ಕನ್ನಡಿಗರ ಪ್ರೀತಿಗೆ ಪರವಶರಾದ ಕಮಲ್ ಹಾಸನ್
ಕರ್ನಾಟಕದಲ್ಲಿ ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ಕರ್ನಾಟಕದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಇದ್ಯಾವುದನ್ನೂ ಲೆಕ್ಕಿಸದೆ ನಟ ವಿಶಾರದ, ನಟ ಶೇಖರ, ತಮಿಳರ ಅಚ್ಚುಮೆಚ್ಚಿನ 'ಉಲಗ ನಾಯಗನ್' (ಅಪ್ರತಿಮ ನಾಯಕ) ಕಮಲ್ ಹಾಸನ್ ಶನಿವಾರ (ಫೆ.9) ಬೆಂಗಳೂರಿಗೆ ಭೇಟಿ ಅಚ್ಚರಿ ಮೂಡಿಸಿದರು.
ಅವರು ಮೊದಲು ರೆಬೆಲ್ ಸ್ಟಾರ್ ಅಂಬರೀಶ್ ಅವರ ಜೆಪಿ ನಗರದ ಮನೆಗೆ ಭೇಟಿ ನೀಡಿ ಉಭಯಕುಶಲೋಪರಿ ವಿಚಾರಿಸಿದರು. ಅಂಬಿ ಮನೆಯಲ್ಲಿ ಅವರು ಲಘು ಉಪಹಾರ ಸ್ವೀಕರಿಸಿದ ಬಳಿಕ ಮಲ್ಲೇಶ್ವರಂನ ರೇಣುಕಾ ಥಿಯೇಟರ್ ಗೆ ಆಗಮಿಸಿದರು.
ಅಂಬರೀಶ್ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿರುವುದನ್ನು ಕಮಲ್ ಅಭಿನಂದಿಸಿದರು. ಬಹುಶಃ ತಾವು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಅವರಿಗೆ ಈ ಗೌರವ ಲಭಿಸಿರುವುದು ಕಾಕತಾಳೀಯವೇನೋ ಎಂದು ಕಮಲ್ ಹೇಳಿದರು. ಸ್ಲೈಡ್ ಗಳಲ್ಲಿ ಓದಿ ಕಮಲ್ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು...

ಹೇ ಹೋಗ್ರಯ್ಯ ಅವರೇನು ರಾಜಕೀಯ ವ್ಯಕ್ತಿಯಲ್ಲ
ಅಂಬಿ ಮನೆಯ ಮುಂದೆ ಪತ್ರಕರ್ತರೊಬ್ಬರನ್ನು ಕಮಲ್ ಅವರನ್ನು ಅಫ್ಜರ್ ಗುರು ಗಲ್ಲಿಗೇರಿಸಿದ ಬಗ್ಗೆ ಗಮನಸೆಳೆದರು. ಅವರು ಉತ್ತರ ನೀಡುವುದಕ್ಕೂ ಮುನ್ನ ಮಧ್ಯ ಪ್ರವೇಶಿಸಿದ ಅಂಬಿ, ಹೇ ಹೋಗ್ರಯ್ಯ ಈ ಪ್ರಶ್ನೆಗೆ ಉತ್ತರಿಸುವುದಕ್ಕೆ ಅವರೇನು ರಾಜಕೀಯ ವ್ಯಕ್ತಿಯಲ್ಲ ಎಂದು ಅಷ್ಟಕ್ಕೆ ಮುಕ್ತಾಯ ಹೇಳಿದರು.

ಕರ್ನಾಟಕ ಜನತೆಗೆ ಚಿರಋಣಿ ಎಂದ ಕಮಲ್
ತಮ್ಮ ವಿಶ್ವರೂಪಂ ಚಿತ್ರಕ್ಕೆ ಕರ್ನಾಟಕದ ಜನತೆ ತೋರಿದ ಪ್ರೀತಿಗೆ ಮೂಕನಾಗಿದ್ದೇನೆ. ಕರ್ನಾಟಕದ ಪೊಲೀಸ್, ಸರ್ಕಾರ ಹಾಗೂ ಜನತೆಗೆ ತಾವು ಚಿರಋಣಿಯಾಗಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಮಲ್ ಜೊತೆ ನಟ ರಮೇಶ್ ಅರವಿಂದ್ ಅವರೂ ಪಾಲ್ಗೊಂಡಿದ್ದರು.

ಕರ್ನಾಟಕದೊಂದಿಗೆ ನನಗೆ ಹಳೆಯ ಸಂಬಂಧ
ವಿಶ್ವರೂಪಂ ಚಿತ್ರ ಕೇವಲ ಸಿನಿಮಾ ಅಲ್ಲ. ಇದೊಂದು ಇತಿಹಾಸದ ಪುಟವಿದ್ದಂತೆ ಎಂದು ರಮೇಶ್ ಈ ಸಂದರ್ಭದಲ್ಲಿ ಹೇಳಿದರು. ಕರ್ನಾಟಕದೊಂದಿಗೆ ನನ್ನದು ಹಳೆಯ ಸಂಬಂಧ ಎಂದರು. ಕಮಲ್ ಕನ್ನಡದಲ್ಲೇ ಮಾತನಾಡಲು ಮುಂದಾದರಾದರೂ ಎಲ್ಲಿ ತಪ್ಪು ತಪ್ಪಾಗಿ ಮಾತನಾಡಿ ಆಭಾಸವಾಗುತ್ತದೋ ಎಂದು ಅವರು ಇಂಗ್ಲಿಷ್ ನಲ್ಲೇ ಮಾತನಾಡಿದರು.

