ಮತ್ತೆ ಬಣ್ಣ ಹಚ್ಚಲು ಬಂದ್ರು 'ಮೈನಾ' ಚೇತನ್, ಇಷ್ಟು ದಿನ ಎಲ್ಲಿದ್ರು.?
'ಆ ದಿನಗಳು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟ ಚೇತನ್ ಅವರು 'ಮೈನಾ' ಚಿತ್ರದಲ್ಲಿ ಮನಸೂರೆಗೊಳ್ಳುವ ನಟನೆ ಮಾಡಿ ಬಂದಹಾಗೆ ಮಾಯವಾಗಿ ಹೋಗಿದ್ದರು. ತದನಂತರ ಎಲ್ಲಿದ್ದಾರೆ? ಏನು? ಎತ್ತ ಅನ್ನೋ ಮಾಹಿತಿ ಯಾರಲ್ಲೂ ಇರಲಿಲ್ಲ.
'ಮೈನಾ' [ವಿಮರ್ಶೆ : 'ಮೈನಾ' ಎಂಬ ಸುಂದರ ದೃಶ್ಯ ಕಾವ್ಯ] ಹಿಟ್ ಆದ ಕೂಡಲೇ ಹಲವಾರು ಅವಕಾಶಗಳು ಅರಸಿಕೊಂಡು ಬಂದರು ಕೂಡ ಯಾವುದನ್ನು ಕೈ ಹಿಡಿಯದ ಚೇತನ್ ಅವರು ಇದೀಗ ಮತ್ತೆ ಗಾಂಧಿನಗರದ ಕಡೆ ಮುಖ ಮಾಡಿದ್ದಾರೆ.

ಸುಮಾರು 3 ವರ್ಷಗಳ ಬಳಿಕ ಬಣ್ಣ ಹಚ್ಚಲು ತಯಾರಾಗಿರುವ ನಟ ಚೇತನ್ ಅವರು ಈ ಬಾರಿ ಮರಾಠಿ ಕಾದಂಬರಿ ಆಧಾರಿತ ಇನ್ನೂ ಹೆಸರಿಡದ ವಿಭಿನ್ನ ಚಿತ್ರವೊಂದರಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಡಿಂಗ್ರಿ ನಾಗರಾಜ್ ಅವರ ಮಗ ರಾಜ್ ವರ್ಧನ್ ಅವರು ಸಾಥ್ ನೀಡಲಿದ್ದಾರೆ.

ಖ್ಯಾತ ಬರಹಗಾರ ಸುಹಾಸ್ ಶಿರ್ವಾಲ್ಕರ್ ಅವರು ಬರೆದಿರುವ 'ದುನಿಯಾದಾರಿ' ಎಂಬ ಮರಾಠಿ ಕಾದಂಬರಿಯನ್ನು ಆಧರಿಸಿರುವ ಈ ಕಥೆಯನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಬಳಸಿಕೊಂಡು ಸಿನಿಮಾ ಮಾಡಲಾಗುತ್ತಿದೆ.
ಕುಮರೇಶ್ ಎನ್ನುವವರು ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ಬೆಳಗಾವಿಯ ಸೂರಜ್ ದೇಸಾಯಿ ಮತ್ತು ಮಂಗೇಶ್ ದೇಸಾಯಿ ಎನ್ನುವವರು ಬಂಡವಾಳ ಹೂಡಲಿದ್ದಾರೆ.

ಇಷ್ಟು ದಿನಗಳ ಕಾಲ ವಿದ್ಯಾರ್ಥಿಗಳ ಮತ್ತು ಯುವಕರ ಸಬಲೀಕರಣ ಅಂತ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ನಟ ಚೇತನ್ ಅವರು ಇದೀಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ.
ಈ ಚಿತ್ರದಲ್ಲಿ ನಟ ಚೇತನ್ ಅವರ ಜೊತೆ ನಾಯಕಿ ನಟಿಯರಾಗಿ ನಟಿ ಮೇಘನಾ ರಾಜ್ ಮತ್ತು 'ರನ್ ಆಂಟನಿ' ಖ್ಯಾತಿಯ ನಟಿ ಸುಶ್ಮಿತಾ ಜೋಷಿ ಅವರು ಮಿಂಚಲಿದ್ದಾರೆ.


Click it and Unblock the Notifications











