ಪ್ರಶ್ನೆ ಕೇಳಿದ್ದು ತಪ್ಪಾ ಅಥವಾ ಉತ್ತರ ಕೊಟ್ಟಿದ್ದು ತಪ್ಪಾ.?
'ರಾಜರಥ' ಸಿನಿಮಾ ನೋಡದೇ ಇದ್ದವರು 'ಕಚಡಾ ನನ್ ಮಕ್ಳು' ಎಂದ ಕಾರಣಕ್ಕೆ ಭಂಡಾರಿ ಬ್ರದರ್ಸ್ ಅವರ ವಿರುದ್ಧ ಕನ್ನಡ ಕಲಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಅಭಿಮಾನಿಗಳನ್ನ ಕ್ಷಮೆ ಕೂಡ ಕೇಳಿದ್ದಾರೆ. ಈಗ ಇದು ಮುಗಿದು ಹೋದ ಅಧ್ಯಾಯ.
ಈ ಹಿಂದೆ ಕೂಡ ಇಂತಹ ವಿವಾದಗಳು ದೊಡ್ಡ ಸುದ್ದಿಯಾಗಿವೆ. ರಾಕಿಂಗ್ ಸ್ಟಾರ್ ಯಶ್ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ದರ್ಶನ್ ವಿಚಾರದಲ್ಲಿ ಬಿಗ್ ಬಾಸ್ ಸಂಜನಾ ಎಡವಟ್ಟು ಮಾಡಿಕೊಂಡಿದ್ದರು. ಆದ್ರೆ, ಇದರಲ್ಲಿ ಉತ್ತರ ಕೊಟ್ಟಿದ್ದ ನಟಿಯರ ಪಾತ್ರವೆಷ್ಟಿತ್ತೋ ಪ್ರಶ್ನೆ ಕೇಳಿದ ಅಂಕರ್ ಗಳ ಪಾತ್ರವೂ ಅಷ್ಟೇ ಇತ್ತು ಎನ್ನುವುದು ವಾಸ್ತವ.
ಇಂತಹ ಹೇಳಿಕೆಗಳು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತೆ ಎಂಬುದರ ಅರಿವಿದ್ದರು ಇಂತಹ ಘಟನೆಗಳು ಯಾಕೆ ಮರುಕಳಿಸುತ್ತಿದೆ. ಇದಕ್ಕೆ ಉತ್ತರ ಕೊಡುವ ತಾರೆಯರದ್ದು ತಪ್ಪಾ ಅಥವಾ ಪ್ರಶ್ನೆ ಕೇಳುವ ನಿರೂಪಕರದ್ದು ತಪ್ಪಾ? ಎಂಬುದು ಕಾಡುತ್ತಿದೆ. ಮುಂದೆ ಓದಿ....

ಸಂಕಷ್ಟಕ್ಕೆ ಸಿಲುಕಿಸುವ ಪ್ರಶ್ನೆಗಳೇಕೆ.?
ಸಾಮಾನ್ಯವಾಗಿ ಟಿವಿ ಕಾರ್ಯಕ್ರಮಗಳಲ್ಲಿ Rapid Fire ರೌಂಡ್ ಅಂತ ಕೆಲವು ಪ್ರಶ್ನೆಗಳನ್ನ ಕೇಳ್ತಾರೆ. ಇದರಲ್ಲಿ ಬಹುತೇಕ ವಿವಾದಾತ್ಮಕ ಪ್ರಶ್ನೆಗಳೇ ಹೆಚ್ಚಿರುತ್ತೆ. ಆ ಸಮಯದಲ್ಲಿ ಇದರ ಅರಿವು ಆಗಲ್ಲವಾದರೂ, ನಂತರ ವಿವಾದವಾದಾಗ ತಪ್ಪು ಮಾಡಿದ್ವಿ ಎನ್ನುವಂತಾಗುತ್ತೆ. ಇನ್ನು ಆಂಕರ್ ಗಳು ಕೇಳುವುದು ಹಾಗೆ ಇರುತ್ತೆ. ಉತ್ತರ ಕೊಡಲೇಬೇಕು ಎಂದು ಬೇಡಿಕೆ ಇಡುತ್ತಾರೆ. ಏನಾದರೂ ಎಡವಟ್ಟು ಆಗಬಹುದು ಎಂಬ ಊಹೆ ಇದ್ದರೂ ನಿರೂಪಕರ ಒತ್ತಡಕ್ಕೆ ಮಣಿದು ಉತ್ತರ ನೀಡುತ್ತಾರೆ.

