ಸಿದ್ದರಾಮಯ್ಯ ಪರ ಪ್ರಚಾರಕ್ಕಿಳಿದ ಚಾಲೆಂಜಿಂಗ್ ಸ್ಟಾರ್: ದರ್ಶನ್ ಗೆ ಧಿಕ್ಕಾರ ಕೂಗಿದ ಜೆಡಿಎಸ್.!
Recommended Video

ಕರ್ನಾಟಕದ ಹೈವೋಲ್ಟೇಜ್ ಚುನಾವಣಾ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಇಂದು ಸಿದ್ದರಾಮಯ್ಯ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸುತ್ತಿದ್ದಾರೆ. 'ಪಕ್ಷಕ್ಕಿಂತ ಅಭ್ಯರ್ಥಿ ಮುಖ್ಯ' ಎನ್ನುವುದನ್ನ ನಂಬಿರುವ ದರ್ಶನ್, ಯಾವುದೇ ಪಕ್ಷಕ್ಕೆ ಸೀಮಿತವಾಗದೆ, ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲು ಮನಸ್ಸು ಮಾಡಿದ್ದಾರೆ.
ಹೇಳಿ ಕೇಳಿ, ಮೈಸೂರು 'ದಾಸ' ದರ್ಶನ್ ರವರ ತವರೂರು. ಹೀಗಾಗಿ, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಇವತ್ತು ರೋಡ್ ಶೋ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಪರವಾಗಿ ದರ್ಶನ್ ಪ್ರಚಾರ ಮಾಡುತ್ತಿರುವುದಕ್ಕೆ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡು, ಪ್ರತಿಭಟನೆ ನಡೆಸಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ. ಆದರೂ, ದರ್ಶನ್ ಹಾಗೂ ಸಿದ್ದರಾಮಯ್ಯ ವಿರುದ್ಧ ತೆನೆ ಕಾರ್ಯಕರ್ತರು ನಾಗನಹಳ್ಳಿಯಲ್ಲಿ ಧಿಕ್ಕಾರ ಕೂಗಿದ್ದಾರೆ. ಮುಂದೆ ಓದಿರಿ...

ಸಿದ್ದರಾಮಯ್ಯ ಪರ ಚಾಲೆಂಜಿಂಗ್ 'ಸ್ಟಾರ್' ಪ್ರಚಾರ
ಚುನಾವಣಾ ಪ್ರಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜನಪ್ರಿಯತೆ ಬಳಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿತ್ತು. ಆದ್ರೆ, ಆ ಪ್ಲಾನ್ ಗೆ ತೆನೆ ಪಕ್ಷ ಬಕೆಟ್ ಗಟ್ಟಲೆ ತಣ್ಣೀರು ಎರಚಿದ್ದಾರೆ. ಸಿದ್ದರಾಮಯ್ಯ ಪರ ದರ್ಶನ್ ಪ್ರಚಾರಕ್ಕೆ ಆಗಮಿಸುತ್ತಿದ್ದಂತೆಯೇ, ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಲು ಆರಂಭಿಸಿದರು.

ದರ್ಶನ್ ಗೆ ಧಿಕ್ಕಾರ ಯಾಕೆ.?
ನಾಗನಹಳ್ಳಿಯಿಂದ ದರ್ಶನ್ ಇಂದು ಪ್ರಚಾರ ಶುರು ಮಾಡಿದರು. ಆಗ, ''ಇದು ನಮ್ಮ ಗ್ರಾಮ. ದರ್ಶನ್ ರನ್ನ ಊರೊಳಗೆ ಬಿಡಲ್ಲ. ಕಾವೇರಿ ಹೋರಾಟಕ್ಕೆ ದರ್ಶನ್ ಬೆಂಬಲ ನೀಡಿಲ್ಲ. ಈಗ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಬಂದಿದ್ದಾರೆ'' ಎಂದು ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಅಂಬರೀಶ್ ಗೆ ಜೈಕಾರ.!
ದರ್ಶನ್ ಹಾಗೂ ಸಿದ್ದರಾಮಯ್ಯಗೆ ಧಿಕ್ಕಾರ ಕೂಗಿದ ಜೆಡಿಎಸ್ ಕಾರ್ಯಕರ್ತರು, ತಮ್ಮ ಪಕ್ಷದ ಅಭ್ಯರ್ಥಿ ಜಿ.ಟಿ.ದೇವೇಗೌಡ ರವರಿಗೆ ಜೈಕಾರ ಹಾಕಿದರು. ಜೊತೆಗೆ, ಅಚ್ಚರಿ ಅಂದ್ರೆ, ಕಾಂಗ್ರೆಸ್ ನಾಯಕ ಅಂಬರೀಶ್ ರವರಿಗೂ ತೆನೆ ಪಕ್ಷದವರು ಜೈಕಾರ ಕೂಗಿದರು.!

ಒಂದೆಡೆ ಪ್ರತಿಭಟನೆ, ಇನ್ನೊಂದೆಡೆ ಪ್ರಚಾರ
ಒಂದೆಡೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಪ್ರತಿಭಟನೆ ನಡುವೆಯೇ ದರ್ಶನ್ ಪ್ರಚಾರ ಕೈಗೊಂಡರು. ಸ್ಥಳದಲ್ಲಿ ಪ್ರತಿಭಟನೆ ಕಿಚ್ಚು ಹೆಚ್ಚಾದ ಕಾರಣ ಸಿದ್ದರಾಮಯ್ಯ ಪರ ಪ್ರಚಾರ ಕಣದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಥಳ ಬದಲಾಯಿಸಿದ್ದಾರೆ.


Click it and Unblock the Notifications











