ಸುದೀಪ್ ಪಾಲಿಗೆ ಭಾರೀ ಮಹತ್ವ ಪಡೆದುಕೊಂಡ ಜೂನ್ ತಿಂಗಳು
ಕಿಚ್ಚ ಸುದೀಪ್ ಅಭಿನಯದ ರನ್ನ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಶಿವಣ್ಣ ಅಭಿನಯದ ಜೋಗಿ ಚಿತ್ರಕ್ಕೆ ಎಷ್ಟು ಕ್ರೇಜ್ ಇತ್ತೋ 'ರನ್ನ' ಚಿತ್ರ ಕೂಡಾ ಅದೇ ಮಟ್ಟಿಗೆ ಕ್ರೇಜ್ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ ಎನ್ನುವುದು ಗಾಂಧಿನಗರದ ಮಂದಿಗಳ ಅಂಬೋಣ.
ಹತ್ತು ಹಲವು ಗೊಂದಲಗಳ ನಂತರ ತೆಲುಗು ರಿಮೇಕ್ ಚಿತ್ರವಾದ 'ರನ್ನ' ಇದೇ ರಾಯರ ದಿನವಾದ ಜೂನ್ ನಾಲ್ಕರಂದು ಬಿಡುಗಡೆಗೆ ಸಜ್ಜಾಗಿದೆ.
ಕನ್ನಡ ಚಿತ್ರಗಳ ಪಾಲಿಗೆ ತೀರಾ ಅಪರೂಪ ಎನ್ನುವಂತೆ ಬುಕ್ ಮೈ ಶೋ ತಾಣ ಸೋಮವಾರ (ಜೂ 1) ದಿಂದಲೇ ರನ್ನ ಚಿತ್ರದ ಆನ್ಲೈನ್ ಬುಕ್ಕಿಂಗ್ ಕೌಂಟರಿಗೆ ಚಾಲನೆ ನೀಡಿರುವುದು.
ವಾರದ ಹಿಂದೆ ರನ್ನ ಚಿತ್ರತಂಡವನ್ನು ಸಂಪರ್ಕಿಸಿದಾಗ 275+ ಚಿತ್ರಮಂದಿರ ಕನ್ಫರ್ಮ್ ಆಗಿದೆ ಎನ್ನುವ ಮಾತು ಚಿತ್ರತಂಡದಿಂದ ಕೇಳಿಬಂದಿತ್ತು. (ರನ್ನ ಬಿಡುಗಡೆ ಸಮಯದಲ್ಲಿ ಸುದೀಪ್ ಕ್ಷಮೆ)
ಚಿತ್ರಮಂದಿರದ ಅಂತಿಮ ಪಟ್ಟಿ ಒಂದೆರಡು ದಿನದಲ್ಲಿ ಸಿಗುತ್ತೆ ಎನ್ನುವ ಮಾಹಿತಿ ಚಿತ್ರ ನಿರ್ಮಾಪಕರಿಂದ ಲಭ್ಯವಾಗಿದೆ.
ಜೂನ್ ತಿಂಗಳು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಾಲಿಗೆ ಅತಿ ಮಹತ್ವದ ತಿಂಗಳು. ಸುದೀಪ್ ಸಿನಿಮಾ ವೃತ್ತಿ ಜೀವನಕ್ಕೆ ಜೂನ್ ತಿಂಗಳು ಉಚ್ಚ್ರಾಯ ಮಾಸವಾಗಲಿ ಎನ್ನುವುದು ಸಿನಿರಸಿಕರ ಮತ್ತು ಅವರ ಅಭಿಮಾನಿಗಳ ಆಶಯ.
ಯಾಕೆ ಜೂನ್ ತಿಂಗಳು ಸುದೀಪ್ ಪಾಲಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ ಎನ್ನುವುದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ರನ್ನ
ಪವನ್ ಕಲ್ಯಾಣ್ ಪ್ರಮುಖ ಭೂಮಿಕೆಯಲ್ಲಿದ್ದ ತೆಲುಗಿನ ಅತ್ತಾರಂಟೇಕಿ ದಾರಿಯೇದಿ ಚಿತ್ರದ ರಿಮೇಕ್ ರನ್ನ ಜೂನ್ ನಾಲ್ಕರಂದು ಬಿಡುಗಡೆಯಾಗಲಿದೆ. ಸುದೀಪ್, ರಚಿತಾ ರಾಮ್, ಹರಿಪ್ರಿಯಾ, ಪ್ರಕಾಶ್ ರೈ, ಚಿಕ್ಕಣ್ಣ, ಶರತ್ ಲೋಹಿತಾಶ್ವ, ಸಾಧು ಮುಂತಾದವರು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ.

