'ಇಂಥ ಮಗನನ್ನು ಯಾಕೆ ಕೊಟ್ಟೆ? ಇವನಿಗೆ ಸಾವು ಕೊಡು' ಎಂದು ಜಗ್ಗೇಶ್ ತಂದೆ ದೇವರಲ್ಲಿ ಬೇಡಿಕೊಳ್ಳುತ್ತಿದಿದ್ದು ಯಾಕೆ?
ನವರಸನಾಯಕ ಜಗ್ಗೇಶ್ ಸಿನಿಮಾರಂಗದಲ್ಲಿ ಯಶಸ್ವಿ 40 ವರ್ಷಗಳನ್ನು ಪೂರೈಸಿದ್ದಾರೆ. ಸಾಕಷ್ಟು ಏಳು ಬೀಳುಗಳ ನಡುವೆ ಜಗ್ಗೇಶ್ ಇಂದು ಕನ್ನಡ ಚಿತ್ರರಂಗದ ಖ್ಯಾತ ನಟನಾಗಿ ಗುರುತಿಸಿಕೊಂಡಿದ್ದಾರೆ. ದೇವರ ಮೇಲೆ ಅಪಾರ ನಂಬಿಕೆ, ತಂದೆ-ತಾಯಿಯ ಮೇಲಿನ ಪ್ರೀತಿ, ಭಕ್ತಿ ಇದಕ್ಕೆಲ್ಲ ಕಾರಣ ಎನ್ನುತ್ತಾರೆ ಜಗ್ಗೇಶ್. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಭಕ್ತರಾಗಿರುವ ಜಗ್ಗೇಶ್ ರಾಯರ ಆಶೀರ್ವಾದದಿಂದ ತನ್ನ ಜೀವನ ಹೇಗೆ ಬದಲಾಯಿತು ಎನ್ನುವುದನ್ನು ವಿವರಿಸಿದ್ದಾರೆ.
ಅಪ್ಪ-ಅಮ್ಮ ಶಿವಪೂಜೆ ಮಾಡುತ್ತಿರುವ ಅಪರೂಪದ ಫೋಟೋ ಹಂಚಿಕೊಂಡಿರುವ ಜಗ್ಗೇಶ್ ತಂದೆ-ತಾಯಿಯೇ ಈ ಜಗದಲ್ಲಿ ನಿಜವಾದ ದೇವರು ಎಂದು ಹೇಳಿದ್ದಾರೆ. ಸ್ನೇಹಿತರ ಸಹವಾಸ ಮಾಡಿ, ಅಪಾಪೋಲಿಯಂತೆ ಹೊಡೆದಾಟ, ಬಡಿದಾಟ ಮಾಡುತ್ತ ತಿಂಗಳುಗಟ್ಟಲೆ ಮನೆ ಸೇರದೆ ಹೊರ ಉಳಿಯುತ್ತಿದ್ದೆ, ಇಂಥ ಅಮಾಯಕ ತಂದೆ-ತಾಯಿಗೆ ಅಪವಾದದ ಮಗನಾಗಿ ಹುಟ್ಟಿದ್ದೆ, ಹಿರಿಯ ಮಗನಾಗಿ ದಾರಿತಪ್ಪಿದ್ದೆ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಯಶಸ್ಸು ಗಳಿಸಿದ್ದೇನೆ, ಆದರೆ ಇದನ್ನು ನೋಡುವ ಅದೃಷ್ಟವನ್ನು ಆ ದೇವರು ತಾಯಿಗೆ ಕೊಟ್ಟಿಲ್ಲ ಎಂದು ಭಾವುಕರಾಗಿದ್ದಾರೆ. ಈ ಬಗ್ಗೆ ಜಗ್ಗೇಶ್ ದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

ಅಮಾಯಕ ತಂದೆ-ತಾಯಿಗೆ ಅಪವಾದದ ಮಗನಾಗಿಬಿಟ್ಟಿದ್ದೆ- ಜಗ್ಗೇಶ್
'ಹಿರಿ ಅಕ್ಕನಿಗೆ ಸಿಕ್ಕ ಕಳೆದುಹೋಗಿದ್ದ ಅಮ್ಮ ಅಪ್ಪನ ಜೊತೆಯಿದ್ದ ಅಪರೂಪದ ಚಿತ್ರ. ಇಬ್ಬರು ಹೀಗೆ ಒಟ್ಟಿಗೆ ಕೂತು ಶಿವಪೂಜೆ ಮಾಡುತ್ತಿದ್ದರು ಭಕ್ತಿಯಿಂದ ದಿನನಿತ್ಯ. ಸ್ನೇಹಿತರ ಸಹವಾಸ ಧೋಷದಿಂದ ನಾನು ಅಪಾಪೋಲಿಯಂತೆ ಹೊಡೆದಾಟ, ಬಡಿದಾಟ ಮಾಡುತ್ತ ತಿಂಗಳುಗಟ್ಟಲೆ ಮನೆ ಸೇರದೆ ಹೊರ ಉಳಿಯುತ್ತಿದ್ದೆ. ಇಂಥ ಅಮಾಯಕ ತಂದೆ-ತಾಯಿಗೆ ಅಪವಾದದ ಮಗನಾಗಿಬಿಟ್ಟಿದ್ದೆ. ಹಿರಿಯ ಮಗನಾಗಿ ದಾರಿತಪ್ಪಿದೆ' ಎಂದಿದ್ದಾರೆ.

