ಸಾಯಿ ಪಲ್ಲವಿ ಪರವಹಿಸಿ, ಮಾಧ್ಯಮಗಳಿಗೆ ಝಾಡಿಸಿದ ನಟ ಕಿಶೋರ್
ನಟಿ ಸಾಯಿ ಪಲ್ಲವಿ ವಿವಾದ ಯಾಕೋ ತಣ್ಣಗಾಗುತ್ತಿಲ್ಲ. 'ವಿರಾಟ ಪರ್ವಂ' ಸಿನಿಮಾ ಬಿಡುಗಡೆಗೆ ಮುನ್ನ ನೀಡಿದ ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ ಧರ್ಮ ಆಧರಿತ ಹಿಂಸೆಯ ಬಗ್ಗೆ ಆಡಿದ ಮಾತುಗಳನ್ನು ಕೆಲವರು ಖಂಡಿಸಿದ್ದರೆ, ಕೆಲವರು ಸ್ವಾಗತಿಸಿದ್ದಾರೆ.
ತಮ್ಮ ಮಾತುಗಳಿಗೆ ವಿವಾದದ ರೂಪ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಸಾಯಿ ಪಲ್ಲವಿ, ಆ ವಿಷಯವಾಗಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದರೂ ಟ್ರೋಲ್ಗಳ ಹಾವಳಿ ಹೆಚ್ಚೇನು ಕಡಿಮೆ ಆಗಿಲ್ಲ.
ಸಾಯಿ ಪಲ್ಲವಿ ನೀಡಿರುವ ಹೇಳಿಕೆಗೆ ದೊಡ್ಡ ಪ್ರಮಾಣದ ಬೆಂಬಲವೂ ವ್ಯಕ್ತವಾಗಿದೆ. ಹಲವು ಸಿನಿಮಾ ನಟ-ನಟಿಯರು ಸಾಯಿ ಪಲ್ಲವಿ ಬೆನ್ನಿಗೆ ನಿಂತಿರುವುದು ವಿಶೇಷ. ಕನ್ನಡತಿ ನಟಿ ರಮ್ಯಾ ಸಾಯಿ ಪಲ್ಲವಿ ಪರವಾಗಿ ಟ್ವೀಟ್ ಮಾಡಿದ್ದರು. ಇದೀಗ ನಟ ಕಿಶೋರ್ ಸಹ ಸಾಯಿ ಪಲ್ಲವಿ ಪರವಹಿಸಿ ಮಾತನಾಡಿದ್ದಾರೆ.
Recommended Video


ಸಾಯಿ ಪಲ್ಲವಿ ಪರ ಕಿಶೋರ್ ಪೋಸ್ಟ್
ಸಾಯಿ ಪಲ್ಲವಿ ಪರ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ನಟ ಕಿಶೋರ್, ''ಜನಗಳ ಬಾಯಿ ಮುಚ್ಚಿಸುವುದು ಸರ್ಕಾರದ ಕೆಲಸವಲ್ಲವೆ, ಈ ಕಾರ್ಯದ ಗುತ್ತಿಗೆಯನ್ನು ಖರೀದಿಗೊಳಪಟ್ಟ ಮಾಧ್ಯಮ ಯಾವಾಗ ಪಡೆದುಕೊಂಡಿತು. ಸಿನಿಮಾಕರ್ಮಿಗಳು, ನಟ-ನಟಿಯರು ಸಾಮಾಜಿಕ ಅಭಿಪ್ರಾಯವನ್ನು ಹೊಂದುವುದೇ ಅಪರಾಧವೇ?'' ಎಂದು ಪ್ರಶ್ನೆ ಮಾಡಿದ್ದಾರೆ.

