ಡಾ.ವಿಷ್ಣುವರ್ಧನ್ ರವರನ್ನ 'ಹೃದಯವಂತ' ಅನ್ನೋದು ಈ ಕಾರಣಕ್ಕೆ.!
ಸುಮಾರು ವರ್ಷಗಳ ಹಿಂದೆ, ನನ್ನ ಸ್ನೇಹಿತ ಕೆಲಸ ನಿಮಿತ್ತ ಕೇರಳಕ್ಕೆ ಹೋಗಿದ್ದ. ತಾನು ತಂಗಿದ್ದ ಹೋಟೆಲ್ ನಿಂದ ಗ್ರಾಹಕರನ್ನು ಕಾಣಲು ಆಟೋ ಹಿಡಿದು ಹೊರಟ. ಸ್ವಲ್ಪ ಹೊತ್ತಿನ ನಂತರ ತನ್ನ ಎಡ ಮತ್ತು ಬಲಕ್ಕೆ ತಿರುಗಿ ನೋಡಿದರೆ ಆತನಿಗೆ ಆಶ್ಚರ್ಯ ಕಾದಿತ್ತು. ಆಟೋ ಒಳಗೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರಗಳನ್ನು ಅಂಟಿಸಿದ್ದು ನನ್ನ ಸ್ನೇಹಿತನ ಗಮನಕ್ಕೆ ಬಂದಿತು.
ಕೊಡಲೇ ಆಟೋ ಚಾಲಕನನ್ನು ಕರ್ನಾಟಕದ ಒಬ್ಬ ಸಿನಿಮಾ ನಟನ ಫೋಟೊ ಏಕೆ ಅಂಟಿಸಿರುವಿರಿ ಎಂದು ವಿಚಾರಿಸಿದ. ಚಾಲಕನು ನೀಡಿದ ಉತ್ತರ ಹೀಗಿತ್ತು "ಸರ್ ಸ್ವಲ್ಪ ವರ್ಷಗಳ ಹಿಂದೆ ನನ್ನ ಅಮ್ಮನಿಗೆ ಅರೋಗ್ಯ ಸರಿ ಇರಲಿಲ್ಲ. ವೈದ್ಯರು ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಬೇಕಾಗಬಹುದು ಎಂದು ಹೇಳಿದರು. ಆಗ ನನ್ನ ಬಳಿ ಹಣವಿರಲಿಲ್ಲ. ನಾವೇನಿದ್ದರೂ ದಿನಗೂಲಿಗೆ ದುಡಿಯುವವರು. ನನ್ನ ಆಪ್ತರೊಬ್ಬರ ಸಲಹೆ ಮೇರೆಗೆ ಡಾ.ವಿಷ್ಣುವರ್ಧನ್ ಅವರನ್ನು ಕಂಡು ನನ್ನ ಕಷ್ಟಕಾರ್ಪಣ್ಯಗಳನ್ನು ತಿಳಿಸಿದೆ. ಕೂಡಲೇ ವಿಷಯದ ಗಂಭೀರತೆ ಅರಿತ ದಾದಾ ಅವರು ಹಿಂದೂ ಮುಂದು ನೋಡದೆ ಶಸ್ತ್ರ ಚಿಕಿತ್ಸೆಗೆ ಬೇಕಿದ್ದ ಸಂಪೂರ್ಣ ಹಣವನ್ನು ಭರಿಸಿದರು. ಆಪರೇಷನ್ ಯಶಸ್ವಿಯಾಯಿತು. ನನ್ನ ತಾಯಿ ಬದುಕಿದರು. ಇಂತಹ ಜೀವ ಉಳಿಸಿದ ಪುಣ್ಯಾತ್ಮನನ್ನು ಮರೆತರೆ ಭಗವಂತ ನನಗೆ ಒಳ್ಳೆಯದು ಮಾಡುವನೇ. ನನ್ನ ಜೀವನದಲ್ಲಿ ನಡೆದ ಈ ಪವಾಡದ ಸವಿನೆನಪಿಗಾಗಿ ಈ ಫೋಟೊಗಳನ್ನು ನನ್ನ ಆಟೋದಲ್ಲಿ ಅಂಟಿಸಿದ್ದೇನೆ. ಅವರು ನೂರ್ಕಾಲ ಬಾಳಬೇಕು, ಅವರ ಸಂಸಾರ ಚೆನ್ನಾಗಿರಬೇಕು" ಎಂದು ಹೇಳುತ್ತಾ ಕಣ್ಣು ಒರೆಸಿಕೊಂಡನು

ಇದನ್ನು ಕೇಳಿದ ನನ್ನ ಸ್ನೇಹಿತ ದಂಗಾಗಿ ಹೋದ. ಏನಪ್ಪ ಇದು ನಮ್ಮ ವಿಷ್ಣುವರ್ಧನ್ ಅವರು ಹೊರ ರಾಜ್ಯದಲ್ಲಿಯೂ ಪ್ರಸಿದ್ಧಿ ಹೊಂದಿದ್ದಾರೆ ಎಂದು ಬೆರಗಾದ.
ಇಂತಹ ನೂರಾರು ಕೆಲಸ-ಕಾರ್ಯಗಳನ್ನು ಡಾ.ವಿಷ್ಣುವರ್ಧನ್ ಅವರು ಮಾಡಿದ್ದಾರೆ. ಸಹಾಯ ಮಾಡಿದ ನಂತರ ಅವರು ಕೊನೆಯಲ್ಲಿ ಅವರು ಹೇಳುತ್ತಿದ್ದ ಮಾತು ಅಂದರೆ "ನಾನು ಸಹಾಯ ಮಾಡಿದೆ ಎಂದು ಯಾರಿಗೂ ಹೇಳಬೇಡಿ" ಎಂದು. ವಿಷ್ಣು ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಮಾಡಿದ ಕೆಲಸ-ಕಾರ್ಯಗಳು ಅವರ ಹೆಸರನ್ನು ಸೂರ್ಯ-ಚಂದ್ರ ಇರುವವರೆಗೂ ನೆನಪಿಸುವಂತೆ ಮಾಡುತ್ತದೆ.
ಡಾ.ವಿಷ್ಣುವರ್ಧನ್ ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. 'ಅಡಿಮೈ ಚೆಂಗಲ್' ಮತ್ತು 'ಕೌರವರ್' ಎಂಬ ಎರಡು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಐದು ಭಾಷೆಗಳಲ್ಲಿ ನಟಿಸಿ ಕರುನಾಡಿನ "ಪಂಚ ಭಾಷಾ ತಾರೆ" ಎನಿಸಿಕೊಂಡಿದ್ದಾರೆ.
ಅಂದ್ಹಾಗೆ, ಕೇರಳದಲ್ಲಿ ನಡೆದ ಈ ಘಟನೆಯನ್ನ ಇಷ್ಟೊತ್ತು ಹಂಚಿಕೊಂಡಿದ್ದು ಪತ್ರಕರ್ತ ಜನಾರ್ಧನ ರಾವ್ ಸಾಳಂಕೆ. ಇವರು "ಕರುಣಾಮಯಿ ಡಾ.ವಿಷ್ಣುವರ್ಧನ್" ಸೇರಿದಂತೆ ಡಾ.ವಿಷ್ಣುವರ್ಧನ್ ರವರ ಕುರಿತಾಗಿ 6 ಪುಸ್ತಕಗಳನ್ನು ಬರೆದಿದ್ದಾರೆ.


Click it and Unblock the Notifications











