ನಟ ದರ್ಶನ್ ಗೂ ಬಿಬಿಎಂಪಿ ರಾಜಕಾಲುವೆ ಒತ್ತುವರಿ ಬಿಸಿ ತಟ್ಟಿತೆ.?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಅಲ್ಲಲ್ಲಿ ಭಾರಿ ಜೆಸಿಬಿ ಘರ್ಜನೆ ಕೇಳಿಬರುತ್ತಿದೆ. ಬೆಂಗಳೂರು ಬಿಬಿಎಂಪಿ, ರಾಜ ಕಾಲುವೆ ಒತ್ತುವರಿ ಸಂಬಂಧ ನಗರದಲ್ಲಿ ಕೆಲವೆಡೆ, ಹಲವು ಮನೆಗಳನ್ನು ಒಡೆದು ಹಾಕಿದ್ದಾರೆ.
ಈಗಾಗಲೇ ತಮ್ಮ-ತಮ್ಮ ಸೂರು ಕಳೆದುಕೊಂಡು ಕಂಗಲಾದ ಜನಸಾಮಾನ್ಯರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದೀಗ ಈ ಹೊಸ ಸಮಸ್ಯೆ ನಮ್ಮ ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೂ ತಲೆದೂರಿದೆ.[ರಾಜಕಾಲುವೆ ತೆರವು: ಮಾನ್ಯತಾ ಟೆಕ್ ಪಾರ್ಕ್ ಮೇಲೆ ಬಿಬಿಎಂಪಿ ಕಣ್ಣು]

ಸದ್ಯಕ್ಕೆ ಬಿಬಿಎಂಪಿ ನಡೆಸುತ್ತಿರುವ ಒತ್ತುವರಿ ತಲೆ ಬಿಸಿ ಕನ್ನಡ ನಟ ದರ್ಶನ್ ಅವರಿಗೂ ತಟ್ಟಿದೆ. ಇದಕ್ಕೆ ಪ್ರಮುಖ ಕಾರಣ ಏನಪ್ಪಾ ಅಂದ್ರೆ, ರಾಜರಾಜೇಶ್ವರಿ ನಗರದ ಎಫ್ ರೋಡ್ ನಲ್ಲಿರುವ ದರ್ಶನ್ ಅವರ ನಿವಾಸ.
ಹಲಗೆವಡೇರಹಳ್ಳಿ ಸರ್ವೆ ನಂ 53ರಲ್ಲಿ ದರ್ಶನ್ ಅವರ ನಿವಾಸವಿದ್ದು, 199.98 ಅಡಿ ಅಗಲದ ರಂಗೋಲಿ ಹಳ್ಳದ (ಇದನ್ನು ಮೊದಲು ಝರಿ ಅಂತ ಕರೆಯುತ್ತಿದ್ದರು) ವ್ಯಾಪ್ತಿಯಲ್ಲಿ ಅವರ ಮನೆ ನಿರ್ಮಾಣ ಆಗಿದೆ.[ರಾಜಕಾಲುವೆ ಒತ್ತುವರಿ ತೆರವಿನಲ್ಲೂ ಪ್ರಭಾವದ ಒಳಸುಳಿ]
ಕಂದಾಯ ಇಲಾಖೆಯ ಸೂಪರ್ ಇಂಪೋಸ್ ಮ್ಯಾಪ್ ಪ್ರಕಾರವಾಗಿ, ನಟ ದರ್ಶನ್ ಅವರ ಮನೆ ಒತ್ತುವರಿ ಆಗಿರುವಂತಹ ಜಾಗದಲ್ಲಿ ನಿರ್ಮಾಣ ಆಗಿದೆ ಎನ್ನಲಾಗುತ್ತಿದೆ. ಐಡಿಯಲ್ ಹೋಮ್ಸ್ ಟೌನ್ ಶಿಪ್ ನಲ್ಲಿ 1960ರ ದಶಕದಲ್ಲಿ ಲೇಟೌಟ್ ನಿರ್ಮಾಣ ಮಾಡಲಾಗಿತ್ತು. ಈ ಲೇಔಟ್ ನಲ್ಲಿ ನಟ ದರ್ಶನ್ ಅವರು ನಿವೇಶನ ಖರೀದಿಸಿ ಮನೆ ನಿರ್ಮಾಣ ಮಾಡಿದ್ದರು.

ಇದೀಗ ಒತ್ತುವರಿಯಾದ ಈ ಜಾಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ನಿರ್ಮಾಣ ಆಗಿರೋದ್ರಿಂದ, ಇವರ ಮನೆ ಕೂಡ ತೆರವುಗೊಳ್ಳುವ ಸಾಧ್ಯತೆ ಇದೆ.
ಇನ್ನು ಇಂದು ಸರ್ವೆ ಕಾರ್ಯ ನಡೆಯಲಿದ್ದು, ಅಕಸ್ಮಾತ್ ಒತ್ತುವರಿ ಆಗಿದ್ದೇ ಆದಲ್ಲಿ, ಒತ್ತುವರಿದಾರರಿಗೆ ಯಾರಿಗೆಲ್ಲ ಏನೇನೂ ಕ್ರಮ ಕೈಗೊಂಡಿದ್ದೇವೆಯೋ, ಅದೇ ಕ್ರಮವನ್ನು ದರ್ಶನ್ ಅವರ ವಿಚಾರದಲ್ಲಿ ಕೂಡ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications











