆತವರು ಉದ್ಧಾರವು ಆಗುವುದಿಲ್ಲಾ. ನೀವುಗಳು ಅವರನ್ನ ಸಿನಿಮಾದಲ್ಲಿ ನೋಡಿದ್ದೀರಿ. ನಾವು ವರ್ಷಗಟ್ಟಲೆ ಅವರ ಜೊತೆ, ಅವರ ಕಾಲದಲ್ಲಿ ನಟಿಸಿ ಹೆಜ್ಜೆ ಹಾಕಿದವರು. ಇದ ಹೇಳಲು ಕಾರಣ ನನ್ನ ಭಾವನಾತ್ಮಕ ಬರವಣಿಗೆ ಮಧ್ಯೆ ಉದ್ಭವವಾಗುವ ಅಭಿಮಾನಿಗಳ ಸ್ಮಾರಕ ಪ್ರಶ್ನೆ'' - ಜಗ್ಗೇಶ್, ನಟ

ಕಾನೂನಿನ ಮುಂದೆ ದೊಡ್ಡವರಿಲ್ಲ
''ಇಂದು ಅದರ ಬಗ್ಗೆ ಹೇಳುವೆ, ಮುಂದೆ ನೀವು ನಿರ್ಧಾರ ಮಾಡಿ ತಪ್ಪು ಯಾರದೆಂದು. ಉದ್ಯಮ ಅಂದರೆ ನಾವುಗಳು ಹೃದಯದಿಂದ ಆ ಸಾಧಕನ ಸ್ಮಾರಕ ಆಗಲೆಂದು ಆಶಿಸಿ ನಮ್ಮ ಅಳಿಲು ಯತ್ನವನ್ನು ಮಾಡಿದ್ದೇವೆ. ಮೂಲ ವಿಷಯ ಇದರ ಬಗ್ಗೆ ಕೆಲವು ಪರಿಸರ ಪ್ರೇಮಿಗಳು ಮೊದಲು ವಿಘ್ನ ಮಾಡಿಬಿಟ್ಟರು. ಕಾನೂನು ವ್ಯಾಪ್ತಿಗೆ ಬಂದಿತು ವಿಷಯ. ನಾವ್ಯಾರು ಕಾನೂನಿಗಿಂತ ದೊಡ್ಡವರಲ್ಲಾ. ಇದ ಪರಿಹರಿಸಲು ಸರ್ಕಾರ ಇನ್ನೊಂದು ಮಾರ್ಗಸೂಚಿ ನೀಡಿತು'' - ಜಗ್ಗೇಶ್, ನಟ

ಭಾರತಿ ಅವರ ನಿರ್ಣಯದಂತೆ ಕಾರ್ಯ ಪ್ರಗತಿಯಲ್ಲಿದೆ
''ಅದು ವಿಷ್ಣು ಗೌರವ ಉಳಿಸಲು ಪರ್ಯಾಯ ಜಾಗ. ಆಯ್ಕೆ ಶ್ರೀಮತಿ ಭಾರತಿ ಮೇಡಂ ರವರಿಗೆ ನೀಡಿತು. ನಾವುಗಳು ಅಭಿಮಾನಿಗಳು. ಭಾರತಿ ಮೇಡಂ ಅವರ ಅರ್ಧಾಂಗಿ. ಸಂಪೂರ್ಣ ಈ ವಿಷಯ ನಿರ್ಣೈಸಲು ಅವರಿಗೆ ಹಕ್ಕಿದೆ. ಅವರು, ಅವರ ಮಕ್ಕಳು, ಅಳಿಯ ಅವರ ಆತ್ಮೀಯ ಬಂಧುವಿನ ಗೌರವ ಉಳಿಸಲು ಮೈಸೂರು ಆಯ್ಕೆ ಮಾಡಿಕೊಂಡಿರುತ್ತಾರೆ. ಸರ್ಕಾರವು ಹೃದಯತುಂಬಿ ಒಪ್ಪಿದೆ. ಕಾರ್ಯಗತವಾಗುತ್ತಿದೆ ಮಹನೀಯನ ಮಂದಿರ'' - ಜಗ್ಗೇಶ್, ನಟ

ಪ್ರಶ್ನೆ ಯಾರಿಗೆ ಕೇಳಬೇಕು?
''ಈಗ ಹೇಳಿ ಪ್ರಶ್ನೆ ಯಾರಿಗೆ ಕೇಳಬೇಕು? ಇದ ಅರಿತು ತಾವುಗಳು ನಮ್ಮ ಉದ್ಯಮ ಕಲಾವಿದರನ್ನ ದಯಮಾಡಿ ಎಳೆದು ತರಬೇಡಿ ಹಾಗೂ ಯಾರನ್ನು ದೂಷಿಸಿ ಸಂತೋಷ ಪಡಬೇಡಿ. ನಿಮಗೆ ಇನ್ನು ಸಮಾಧಾನ ಆಗದಿದ್ದರೆ, ವಿಷ್ಣುಸಾರ್ ಭಕ್ತರು, ಭಾರತಿ ಮೇಡಂ ಜೊತೆ ಕೊತು ಚರ್ಚಿಸಿ ನಿರ್ಣಯಕ್ಕೆ ಬನ್ನಿ. ನಿಮ್ಮಂತೆ ವಿಷ್ಣುಸ್ಮಾರಕ ಆಗಲಿ ಬೇಗ ಎಂದು ಆಶಿಸುವ ಕೋಟಿ ಜನರಲ್ಲಿ ನಾನು ಒಬ್ಬ. ವಿಷ್ಣು ಸಾರ್ we all love you for ever..'' - ಜಗ್ಗೇಶ್, ನಟ


Click it and Unblock the Notifications











