ಟಿಡಿಪಿ ಪಕ್ಷದ ನಾಯಕತ್ವ ಬದಲಾವಣೆ: ಜೂ.ಎನ್ಟಿಆರ್ ಬಗ್ಗೆ ಶಾಸಕನ ಹೇಳಿಕೆ ಸೃಷ್ಟಿಸಿದೆ ಸಂಚಲನ
ತೆಲುಗಿನ ಖ್ಯಾತ ನಟ ಜೂ.ಎನ್ಟಿಆರ್ ಅವರ ಕುಟುಂಬಕ್ಕೆ ನಟನೆ ಜೊತೆಗೆ ಇರುವಷ್ಟೆ ನಂಟು ರಾಜಕೀಯದ ಜೊತೆಗೂ ಇದೆ.
ಜೂ.ಎನ್ಟಿಆರ್ ಅವರ ತಾತ ಎನ್ಟಿಆರ್ ಅವರು ಟಿಡಿಪಿ ಪಕ್ಷ ಸ್ಥಾಪಿಸಿ ಮುಖ್ಯಮಂತ್ರಿಯಾಗಿ ಅವಿಭಜಿತ ಆಂಧ್ರಪ್ರದೇಶದ ಅಭಿವೃದ್ಧಿಗೆ ಕಾಣ್ಕೆ ನೀಡಿದವರು. ಜೂ.ಎನ್ಟಿಆರ್ ತಂದೆ ಹರಿಕೃಷ್ಣ ಅವರು ಸಚಿವರಾಗಿ, ಶಾಸಕರಾಗಿ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಚಿಕ್ಕಪ್ಪ ಬಾಲಕೃಷ್ಣ ಪ್ರಸ್ತುತ ಶಾಸಕ. ಮಾವ ಚಂದ್ರಬಾಬು ನಾಯ್ಡು ಮಾಜಿ ಸಿಎಂ, ಪ್ರಸ್ತುತ ಶಾಸಕ. ನಂದಮೂರಿ ಕುಟುಂಬದ ಹಲವರು ಪ್ರಸ್ತುತ ಸಕ್ರಿಯ ರಾಜಕೀಯದಲ್ಲಿದ್ದಾರೆ. ಟಿಡಿಪಿ, ಒಂದು ರೀತಿ ನಂದಮೂರಿ ಕುಟುಂಬದ್ದೇ ಪಕ್ಷ.
ಸೀನಿಯರ್ ಎನ್ಟಿಆರ್ ಇದ್ದಾಗ ಪ್ರಜ್ವಲಿಸಿದ್ದ ಟಿಡಿಪಿ ಪಕ್ಷ ಕಳೆದ ವಿಧಾನಸಭೆ ಚುನಾವಣೆ ಬಳಿಕ ಬಹುವಾಗಿ ಮಂಕಾಗಿದೆ. ಪಕ್ಷದ ಒಳಗೆ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಟಿಡಿಪಿ ಶಾಸಕರೊಬ್ಬರು ಜೂ.ಎನ್ಟಿಆರ್ ಬಗ್ಗೆ ಹೇಳಿರುವ ಮಾತುಗಳು ಆಂಧ್ರ, ತೆಲಂಗಾಣ ಸಿನಿ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆ ಎಬ್ಬಿಸಿವೆ.

ಶಾಸಕ ಗೋರಂಟ್ಲ ಬುಚ್ಚಯ್ಯ ಚೌದರಿ ಹೇಳಿಕೆ
ಟಿಡಿಪಿ ಪಕ್ಷದ 40 ನೇ ವ್ಯವಸ್ಥಾಪಕ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಟಿಡಿಪಿ ಪಕ್ಷದ ಶಾಸಕ ಗೋರಂಟ್ಲ ಬುಚ್ಚಯ್ಯ ಚೌದರಿ, 'ತೆಲುಗು ದೇಶಂ ಪಾರ್ಟಿಗೆ ಹೊಸ ನಾಯಕತ್ವದ ಅವಶ್ಯಕತೆ ಇದೆ. ಈ ಕಷ್ಟದ ಸಮಯದಲ್ಲಿ ಪಕ್ಷವನ್ನು ಬಲಗೊಳಿಸಲು ಜೂ.ಎನ್ಟಿಆರ್ ಅವರು ಆಗಮಿಸಬೇಕು' ಎಂದಿದ್ದಾರೆ.

