ಇಂದು ನಟಿ ಜಯಂತಿ ವಾರ್ಡ್ ಗೆ ಶಿಫ್ಟ್ : ಸುಳ್ಳು ವದಂತಿಗಳಿಗೆ ಬ್ರೇಕ್
ಕನ್ನಡ ಸಿನಿಮಾರಂಗದ ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲಾಗಿ ಇಂದಿಗೆ ಮೂರು ದಿನಗಳು ಕಳೆದಿವೆ. 35 ವರ್ಷಗಳಿಂದ ಜಯಂತಿ ಅಸ್ತಮಾದಿಂದ ಬಳಲುತ್ತಿದ್ದು ಇತ್ತೀಚಿನ ದಿನಗಳಲ್ಲಿ ಉಸಿರಾಟದ ತೊಂದರೆಯು ಹೆಚ್ಚಾಗಿತ್ತು. ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿದೆ.
ಎರಡು ದಿನಗಳಿಂದ ವಿಕ್ರಂ ಆಸ್ಪತ್ರೆಯ ಹಿರಿಯ ಶ್ವಾಸಕೋಶ ತಜ್ಞ ಡಾ ಸತೀಶ್ ಚಿಕಿತ್ಸೆ ನೀಡುತ್ತಿದ್ದು ತೀವ್ರ ನಿಗಾಘಟಕದಲ್ಲಿರುವ ಜಯಂತಿ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು, ಜಯಂತಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದ ತಕ್ಷಣ ಚಿತ್ರರಂಗದ ಅನೇಕ ಗಣ್ಯರು ಮತ್ತು ಕಲಾವಿದರು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಇತ್ತ ಜಯಂತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿತ್ತಿದ್ದರೆ ಹೊರಗಡೆ ಜಯಂತಿ ನಿಧನ ಹೊಂದಿದ್ದಾರೆ ಎನ್ನುವ ಸುದ್ದಿಗಳು ಹರಡುವುದಕ್ಕೆ ಶುರುವಾಗಿದೆ. ಕೇವಲ ಸಾಮಾನ್ಯ ಜನರು ಮಾತ್ರವಲ್ಲದೆ ಅದೆಷ್ಟೋ ಸಿನಿಮಾ ಸ್ಟಾರ್ ಗಳು ಕೂಡ ಜಯಂತಿ ನಿಧನರಾಗಿದ್ದಾರೆ ಎಂದುಕೊಂಡಿದ್ದಾರೆ. ಹಾಗಾದರೆ ಜಯಂತಿ ಹೇಗಿದ್ದಾರೆ? ಈ ಸುದ್ದಿ ಹರಡಲು ಕಾರಣವೇನು? ಜಯಂತಿ ಅವರ ಪುತ್ರ ತಾಯಿಯ ಆರೋಗ್ಯದ ಬಗ್ಗೆ ಏನು ಹೇಳುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ .

ಜಯಂತಿ ಬದುಕಿದ್ದಾರೆ
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ನಟಿ ಜಯಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದಿನಗಳ ಚಿಕಿತ್ಸೆ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವಿಕ್ರಂ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸುಳ್ಳು ಸುದ್ದಿ ಹಬ್ಬಲು ಕಾರಣವೇನು?
ಇತ್ತೀಚಿನ ದಿನಗಳಲ್ಲಿ ಸ್ಪರ್ಧೆಗಳು ಹೆಚ್ಚಾಗಿದೆ. ಆನ್ ಲೈನಲ್ ನಲ್ಲಿ ಜನರು ಹೆಚ್ಚು ಬ್ಯುಸಿ ಆಗಿದ್ದಾರೆ. ನಾ ಮುಂದು ತಾ ಮುಂದು ಎಂದು ಸುದ್ದಿಗಳನ್ನ ಹರಡುತ್ತಿದ್ದಾರೆ. ನಾವೇ ಮೊದಲು ಸುದ್ದಿ ಜನರಿಗೆ ತಲುಪಿಸಬೇಕು ಎನ್ನುವ ತರಾತುರಿಯಲ್ಲಿ ಈ ಕೆಲಸ ಆಗಿದೆ.

ಸುಳ್ಳು ಸುದ್ದಿಯಿಂದ ಎಡವಟ್ಟು
ಜಯಂತಿ ಸಾವಿನ ಸುದ್ದಿ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಎಂದರೆ ಸಿನಿಮಾರಂಗದ ಅನೇಕರು ಜಯಂತಿ ಇನ್ನಿಲ್ಲ ಎಂದು ತಿಳಿದುಕೊಂಡು ತಮ್ಮ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಸುದ್ದಿ ಹಾಕಿದ್ದಾದೆ. ನಟಿ ಸುಮಲತಾ ಕೂಡ ನಿನ್ನೆ ರಾತ್ರಿ ತಮ್ಮ ಟ್ವಿಟ್ಟರ್ ನಲ್ಲಿ ಜಯಂತಿ ಅವರ ಸಾವಿನ ಸುದ್ದಿ ಹಂಚಿಕೊಂಡಿದ್ದರು, ತದ ನಂತರ ಸುಳ್ಳು ಸುದ್ದಿ ಎಂದು ತಿಳಿದು ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಅಮ್ಮನ ಬಗ್ಗೆ ಮಗನ ಮಾತು
ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಆಸ್ಪತ್ರೆಯಲ್ಲಿಯೇ ಇದ್ದು ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಕೃಷ್ಣ ಕುಮಾರ್ ತಿಳಿಸಿರುವಂತೆ ಜಯಂತಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇಂದು ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆಗಳು ಇವೆ. ವದಂತಿಗಳಿಗೆ ಯಾರು ಗಮನ ಕೊಡಬೇಡಿ ಎಂದಿದ್ದಾರೆ.

ನಮ್ಮ ಆಶಯ
ನಟಿ ಜಯಂತಿ ಕನ್ನಡ ಸಿನಿಮಾರಂಗದಲ್ಲಿ ನಾಯಕಿಯಾಗಿ ಸಾಕಷ್ಟು ವರ್ಷ ಮಿಂಚಿದವರು. ವಯಕ್ತಿಕ ಜೀವನದಲ್ಲಿಯೂ ಪ್ರತಿಯೊಬ್ಬರ ಜೊತೆ ಸ್ನೇಹದಿಂದ, ಪ್ರೀತಿಯಿಂದ ಇದ್ದವರು. ಕನ್ನಡ ಸಿನಿಮಾರಂಗಕ್ಕೆ ಹಿರಿಯ ಜೀವಗಳ ಅವಶ್ಯಕತೆ ಇದೆ ಹಾಗಾಗಿ ಆಸ್ಪತ್ರೆಯಿಂದ ಬೇಗ ಗುಣಮುಖರಾಗಿ ಬರಲಿ ಎನ್ನುವುದೇ ನಮ್ಮ ಕಾಳಜಿ


Click it and Unblock the Notifications