ಅಂದು ರಶ್ಮಿಕಾಗೆ ಆಗಿದ್ದು ಅದೇ.!
ಅಂದೊಮ್ಮೆ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ನಿರೂಪಕ ಇದೇ ರೀತಿ Rapid Fire ಪ್ರಶ್ನೆಗಳನ್ನ ಕೇಳಿದ್ದರು. ಕನ್ನಡದಲ್ಲಿ 'ಶೋ ಆಫ್ ನಟ' ಯಾರು ಎಂದು ಪ್ರಶ್ನಿಸಿದ್ದರು. ಆರಂಭದಲ್ಲಿ ಈ ಪ್ರಶ್ನೆಗೆ ರಶ್ಮಿಕಾ ಉತ್ತರ ಕೊಟ್ಟಿರಲಿಲ್ಲ. ಆದ್ರೆ, ನಟ ರಕ್ಷಿತ್ ಮತ್ತು ನಿರೂಪಕರ ಒತ್ತಡಕ್ಕೆ ಮಣಿದು 'ಯಶ್' ಅಂದು ಬಿಟ್ಟರು. ಇದು ರಾಕಿಂಗ್ ಸ್ಟಾರ್ ಅಭಿಮಾನಿಗಳನ್ನ ಕೆರಳಿಸಿತ್ತು. ಇಲ್ಲಿ ಸೂಕ್ಷ್ಮವಾಗಿ ಗಮನಿಸಿದ್ರೆ, ರಶ್ಮಿಕಾ ಉತ್ತರ ಕೊಡಲು ಇಷ್ಟವೇ ಇರಲಿಲ್ಲ. ಆಗಲೇ ಆ ಪ್ರಶ್ನೆಯನ್ನ ಕೈಬಿಡಬಹುದಿತ್ತು. ಬಟ್, ಅದು ಆಗಲಿಲ್ಲ.

ಬಿಗ್ ಬಾಸ್ ಸಂಜನಾಗೂ ಇದೇ ಆಗಿತ್ತು
ಅಕುಲ್ ಬಾಲಾಜಿ ಸಾರಥ್ಯದ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ Rapid Fire ಪ್ರಶ್ನೆ ಕೇಳಲಾಯಿತು. ಇಲ್ಲಿ ನಿರೂಪಕ ಅಕುಲ್ ಕನ್ನಡದಲ್ಲಿ ಬಿಲ್ಡಪ್ ನಟ ಯಾರು ಎಂದು ಕೇಳಿದ್ದರು. ಇದಕ್ಕೆ ಸಂಜನಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಹೇಳಿದ್ದರು. ನಂತರ ಡಿ ಬಾಸ್ ಫ್ಯಾನ್ಸ್ ಸಂಜನಾಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಆಗಾಗಲೇ ರಶ್ಮಿಕಾ ಶೋ ಆಫ್ ಎಂದು ವಿವಾದವಾಗಿತ್ತು. ಇದರ ನಡುವೆಯೂ ಸಂಜನಾ ಬಿಲ್ಡಪ್ ಪ್ರಶ್ನೆಗೆ ಉತ್ತರಿಸಿದ್ದರು. ನಂತರ ದರ್ಶನ್ ಅವರಿಗೆ ಕ್ಷಮೆ ಕೂಡ ಕೇಳಿದ್ದರು.