ಕೆ ಎಸ್ ರವಿಕುಮಾರ್
ತಮಿಳಿನ ವೃತ್ತಿಪರ ನಿರ್ದೇಶಕ ಎಂದೇ ಹೆಸರಾಗಿರುವ ಕೆ ಎಸ್ ರವಿಕುಮಾರ್ ಅವರ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣವಾಗುವ ಚಿತ್ರದ ಶೂಟಿಂಗ್ ಜೂನ್ ಹನ್ನೆರಡರಂದು ಆರಂಭವಾಗಲಿದೆ. ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಿರ್ಮಾಪಕರ ಮುಷ್ಕರದಿಂದ ಚಿತ್ರ ಸೆಟ್ಟೇರುತ್ತೋ, ಏನೋ ಗೊತ್ತಿಲ್ಲ.

ರಾಹುಲ್ ಪ್ರಮುಖ ಭೂಮಿಕೆಯ ಚಿತ್ರ
ಸುದೀಪ್ ಪರಮಾಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ರಾಹುಲ್ ಪ್ರಮುಖ ಭೂಮಿಕೆಯಲ್ಲಿರುವ ಚಿತ್ರದ ಮಹೂರ್ತ ಇದೇ ಜೂನ್ ಏಳರಂದು ನಡೆಯಲಿದೆ. ಇದು ತಮಿಳು ಜಿಗರ್ತಂದ ಚಿತ್ರ ರಿಮೇಕ್, ಚಿತ್ರಕ್ಕೆ ಸುದೀಪ್ ನಿರ್ಮಾಪಕರು ಎನ್ನುವುದು ವಿಶೇಷ. ಇದೇ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಬೇಕಿದೆ, ನಿರ್ಮಾಪಕರ ಮುಷ್ಕರದಿಂದ ಚಿತ್ರದ ಶೂಟಿಂಗಿಗೆ ತೊಂದರೆ ಆದರೂ ಆಗಬಹುದು.

ಪ್ರಕಾಶ್
ಮಿಲನ, ವಂಶಿ ಚಿತ್ರ ಖ್ಯಾತಿಯ ಪ್ರಕಾಶ್ ನಿರ್ದೇಶನದ ಚಿತ್ರಕ್ಕೂ ಇದೇ ಜೂನ್ ಏಳಕ್ಕೆ ಮಹೂರ್ತ. ಈ ಚಿತ್ರ SJS ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರಡಿಯಲಿ ಮೂಡಿ ಬರುತ್ತಿದೆ. ಚಿತ್ರ ಆಗಸ್ಟ್ ತಿಂಗಳಲ್ಲಿ ಸೆಟ್ಟೇರಬಹುದು. ಮಹೂರ್ತಕ್ಕೆ ದಿನ ಅಂತೂ ನಿಗದಿಯಾಗಿದೆ, ಆದರೆ ನಿರ್ಮಾಪಕರ ಮುಷ್ಕರದಿಂದ ಮುಂದಿನ ಬೆಳವಣಿಗೆ ಏನಾಗುತ್ತೋ ಕಾದು ನೋಡಬೇಕಿದೆ.

ಕೃಷ್ಣ ಹೆಬ್ಬುಲಿ
ಗಜಕೇಸರಿ ಖ್ಯಾತಿಯ ಕೃಷ್ಣ, ಸುದೀಪ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡಾ ಎರಡು ತಿಂಗಳ ನಂತರ ಆರಂಭವಾಗಬಹುದು. ಈ ಚಿತ್ರದ ಮಹೂರ್ತ ಕೂಡಾ ಜೂನ್ ಏಳಕ್ಕೆ ಮತ್ತು SJS ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರಡಿಯಲಿ ಚಿತ್ರ ಮೂಡಿ ಬರುತ್ತಿದೆ. ಚಿತ್ರಕ್ಕೆ ಹೆಬ್ಬುಲಿ ಎಂದು ಹೆಸರಿಡಲಾಗಿದೆ. ಇಲ್ಲೂ ಅಷ್ಟೇ.. ನಿರ್ಮಾಪಕರ ಮುಷ್ಕರದಿಂದ ಏನಾಗುತ್ತೋ?


Click it and Unblock the Notifications











