'ವಿಷ್ಣು ಸ್ಮಾರಕದ ಬಗ್ಗೆ ತಪ್ಪು ಸಂದೇಶ ರವಾನೆ ಆಗುತ್ತೆ' ಎಂದ ಜಗ್ಗೇಶ್
ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಚರ್ಚೆ ಮತ್ತೆ ಶುರುವಾಗಿದೆ. ಸದ್ಯ ಈ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಅಂಬರೀಶ್ ಅವರ ನಿಧನದ ನಂತರ ಅವರನ್ನೂ ಅಭಿಮಾನ್ ಸ್ಟೂಡಿಯೋದಲ್ಲಿ ಅಂತ್ಯಕ್ರಿಯೆ ಮಾಡಬೇಕು ಎನ್ನುವುದು ಕೆಲವರ ಒತ್ತಾಯವಾಗಿತ್ತು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಇಬ್ಬರು ಸ್ನೇಹಿತರು ಒಂದೇ ಕಡೆ ಇರಲಿ ಎನ್ನುವುದು ಕೆಲ ಅಭಿಮಾನಿಗಳ ಆಸೆ ಆಗಿತ್ತು.
ಕೊನೆಗೆ ಕಂಠೀರವ ಸ್ಟೂಡಿಯೊದಲ್ಲಿ ಅಂಬರೀಶ್ ಅವರ ಅಂತ್ಯಕ್ರಿಯೆ ನಡೆಯಿತು. ಅಲ್ಲಿ ಅವರ ಸ್ಮಾರಕ ಕೂಡ ಮಾಡುವ ತಯಾರಿ ಶುರುವಾಗಿದ್ದು, ಈಗಾಗಲೇ ಸ್ಮಾರಕದ ಬೂ ಪ್ರಿಂಟ್ ಕೂಡ ಸಿದ್ಧವಾಗಿದೆ.
ರಾಜ್ ಕುಮಾರ್ ಹಾಗೂ ಅಂಬರೀಶ್ ಅವರ ರೀತಿ ಈಗ ವಿಷ್ಣುವರ್ಧನ್ ಅವರಿಗೆ ಸಹ ಸ್ಮಾರಕ ಆಗಬೇಕು ಎಂದು ಜಗ್ಗೇಶ್ ತಮ್ಮ ಕೋರಿಕೆ ಇಟ್ಟಿದ್ದಾರೆ. ಮುಂದೆ ಓದಿ..

