ಎಕ್ಸ್ ಕ್ಯೂಸ್ ಮಿ ಸುನಿಲ್ ರಾವ್ 'ಬೆಂಗಳೂರು ಕಾಲಿಂಗ್'

ನಂತರ ಸುನಿಲ್ ರಾವ್ 'ಪ್ರೀತಿ ಪ್ರೇಮ ಪ್ರಣಯ', 'ಬಾ ಬಾರೋ ರಸಿಕ', 'ಮಸಾಲ', 'ಚಪ್ಪಾಳೆ', 'ಸಖ ಸಖಿ', 'ಬೆಳ್ಳಿ ಬೆಟ್ಟ' ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರೂ ಸೋಲು ಸೋಲುಗಳೇ ಸಂಗಾತಿಯಾಗಿ 'ಸೋಲಿನ ಸರದಾರ' ಎನಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಸೈಡ್ ಗೆ ಸರಿದುಬಿಟ್ಟಿದ್ದರು. ವಿದೇಶಗಳಲ್ಲಿ ಗಾಯಕರಾಗಿ ಹಾಡುವ ಕಾಯಕ ಮಾಡುತ್ತಿದ್ದಾರೆಂದು ಸುದ್ದಿಯಾಗಿತ್ತು.
ಚಂದ್ರು ನಿರ್ದೇಶನದ 'ತಾಜ್ಮಹಲ್' ಚಿತ್ರದಲ್ಲಿ ನಾಯಕನಾಗುವ ಅವಕಾಶ ತಪ್ಪಿಸಿಕೊಂಡ ಸುನಿಲ್ ಅದಕ್ಕಾಗಿ ಭಾರಿ ಬೆಲೆ ತೆತ್ತರು. ಸಿಕ್ಕ ಅವಕಾಶ ಬಳಸಿಕೊಳ್ಳದೇ ಅಮೆರಿಕಾ ಪ್ರವಾಸಕ್ಕೇ ಹೆಚ್ಚು ಒತ್ತುಕೊಟ್ಟ ಸುನಿಲ್, ಅಲ್ಲಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಆ ಆಫರ್ ಅಜಯ್ ರಾವ್ ಪಾಲಾಗಿತ್ತು. ನಂತರ ಆಗಿದ್ದೆಲ್ಲಾ ಈಗ ಇತಿಹಾಸ.
ನಂತರ 'ಮಿನುಗು' ಚಿತ್ರದಲ್ಲಿ ಪೂಜಾ ಗಾಂಧಿ ಜತೆ ಹಾಗೂ ರತ್ನಜ ನಿರ್ದೇಶನದ 'ಪ್ರೇಮಿಸಂ' ಚಿತ್ರದಲ್ಲಿ ಅಮೂಲ್ಯಾ ಜತೆ ರೊಮಾನ್ಸ್ ಮಾಡಿದರೂ ಅದ್ಯಾವುದೂ ಕ್ಲಿಕ್ ಆಗದೇ ಸುನಿಲ್ ವೃತ್ತಿಜೀವನ ಬಿರುಗಾಳಿಗೆ ಸಿಕ್ಕ ಹಡಗಿನಂತಾಗಿತ್ತು. ಇಷ್ಟಾದರೂ ಧೃತಿಗಡೆದ ಸುನಿಲ್ ರಾವ್ ಅವರನ್ನು, ಇದೀಗ ಹೊಸದೊಂದು ಪ್ರಾಜೆಕ್ಟ್ ಕೈಹಿಡಿದಿದೆ. ಅದು 'ಬೆಂಗಳೂರು ಕಾಲಿಂಗ್'.
ರಾಜೇಶ್ ಗುಂಡುರಾವ್ ನಿರ್ಮಾಣದಲ್ಲಿ ಮೂಡಿಬರಲಿರುವ 'ಬೆಂಗಳೂರು ಕಾಲಿಂಗ್' ನಲ್ಲಿ ಸುನಿಲ್ ರಾವ್ ಅಲ್ಲದೇ ವಿನಾಯಕ ಜೋಷಿ ಕೂಡ ನಟಿಸುತ್ತಿದ್ದಾರೆ. ಹೆಚ್ಚು ಕಡಿಮೆ ಈ ಇಬ್ಬರೂ ನಟರು ಒಂದೇ ಪರಸ್ಥಿತಿಯಲ್ಲಿರುವುದು ಕಾಕತಾಳೀಯವಾದರೂ ಸತ್ಯ. ಇದರಲ್ಲಿ ಇನ್ನೂ ಒಬ್ಬ ನಾಯಕ ನಟ ನಟಿಸಲಿದ್ದು ಅಂತಿಮ ಆಯ್ಕೆ ಮುಗಿದಿಲ್ಲ. ಸದ್ಯ ಮೂವರಲ್ಲಿ ಸುನಿಲ್ ರಾವ್ ಕೂಡ ಒಬ್ಬರು ಎನ್ನುವುದು ಅವರ ಅಭಿಮಾನಿಗಳಿಗೆ ಸಮಾಧಾನದ ವಿಷಯ.
ಈ ಚಿತ್ರವನ್ನು ನಿರ್ದೇಶಿಸಲಿರುವುದು ಈ ಮೊದಲು 'ಕನಸಲೂ ನೀನೇ ಮನಸಲೂ ನೀನೇ' ಚಿತ್ರ ನಿರ್ದೇಶಿಸಿದ್ದ ನಂತರ ಮಾಯವಾಗಿದ್ದ ನಿರ್ದೇಶಕ ಕೆ ನಂಜುಂಡ. ರಾಜೇಂದ್ರ ಸಿಂಗ್ ಬಾಬುರವರ 'ಹೂವು ಹಣ್ಣು' ಚಿತ್ರದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಗಮನ ಸೆಳೆದ ರಾಜೇಶ್ ಗುಂಡೂರಾವ್ ಇದರ ನಿರ್ಮಾಪಕರು. ಇವರೆಲ್ಲಾ 'ಬೆಂಗಳೂರು ಕಾಲಿಂಗ್' ನಲ್ಲಿ ಜೊತೆಯಾಗುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











