'ಆಮೀರ್, ಶಾರುಖ್ ಖಾನ್ ಗಳು ಮಾತ್ರ ಚಿತ್ರರಂಗದ ಒಡೆಯರಲ್ಲ': ಮೋದಿ ವಿರುದ್ಧ ನಟ ಜಗ್ಗೇಶ್ ಬೇಸರ
Recommended Video
ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತ ಚಿತ್ರರಂಗವನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೆ ಮಹಾತ್ಮ ಗಾಂಧಿ 150ನೇ ಜನ್ಮದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಬಾಲಿವುಡ್ ಸ್ಟಾರ್ ಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮೋದಿ ಮತ್ತು ಬಾಲಿವುಡ್ ಕಲಾವಿದರ ಸಮಾಗಮ ಈಗ ದಕ್ಷಿಣ ಭಾರತೀಯ ಚಿತ್ರರಂಗದವರ ಅಸಮಾಧಾನಕ್ಕೆ ಕಾರಣವಾಗಿದೆ.
ಬಾಲಿವುಡ್ ಮತ್ತು ನರೇಂದ್ರ ಮೋದಿ ನಡುವೆ ಉತ್ತಮವಾದ ಬಾಂಧವ್ಯವಿದೆ. ಬಾಲಿವುಡ್ ಸ್ಟಾರ್ ಜೊತೆ ನರೇಂದ್ರ ಮೋದಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಆದ್ರೆ ಅದೇ ಬಾಂಧವ್ಯ ದಕ್ಷಿಣ ಭಾರತೀಯ ಕಲಾವಿದರ ಜೊತೆ ಯಾಕಿಲ್ಲ ಎನ್ನುವ ಪ್ರಶ್ನೆ ಈಗ ಎದ್ದಿದೆ. ಈಗಾಗಲೆ ರಾಮ್ ಚರಣ್ ಪತ್ನಿ ಸೇರಿದಂತೆ ಅನೇಕರು ಮೋದಿಯನ್ನು ಪ್ರಶ್ನಿಸುತ್ತಿದ್ದಾರೆ. ಇವರ ಜೊತೆಗೆ ಸ್ಯಾಂಡಲ್ ವುಡ್ ನಟ ಜಗ್ಗೇಶ್ ಕೂಡ ಧ್ವನಿ ಎತ್ತಿದ್ದಾರೆ. ಮೊದಲ ಬಾರಿಗೆ ಜಗ್ಗೇಶ್ ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಖಾನ್ ಗಳು ಮಾತ್ರ ಒಡೆಯರಲ್ಲ
"ಕನ್ನಡಿಗರು ಇಂದು ಬಹುತೇಕ ಪರಭಾಷೆ ಸ್ಟಾರ್ಸ್ ಗೆ ಚಪ್ಪಾಳೆ ಹೊಡೆದ ತಪ್ಪಿಗೆ ನಾವು ಕನ್ನಡಿಗರು ದಾರಿ ತಪ್ಪಿದವರಂತೆ ಆಗಿದ್ದೇವೆ. ನರೇಂದ್ರ ಮೋದಿಜಿ, ಉತ್ತರ ಭಾರತದ ನಟನಟಿಯರಿಗಿಂತ ನಾವು ಯಾವುದರಲ್ಲು ಕಮ್ಮಿ ಇಲ್ಲಾ. ಶಾರುಖ್ ಅಮಿರ್ ಅಲ್ಲಾ ಕಲಾರಂಗಕ್ಕೆ ಒಡೆಯರು. ನಮ್ಮ ಕನ್ನಡದ ಕಲಿಗಳು ಅನೇಕರಿದ್ದಾರೆ. ನಿಮ್ಮ ಭಾವನೆ ಗೌರವಿಸಲು. ಜೈಹಿಂದ್" ಎಂದು ಟ್ವೀಟ್ ಮಾಡಿದ್ದಾರೆ.

ತುಂಬಾ ದುಃಖವಾಯಿತು
"ಇಂದು ಕರ್ನಾಟಕದಲ್ಲಿ ಹೆಚ್ಚು #Entertainment #tax #collection ಕನ್ನಡದ ನೆಲ ಚಿತ್ರರಂಗದಿಂದ. ನಟರಿಂದ ಆಗುತ್ತಿದೆ. ನೆನಪಿಡಿ. ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಹ ಹಿಂದಿ ಚಿತ್ರರಂಗದಿಂದ ಅಲ್ಲಾ. ಈ ವಿಷಯ ಮನವರಿಕೆ ಮಾಡುವ ಕನ್ನಡ ಮನಸ್ಸುಗಳು ಇಲ್ಲವೆ ರಾಷ್ಟ್ರಕ್ಕೆ. ತುಂಬಾ ದುಃಖವಾಯಿತು. ಖಾನ್ ಗಳಲ್ಲಾ ಚಿತ್ರರಂಗ" ಎಂದು ಬೇಸರ ಹೊರಹಾಕಿದ್ದಾರೆ.

ರಾಮ್ ಚರಣ್ ಪತ್ನಿ ಹೇಳಿದ್ದೇನು?
"ಪ್ರೀತಿಯ ನರೇಂದ್ರ ಮೋದಿಜೀ. ದಕ್ಷಿಣ ಭಾರತದಲ್ಲಿ ಇರುವ ನಾವು ಕೂಡ ನಿಮ್ಮನ್ನು ಮೆಚ್ಚುತ್ತೇವೆ. ನಮ್ಮ ಪ್ರಧಾನಿಯಾಗಿರುವುದಕ್ಕೆ ಹೆಮ್ಮ ಪಡುತ್ತೇವೆ. ಪ್ರಮುಖ ವ್ಯಕ್ತಿಗಳು ಮತ್ತು ಸಾಂಸ್ಕೃತಿಕ ಪ್ರಾತಿನಿಧ್ಯ ಕೇವಲ ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದೆ. ದಕ್ಷಿಣ ಭಾರತೀಯ ಚಲನಚಿತ್ರೋದ್ಯಮವನ್ನು ನಿರ್ಲಕ್ಷಿಸಲಾಗಿದೆ. ನಾನು ನನ್ನ ಭಾವನೆಗಳನ್ನು ನೋವಿನಿಂದ ಹೇಳಿಕೊಳ್ಳುತ್ತಿದ್ದೇನೆ. ಇದನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಲಾಗಿದೆ ಎಂದು ಭಾವಿಸುತ್ತೇನೆ. ಜೈ ಹಿಂದ್." ಎಂದು ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಾರಂಭದಲ್ಲಿ ಭಾಗಿಯಾಗಿದ್ದ ಬಾಲಿವುಡ್ ಸ್ಟಾರ್ಸ್
ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ನಟರಾದ ಆಮೀರ್ ಖಾನ್, ಶಾರುಖ್ ಖಾನ್, ರಾಜ್ ಕುಮಾರ್ ಹಿರಾನಿ, ರಣಬೀರ್ ಕಪೂರ್, ಕಂಗನಾ ರಣಾವತ್, ಸೋನಮ್ ಕಪೂರ್, ವಿಕ್ಕಿ ಕೌಸಲ್, ಅಲಿಯಾ ಭಟ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಭಾಗಿಯಾಗಿದ್ದರು. ಪ್ರಧಾನಿ ಮೋದಿ ಜೊತೆ ಕಲಾವಿದರು ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.


Click it and Unblock the Notifications