ಕೊಲ್ಲುವುದು ತಪ್ಪೆಂದು ಹೇಳುವುದು ತಪ್ಪೆ? ಕಿಶೋರ್ ಪ್ರಶ್ನೆ
''ಕಾರಣಗಳೇನೇ ಇರಲಿ ಯಾರನ್ನಾದರೂ ಕೊಲ್ಲುವುದು ಸರಿಯಲ್ಲ. ಕಾರಣ ಏನೇ ಇದ್ದರೂ ಎಲ್ಲ ಕೊಲ್ಲುವಿಕೆಗಳು ಒಂದೆ ಎಂದು ಹೇಳುವುದು ತಪ್ಪೆ? ನಮ್ಮ ನಡುವಿನ ಅಲ್ಪಸಂಖ್ಯಾತರನ್ನು ನಾವು ನಮ್ಮ ಸಮನವಾಗಿ ಬದುಕಲು ಬಿಡುತ್ತೇವೆ ಎನ್ನುವುದು ನಮ್ಮ ಸಮಾಜದ ಸ್ವಾಸ್ಥ್ಯ ತೋರುತ್ತದೆ ಎನ್ನುವುದು ತಪ್ಪೆ? ಯಾವುದೇ ಧರ್ಮ, ಜಾತಿಗಳಾಗಲಿ ಜೀವಗಳು ಒಂದೇ ಎಂದು ಹೇಳುವುದು ತಪ್ಪೆ? ಎಂದು ಕಿಶೋರ್ ಪ್ರಶ್ನೆ ಮಾಡಿದ್ದಾರೆ.

''ಸಾಯಿ ಪಲ್ಲವಿಗೆ ಮಾಧ್ಯಮಗಳಿಗಿಂತಲೂ ಹೆಚ್ಚಿನ ಸಾಮಾಜಿಕ ಬದ್ಧತೆ ಇದೆ''
''ಒಬ್ಬರ ಆಹಾರ ಪದ್ಧತಿಯ ಮೇಲೆ ನಿಷೇಧ ಹೇರಿ ಅದನ್ನು ದ್ವೇಷ ಹರಡಲು ಗುರಿ ಮಾಡಿಕೊಳ್ಳುವುದು ತಪ್ಪು ಎಂದು ಹೇಳುವುದು ತಪ್ಪೆ? ಈ ಬಿಕರಿಯಾದ ಮಾಧ್ಯಮಗಳಿಗೆ ಇರುವ ಸಾಮಾಜಿಕ ಬದ್ಧತೆಗಿಂತಲೂ ಹೆಚ್ಚಿನ ಸಾಮಾಜಿಕ ಬದ್ಧತೆ ಸಾಯಿ ಪಲ್ಲವಿಗೆ ಇದೆ. ಸಾಮಾಜಿಕ ಭಾದ್ಯತೆಯನ್ನು ಧರ್ಮಾಂಧತೆಯ ಕನ್ನಡಿಯಿಂದ ನೋಡುವ ಮಾಧ್ಯಮ, ಗೋಕಾಕ್ ಚಳವಳಿಯ ಕಾಲದಲ್ಲಿ ಇದ್ದಿದ್ದರೆ ಡಾ ರಾಜ್ಕುಮಾರ್ ಅವರ ಬಾಯನ್ನೂ ಮುಚ್ಚಿಸಿಬಿಡುತ್ತಿತ್ತೋ ಏನೋ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ ಕಿಶೋರ್.

ಸಾಯಿ ಪಲ್ಲವಿ ಹೇಳಿದ್ದು ಏನು?
''ಕೆಲವು ದಿನಗಳ ಮುಂದೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಂತು ಅದರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಹೇಗೆ ಹಿಂಸೆ ಮಾಡಲಾಯಿತು ಎಂದು ಅವರು ತೋರಿಸಿದ್ದಾರೆ. ಹಾಗೆ ಕಳೆದ ವರ್ಷವೇ ಇರಬೇಕು ಕೋವಿಡ್ ಸಮಯದಲ್ಲಿ ವ್ಯಕ್ತಿಯೊಬ್ಬ ಗಾಡಿಯಲ್ಲಿ ಹಸು ತೆಗೆದುಕೊಂಡು ಹೋಗುತ್ತಿದ್ದ. ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಆಗಿದ್ದ ಎಂಬ ಕಾರಣಕ್ಕೆ ಅವನ ಮೇಲೆ ಹಲ್ಲೆ ಮಾಡಲಾಯಿತು. ಜೈ ಶ್ರೀರಾಮ್ ಘೋಷಣೆ ಕೂಗಲಾಯಿತು. ಇದನ್ನು ನೋಡಿದಾಗ ಆಗ ಕಾಶ್ಮೀರದಲ್ಲಿ ನಡೆದಿದ್ದಕ್ಕೂ ಈಗ ನಡೆದಿದ್ದಕ್ಕೂ ವ್ಯತ್ಯಾಸ ಕಾಣಿಸುತ್ತಿಲ್ಲ'' ಎಂದಿದ್ದರು ಸಾಯಿ ಪಲ್ಲವಿಯ, ನಟಿಯ ಈ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿತ್ತು.


Click it and Unblock the Notifications