ಮುಖ್ಯಮಂತ್ರಿಗಳಿಗೆ ಮನವಿ
ಡಾ.ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಟ ಜಗ್ಗೇಶ್ ಮನವಿ ಮಾಡಿದ್ದಾರೆ. ವಿಷ್ಣುದಾದ ಅವರ ಒಂದು ಸ್ಮಾರಕ ಆಗಬೇಕು ಎಂದು ಜಗ್ಗೇಶ್ ತಮ್ಮ ಕೋರಿಕೆಯನ್ನು ಸಿಎಂ ಮುಂದೆ ಇಟ್ಟಿದ್ದಾರೆ. ಈ ಹಿಂದೆಯೂ ಅಂಬರೀಶ್ ಇರುವಾಗ ಒಮ್ಮೆ ಜಗ್ಗೇಶ್ ಮುಖ್ಯಮಂತ್ರಿಗಳನ್ನು ಈ ವಿಚಾರವಾಗಿ ಭೇಟಿ ಮಾಡಿದ್ದರಂತೆ.
ಜಗ್ಗೇಶ್ ಟ್ವೀಟ್
''ಸಿನಿಮಾ ಸಂಬಂಧದೊಂದಿಗೆ ಬೆಳೆದ ನಮ್ಮ ಮಾನ್ಯ ಮುಖ್ಯಮಂತ್ರಿಗಳು #CMkarnataka ಶ್ರೀ ಕುಮಾರಸ್ವಾಮಿರವರು #ವಿಷ್ಣುಸೇನೆ #ಭಾರತಿ ವಿಷ್ಣುರ ಜೊತೆ ಚರ್ಚಿಸಿ ದಯಮಾಡಿ. #ವಿಷ್ಣುದಾದಾ ಸ್ಮಾರಕ ನಿರ್ಮಾಣದ ವಿಷಯಕ್ಕೆ ಇತಿಶ್ರೀ ಹಾಡಿ. ದಾದನ ಅಭಿಮಾನಿಗಳಿಗೆ, ಕನ್ನಡಿಗರಿಗೆ ಸಂತೋಷ ಸಮಾಧಾನ ಸಿಗುವಂತೆಮಾಡಿ.. ಇಲ್ಲದಿದ್ದರೆ ತಪ್ಪು ಸಂದೇಶ ರವಾನೆ ಆಗುತ್ತೆ.'' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕಂಠೀರವ ಸ್ಟೂಡಿಯೋದಲ್ಲಿಯೇ ವಿಷ್ಣು ಸ್ಮಾರಕ?
ರಾಜ್ ಕುಮಾರ್ ಸ್ಮಾರಕ ಕಂಠೀರವ ಸ್ಟೂಡಿಯೊದಲ್ಲಿದೆ. ಈಗ ಅಂಬರೀಶ್ ಅವರ ಸ್ಮಾರಕ ಕೂಡ ಅಲ್ಲಿಯೇ ನಿರ್ಮಾಣ ಆಗುತ್ತಿದೆ. ಈ ಕಾರಣದಿಂದ ವಿಷ್ಣುವರ್ಧನ್ ಅವರ ಸ್ಮಾರಕ ಕೂಡ ಕಂಠೀರವ ಸ್ಟೂಡಿಯೊದಲ್ಲಿ ಮಾಡಬೇಕು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ವಿಷ್ಣುಸೇನಾ ಸಮಿತಿ ಎಚ್ಚರಿಕೆ
ಈ ಬಗ್ಗೆ ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದು, ''ರಾಜ್ ಮಾರ್ ಅವರಿಗೆ ಸ್ಮಾರಕ ಆಗ್ಹೋಯ್ತು, ಅಂಬಿಗೂ ಮಾಡ್ಬಿಡ್ತೀವಿ ಇನ್ನು ವಿಷ್ಣುದು ಮಾಡದಿದ್ರೆ ಸುಮ್ನೆ ವಿವಾದ ಆಗುತ್ತೆ ಅಂತ ಹೀಗೊಂದು ಹೇಳಿಕೆ ಕೊಡ್ತಿದ್ದೀರಾ? ಅದನ್ನೇನು ಟೂರಿಂಗ್ ಟಾಕೀಸ್ ಸಿನಿಮಾ ಅಂದ್ಕೊಂಡ್ ಬಿಟ್ರಾ ಸ್ವಾಮಿ? ಯಾವಾಗಂದ್ರೆ ಆವಾಗ, ಎಲ್ಲಿಗಂದ್ರೆ ಅಲ್ಲಿಗೆ ಶಿಫ್ಟ್ ಮಾಡೋಕೆ?'' ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

9 ವರ್ಷದಿಂದ ಇರುವ ವಿವಾದ
9 ವರ್ಷಗಳಿಂದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಲು ಸಾಧ್ಯವಾಗಲಿಲ್ಲ. ಬಾಲಕೃಷ್ಣ ಕುಟುಂಬ, ಭಾರತಿ ವಿಷ್ಣುವರ್ಧನ್, ಹಾಗೂ ಅಭಿಮಾನಿಗಳ ನಡುವಿನ ಜಟಾಪಟಿಯಿಂದ ಸರ್ಕಾರಕ್ಕೂ ಇದು ಕಗ್ಗಂಟಾಗಿ ಉಳಿದುಕೊಂಡಿದೆ. ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲಿ ಸ್ಮಾರಕ ಆಗಲಿ ಎಂಬ ಹಠ ಒಂದು ಕಡೆಯಾದರೆ, ಅಭಿಮಾನಿಗಳು ಸಮಾಧಿಯ ಸ್ಥಳದಲ್ಲಿಯೇ ಸ್ಮಾರಕ ಆಗಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.


Click it and Unblock the Notifications











