ವಿರೇಂದ್ರ ಹೆಗ್ಡೆ ಜೊತೆ ಶಿವಣ್ಣ, ಎತ್ತಿನ ಹೊಳೆ ಬಗ್ಗೆ ಚರ್ಚೆ
ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಇತ್ತೀಚೆಗೆ ಹಲವು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಆ ನಡುವೆಯೂ ಕೊಂಚ ಬಿಡುವು ಮಾಡಿಕೊಂಡು ಕುಟುಂಬ ಸಮೇತರಾಗಿ ಕ್ಷೇತ್ರ ಪ್ರವಾಸಕ್ಕೆ ಹೊರಟಿದ್ದರು.
ಸದಾ ಶೂಟಿಂಗ್-ಶೂಟಿಂಗ್ ಅಂತ ಬೇಜಾರಾಗಿದ್ದ ಶಿವಣ್ಣ ಅವರು ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಜೊತೆಗೂಡಿ ಜುಲೈ 18, ಸೋಮವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ಮೊದಲು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಡೆ ಮತ್ತು ಹೇಮಾವತಿ ವಿ. ಹೆಗ್ಡೆ ದಂಪತಿಯನ್ನು ಭೇಟಿ ಮಾಡಿ ಮಾತನಾಡಿದರು.[ಮಕ್ಕಳ ಪ್ರತಿಭೆ ಮುಂದೆ ಶಿವಣ್ಣ, ರವಿಚಂದ್ರನ್ ತಲೆಬಾಗಲು ಸಾಧ್ಯವೇ.?]
ಈ ಸಂದರ್ಭದಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿಗೆ ಚಿಕ್ಕ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಹಾಗೂ ಶಿವಣ್ಣ ಅವರ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಕರೆತನ್ನಿ ಎಂದು ಸಲಹೆ ನೀಡಿದರು.
ತಮ್ಮೆಲ್ಲರ ಮೆಚ್ಚಿನ ಸ್ಟಾರ್, ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ತಮ್ಮೂರಿಗೆ ಬಂದಿದ್ದಾರೆ ಎಂದು ತಿಳಿದ ತಕ್ಷಣ ಅಭಿಮಾನಿಗಳು ಮತ್ತು ಮಾಧ್ಯಮದವರ ದಂಡೇ ಧರ್ಮಸ್ಥಳದಲ್ಲಿ ನೆರೆದಿತ್ತು. ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಶಿವಣ್ಣ ಅವರು ಮಾಧ್ಯಮದ ಜೊತೆ ಕೂಡ ಕೆಲಕಾಲ ಹರಟಿದರು. ಶಿವಣ್ಣ ಏನಂದ್ರು? ಮುಂದೆ ಓದಿ...

ಕೋಲಾರದ ರೈತರ ಪರ ಶಿವಣ್ಣ
"ಕೋಲಾರದ ಜನತೆಯ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿ ಎಂದಷ್ಟೇ ನಾವು ಆಗ್ರಹಿಸಿದ್ದೇವೆ ಹೊರತು ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಿ ಎಂದು ಹೇಳುತ್ತಿಲ್ಲ". ಎಂದು ಶಿವಣ್ಣ ತಮ್ಮ ಅಭಿಪ್ರಾಯ ತಿಳಿಸಿದರು.[ಕಳಸಾ ಬಂಡೂರಿ ಪರ ಟ್ವೀಟ್ ಅಭಿಯಾನ ಯಶಸ್ಸು] ಚಿತ್ರಕೃಪೆ:ಫೇಸ್ ಬುಕ್