ಇವನಿಗೆ ಸಾವುಕೊಡು ಎಂದು ಬೇಡುತ್ತಿದ್ದನು- ಜಗ್ಗೇಶ್
'ಅಪ್ಪ ದೇವರ ಮುಂದೆ ಜೋರಾಗಿ ದೇವರೆ ಇಂಥ ಮಗನ ಯಾಕೆ ಕೊಟ್ಟೆ? ನೀನು ದೇವರೆ ಆದರೆ ಇವನಿಗೆ ಸಾವುಕೊಡು ಎಂದು ಬೇಡುತ್ತಿದ್ದನು. ಅಮ್ಮ ಮಾತ್ರ ನನ್ನ ಮೇಲೆ ಅಪಾರವಾದ ನಂಬಿಕೆ ಪ್ರೀತಿ. ಆದರು ಯಾಕೋ ಒಂದು ದಿನ ಅಪ್ಪ ಬೈಯುವುದು ಕೇಳಿ ರೋಸಿಹೋಗಿ ರೈಲಿನ ಕಂಬಿಯ ಮೇಲೆ ಮಲಗಿಬಿಟ್ಟೆ. ಆ ಕ್ಷಣ ಈಗ ನೆನೆದರು ಜೀವ ಹೋದಂತೆ ಭಯವಾಗುತ್ತದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

3 ತಿಂಗಳು ಮಂತ್ರಾಲಯದಲ್ಲಿದ್ದ ಜಗ್ಗೇಶ್
'ಅಂದು ಅಮ್ಮನಿಗೆ ರೈಲ್ವೆ ಕಂಬಿಯ ಮೇಲೆ ಮಾತು ಕೊಟ್ಟೆ ದಯಮಾಡಿ ಕ್ಷಮಿಸು ನಿನ್ನ ಮಾತಿನಂತೆ ಬದುಕುವೆ ಎಂದು. ಆಗ ಅಮ್ಮ ಶಿವಲಿಂಗದ ಮುಂದೆ ಕೂರಿಸಿ ಯಾವ ತಪ್ಪು ಮಾಡುವುದಿಲ್ಲಾ ಎಂದು ಆಣೆ ಭಾಷೆ ಪಡೆದು ನನಗೆ 500ರೂ. ಕೊಟ್ಟು ಮಂತ್ರಾಲಯಕ್ಕೆ ಕಳಿಸಿಬಿಟ್ಟಳು. ಆಗ 1980ರ ಫೆಬ್ರುವರಿ ಮಂತ್ರಾಲಯದಲ್ಲಿ 3 ತಿಂಗಳು ಇದ್ದುಬಿಟ್ಟೆ.'
Recommended Video

ಯಶಸ್ಸು ನೋಡುವ ಅದೃಷ್ಟವನ್ನು ದೇವರು ಅಮ್ಮನಿಗೆ ಕೊಟ್ಟಿಲ್ಲ
'ಮುಂದೆ ನನ್ನ ಬದುಕಲ್ಲಿ ನಡೆದಿದ್ದೆಲ್ಲಾ ರಾಯರ ಪವಾಡ. ಆದರೆ ಮಗನ ಯಶಸ್ಸು ನೋಡುವ ಅದೃಷ್ಟ ಅನುಭವಿಸುವ ಯೋಗ ಅಪ್ಪನಿಗೆ ಸಿಕ್ಕಿತು, ಆದರೆ ನನ್ನ ತಾಯಿ ದೇವರಿಗೆ ಆ ಅದೃಷ್ಟ, ದೇವರು ಕೊಡದೆ ಕರೆದುಕೊಂಡು ಅವನೂರಿಗೆ ಹೋಗಿಬಿಟ್ಟ. ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು ಅನಿಸುತ್ತದೆ ನಿತ್ಯ ನಿರಂತರ. 57 ತುಂಬಿದ ಮಗನಿಗೆ. ತಂದೆ-ತಾಯಿ ಜಗದಲ್ಲಿ ನಿಜದೇವರು ಮಿಕ್ಕ ದೇವರು ತಂದೆ-ತಾಯಿಯ ಪ್ರತಿಬಿಂಬ ಮಾತ್ರ'


Click it and Unblock the Notifications