ಕಲಾವಿದರಿಗೆ ಹೊಸ ಸವಾಲಾದ ವಿವಾದ
'ವಿಶ್ವರೂಪಂ' ಚಿತ್ರಕ್ಕಷ್ಟೇ ಅಲ್ಲ ಈ ರೀತಿಯ ಸಮಸ್ಯೆಗಳು ಎದುರಾಗಿದ್ದು ಮಣಿರತ್ನಂ ಅವರ 'ಕಡಲ್' ಹಾಗೂ ತುಪಾಕಿ ಚಿತ್ರಕ್ಕೂ ಇದೇ ರೀತಿಯ ಸವಾಲು ಎದುರಾಗಿತ್ತು. ಈ ರೀತಿಯ ಸಮಸ್ಯೆಗಳು ನನ್ನಂತಹ ಕಲಾವಿದನಿಗೆ ಹೊಸ ಸವಾಲೊಡ್ಡಿವೆ ಎಂದರು.

ಆಕ್ಷೇಪಾರ್ಹ ದೃಶ್ಯಗಳು ಮ್ಯೂಟ್ ಆಗಿವೆ ಅಷ್ಟೇ
ಚಿತ್ರದಲ್ಲಿ ಆಕ್ಷೇಪಾರ್ಹ ಸನ್ನಿವೇಶಗಳಿಗೆ ಕತ್ತರಿ ಹಾಕಿಲ್ಲ. ಎಲ್ಲೆಲ್ಲಿ ಆಕ್ಷೇಪಾರ್ಹ ಸನ್ನಿವೇಶಗಳಿವೆ ಎಂದು ಹೇಳಲಾಗಿತ್ತೋ ಅಲ್ಲೆಲ್ಲಾ ಸೌಂಡ್ ಮ್ಯೂಟ್ ಮಾಡಲಾಗಿದೆ ಅಷ್ಟೇ. ಚಿತ್ರದಲ್ಲಿ ಎಲ್ಲೂ ಕತ್ತರಿ ಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜಕೀಯದ ಬಗ್ಗೆ ನನಗೆ ಆಸಕ್ತಿಯಿಲ್ಲ
ಕರ್ನಾಟಕದೊಂದಿಗೆ ನನಗೆ ಸಾಕಷ್ಟು ಒಡನಾಡ, ಬಂಧನವಿದೆ. ನನ್ನ ಮೊಟ್ಟ ಮೊದಲ ಮಲಯಾಳಂ ಚಿತ್ರ ನಿರ್ಮಾಣವಾಗಿದ್ದು ಕರ್ನಾಟಕದಲ್ಲೇ. ನನ್ನ ಎಲ್ಲ ಒಳ್ಳೆಯ ಕೆಲಸಗಳ ಹಿಂದೆ ಕನ್ನಡದ ಸ್ನೇಹಿತರಿದ್ದಾರೆ. ರಾಜಕೀಯದ ಬಗ್ಗೆ ನನಗೆ ಆಸಕ್ತಿಯಿಲ್ಲ. ಸಿನಿಮಾನೇ ನನ್ನ ಧರ್ಮ ಎಂದರು.

ಚಿತ್ರಗಳನ್ನು ವಿರೋಧಿಸುವುದೇ ಈಗಿನ ಟ್ರೆಂಡ್
ವಿಶ್ವರೂಪಂ ಚಿತ್ರಕ್ಕೆ ಯಾಕೆ ವಿವಾದ ಹುಟ್ಟುಕೊಂಡಿತೋ ಗೊತ್ತಿಲ್ಲ. ಚಿತ್ರಗಳನ್ನು ವಿರೋಧಿಸುವುದೇ ಈಗಿನ ಟ್ರೆಂಡ್ ಆಗಿದೆ. ಪೈರಸಿ ಒಂದು ಶಾಪವಾಗಿದೆ ಎಂದ ಅವರು, ಡಿಟಿಎಚ್ ನಲ್ಲಿ ಚಿತ್ರ ಬಿಡುಗಡೆ ನಿರ್ಧಾರ ವಿವಾದಕ್ಕೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.

ನಾನೊಬ್ಬ ಟೂರಿಂಗ್ ಆರ್ಟಿಸ್ಟ್ ಇದ್ದಂತೆ
ಉತ್ತಮ ಸಿನಿಮಾ ಮಾಡುವುದೇ ನನ್ನ ಆದ್ಯತೆ. ನಾನೊಬ್ಬ ಟೂರಿಂಗ್ ಆರ್ಟಿಸ್ಟ್ ಇದ್ದಂತೆ. ನನಗೆ ಯಾವುದೇ ಭಾಷೆಯ ಹಂಗಿಲ್ಲ. ನೀವು ಕೊಟ್ಟಂತಹ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ರೈತರು ಹೇಗೆ ಸರ್ಕಾರದ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗುವುದಿಲ್ಲವೋ ನಾನೂ ಅಷ್ಟೇ ನಿಮ್ಮ ಅಪಾರ ಪ್ರೀತಿ ವಿಶ್ವಾಸವನ್ನು ಹಿಂದಕ್ಕೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದರು.

ವಿಶ್ವರೂಪಂ ಭಾಗ 2ಕ್ಕೆ ಸಿದ್ಧವಾದ ಕಮಲ್
ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡುವುದಿಲ್ಲ. ಸಾಮಾಜಿಕ ಸೇವೆಯೇ ನನ್ನ ಧ್ಯೇಯ. ಮುಂದಿನ ದಿನಗಳಲ್ಲಿ ಉತ್ತಮ ಚಿತ್ರವನ್ನು ನೀಡುತ್ತೇನೆ. ವಿಶ್ವರೂಪಂ ಭಾಗ 2ಕ್ಕೆ ಸಿದ್ಧತೆಗಳನ್ನು ನಡೆಸುತ್ತಿದ್ದೇನೆ ಎಂದರು.


Click it and Unblock the Notifications