ಇಂತಹ ಪ್ರಶ್ನೆಗಳನ್ನ ಕೇಳೋದ್ಯಾಕೆ.?
ಇಷ್ಟೆಲ್ಲಾ ವಿವಾದಗಳು ಮತ್ತೆ ಮತ್ತೆ ಹುಟ್ಟುತ್ತಿದ್ದರೂ ನಿರೂಪಕರು ಮತ್ತೆ ಅದೇ ರೀತಿ ಪ್ರಶ್ನೆಗಳನ್ನ ಕೇಳೋದ್ಯಾಕೆ ಎಂಬ ಪ್ರಶ್ನೆಯನ್ನ ಅಭಿಮಾನಿಗಳನ್ನ ಕಾಡುತ್ತಿದೆ. ಅವರು ಕೇಳೋದ್ರಿಂದಲೇ ಸೆಲೆಬ್ರಿಟಿಗಳು ಬೇರೆ ದಾರಿಯಿಲ್ಲದೇ ಉತ್ತರ ಕೊಡಬೇಕಾಗುತ್ತಿದೆ. ಇಷ್ಟೆಲ್ಲಾ ವಿವಾದಗಳಿಗೆ ಆಂಕರ್ ಗಳೇ ಕಾರಣ ಎಂದು ದೂರಲಾಗುತ್ತಿದೆ.

ಅವರು ಕೇಳ್ತಾರೆ, ಇವರು ಯಾಕೆ ಉತ್ತರ ಕೊಡಬೇಕು.?
ಸರಿ ಗೊತ್ತಿದ್ದು ಗೊತ್ತಿದ್ದು ಆಂಕರ್ ಗಳು ಇಂತಹ ಪ್ರಶ್ನೆಗಳನ್ನ ಪದೇ ಪದೇ ಕೇಳ್ತಾರೆ. ಆದ್ರೆ, ಸೆಲೆಬ್ರಿಟಿಗಳು ಉತ್ತರ ಯಾಕೆ ಕೊಡಬೇಕು. ನಾವು ಇದಕ್ಕೆ ಉತ್ತರ ನೀಡಲ್ಲ ಎಂದು ಮುಂದೋಗಬಹುದು ಅಲ್ವಾ. ಅದನ್ನ ಬಿಟ್ಟು ಆ ಪ್ರಶ್ನೆಗೆ ಉತ್ತರ ಕೊಡ್ತಾರೆ. ಆಮೇಲೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗ್ತಾರೆ, ಇದು ಮೊದಲೇ ಇವರ ಅರಿವಿಗೆ ಗೊತ್ತಿರುತ್ತೆ. ಆದ್ರೂ ಇಂತಹ ಹೇಳಿಕೆಗಳನ್ನ ಕೊಡೋ ಧೈರ್ಯ ಮಾಡ್ತಾರೆ.

ಮುಂದಿನ ದಿನಗಳಲ್ಲಿ ಇದು ಅಗಬಾರದು
ಈಗಾಗಲೇ ಇಂತಹ ಘಟನೆಗಳು ಹೆಚ್ಚಾಗಿದೆ. ಇನ್ನು ಮುಂದಾದರೂ ಸೆಲೆಬ್ರಿಟಿಗಳು ಹಾಗೂ ನಿರೂಪಕರು ಇಂತಹ ವಿವಾದಗಳಿಗೆ ಕಾರಣರಾಗಬಾರದು. ಒಬ್ಬರು ಆದ್ರೂ ಅಂತ ಮತ್ತೊಬ್ಬರು ಇಂತಹ ವಿವಾದಕ್ಕೆ ಎಡೆಮಾಡಿಕೊಟ್ಟರೇ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಮತ್ತಷ್ಟು ಗಂಭೀರವಾದರೂ ಅಚ್ಚರಿಯಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಮತ್ತು ಮಾತನಾಡುವುದಕ್ಕೂ ಮುಂಚೆ ಯೋಚನೆ ಮಾಡಬೇಕಾಗಿದೆ.


Click it and Unblock the Notifications