'ಜೂ.ಎನ್ಟಿಆರ್ ಸಕ್ರಿಯ ರಾಜಕೀಯಕ್ಕೆ ಬರಲಿದ್ದಾರೆ'
ಮುಂದುವರೆದು ಮಾತನಾಡಿರುವ ಶಾಸಕ, ಜೂ.ಎನ್ಟಿಆರ್ ಸೇರಿದಂತೆ ಇನ್ನೂ ಕೆಲವು ನಾಯಕರು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಜೊತೆಯಾಗಲಿದ್ದಾರೆ ಎಂದಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಮಾತನಾಡಿದ್ದ ಚಂದ್ರಬಾಬು ನಾಯ್ಡು, ಪಕ್ಷದಲ್ಲಿ ಬದಲಾವಣೆ ತರುವುದಾಗಿ ಹೇಳಿದ್ದರು. ಈ ಹೇಳಿಕೆ ನಂತರ ಅದೇ ಪಕ್ಷದ ಶಾಸಕ ಹೀಗೆ ಮಾತನಾಡಿರುವುದು ಜೂ.ಎನ್ಟಿಆರ್ ಸಕ್ರಿಯ ರಾಜಕೀಯ ಪ್ರವೇಶ ದೂರವಿಲ್ಲವೆಂಬ ಅನುಮಾನ ಹುಟ್ಟಿಸಿದೆ.

ಚುನಾವಣಾ ಪ್ರಚಾರಗಳಲ್ಲಿ ಪಾಲ್ಗೊಂಡಿರುವ ಜೂ.ಎನ್ಟಿಆರ್
ಜೂ.ಎನ್ಟಿಆರ್ಗೆ ರಾಜಕೀಯ ಹೊಸದೇನೂ ಅಲ್ಲ. ಚುನಾವಣೆಗಳ ಸಂದರ್ಭಗಳಲ್ಲಿ ಜೂ.ಎನ್ಟಿಆರ್ ಅವರು ಟಿಡಿಪಿ ಪಕ್ಷದ ಪರವಾಗಿ ಚುನಾವಣೆ ಪ್ರಚಾರಗಳಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ. ಅವರ ಚುನಾವಣಾ ಪ್ರಚಾರಗಳಿಗೆ ಭಾರಿ ಸಂಖ್ಯೆಯ ಜನ ಸೇರುತ್ತಾರೆ ಸಹ.
Recommended Video

ಸಿನಿಮಾಗಳ ಮೇಲೆ ಹೆಚ್ಚಿಗೆ ಗಮನ ಹರಿಸಿರುವ ಜೂ.ಎನ್ಟಿಆರ್
ಜೂ.ಎನ್ಟಿಆರ್, ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದಾರೆ. ಸಿನಿಮಾಗಳ ಮೇಲಷ್ಟೆ ಗಮನ ಹರಿಸಿರುವ ಜೂ.ಎನ್ಟಿಆರ್ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸಕ್ರಿಯ ರಾಜಕೀಯಕ್ಕೆ ಇನ್ನೂ ಸಮಯವಿದೆ ಎಂದಿದ್ದರು. ಇದೀಗ ಜೂ.ಎನ್ಟಿಆರ್ ಮೇಲೆ ಒತ್ತಡ ಹೆಚ್ಚಾಗಿದ್ದು, ಈಗಲೇ ರಾಜಕೀಯಕ್ಕೆ ಧುಮುಕುತ್ತಾರಾ ಅಥವಾ ಇನ್ನೂ ಕೆಲ ವರ್ಷ ಕಾಯುತ್ತಾರಾ ನೋಡಬೇಕಿದೆ.


Click it and Unblock the Notifications