ಸರ್ಕಾರಕ್ಕೆ ಟಾಂಗ್ ಕೊಟ್ಟ ಶಿವಣ್ಣ
"ಮುಖ್ಯವಾಗಿ ಸರ್ಕಾರ ಕೋಲಾರದ ರೈತರ ಬಗ್ಗೆ ಗಮನ ಹರಿಸಬೇಕು. ಕಲಾವಿದರಾದ ನಮಗೆ ಇಡೀ ರಾಜ್ಯದ ಎಲ್ಲಾ ಜನರು ಒಂದೇ. ದಕ್ಷಿಣ ಕನ್ನಡ ಜಿಲ್ಲೆಯ ಜನರೊಂದಿಗೆ ಕೂಡ ಮಾತುಕತೆ ನಡೆಸಬೇಕು. ಇಲ್ಲಿಯ ಜನರಿಗೆ ಕೂಡ ಯಾವುದೇ ರೀತಿಯ ಅನ್ಯಾಯ ಆಗಬಾರದು" ಎಂದು ಸರ್ಕಾರಕ್ಕೆ ಶಿವಣ್ಣ ಎಚ್ಚರಿಕೆ ನೀಡುವ ರೀತಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.[ಶಿವರಾಜ್ ಕುಮಾರ್ ಪತ್ನಿ ಗೀತಾಗೆ ಮುಜುಗರ ಆದ ಪ್ರಸಂಗ.!]

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕುರಿತು
"ನಿಜ ಘಟನೆ ಏನು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಮುಖ್ಯವಾಗಿ ಮಾಧ್ಯಮದವರು ಈ ವಿಚಾರದ ಬಗ್ಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಗಣಪತಿ ಅವರ ಪತ್ನಿಯ ವೇದನೆಯ ಬಗ್ಗೆ ಸರಕಾರ ಅರಿತುಕೊಳ್ಳಬೇಕು"-ಶಿವಣ್ಣ [ಗಣಪತಿ ಪ್ರಕರಣ, ಸಿಬಿಐ ತನಿಖೆಗಾಗಿ ಮುಂದುವರೆದ ಬಿಜೆಪಿ ಹೋರಾಟ]

'ಆ' ದಿನಗಳಿಗೆ ಜಾರಿದ ಶಿವಣ್ಣ
ಧರ್ಮಸ್ಥಳಕ್ಕೆ ಆಗಾಗ ಬರುತ್ತಿದ್ದ ದಿನಗಳು, 'ಚಿಗುರಿದ ಕನಸು' ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಧರ್ಮಸ್ಥಳದಲ್ಲೇ ಒಂದು ತಿಂಗಳು ತಂಗುತ್ತಿದ್ದ 'ಆ' ಕಳೆದು ಹೋದ ಸುಂದರ ದಿನಗಳ ಬಗ್ಗೆ ಶಿವಣ್ಣ ಅವರು ಮತ್ತೆ ನೆನಪು ಮಾಡಿಕೊಂಡರು.

ಕುಕ್ಕೆಗೆ ಪ್ರಯಾಣ
ತದನಂತರ ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ ಶಿವಣ್ಣ ಅವರು ಅಲ್ಲಿಯೇ ಲಾಡ್ಜ್ ನಲ್ಲಿ ತಂಗಿದರು. ಇಂದು (ಜುಲೈ 19) ಸುಬ್ರಹ್ಮಣ್ಯ ದೇವರ ಕೃಪೆಗೆ ಪಾತ್ರರಾದ ಬಳಿಕ ಬೆಂಗಳೂರಿಗೆ ವಾಪಸಾಗಲಿದ್ದಾರೆ. ನಿನ್ನೆ (ಜುಲೈ 18) ಸಂಜೆ ಕುಕ್ಕೆ ಸಮೀಪದ ಸರ್ಕಾರಿ ಶಾಲಾ ಮೈದಾನದಲ್ಲಿ ಮಕ್ಕಳ ಜೊತೆ ಗಲ್ಲಿ ಕ್ರಿಕೆಟ್ ಆಡಿ ತಮ್ಮ ಸಿಂಪಲ್ ವ್ಯಕ್ತಿತ್ವವನ್ನು ತೋರ್ಪಡಿಸಿದ್ದಾರೆ.


Click it and Unblock the Notifications











