ನಟಿ ಶ್ವೇತಾ ಪಂಡಿತ್ 'ಕೇಸ್'ಗೆ ಮರುಜೀವ
ನಟಿ ಶ್ವೇತಾ ಪಂಡಿತ್ 'ಕೇಸ್'ಗೆ ಮರುಜೀವ ಬಂದಿದೆ. ಕೇಸ್ ಹಳೆಯದಾದರೂ ಅದಕ್ಕಿರುವ ಪ್ರಾಮುಖ್ಯತೆಯ ಕಾರಣ ಅದನ್ನು ಮತ್ತೆ ರೀ ಓಪನ್ ಮಾಡಲಾಗುತ್ತಿದೆ. ಇದ್ಯಾವ ಕೇಸು ಎಂದು ಕಂಗಾಲಾಗಬೇಡಿ. ನಾವು ಮಾತನಾಡುತ್ತಿರುವುದು 'ಕೇಸ್ ನಂ.18/9' ಚಿತ್ರದ ಬಗ್ಗೆ ಕಣಣ್ಣೋ.
ವ್ಯಾಪಾರಿ ಸಿನಿಮಾಗಳಲ್ಲಿ ಮನಸ್ಸು ಹಾಗೂ ಹೃದಯ ತಟ್ಟುವ ಸಿನಿಮಾ 'ಕೇಸ್ ನಂ.18/9' ಈ ಶುಕ್ರವಾರ (ಅ.25) ರಜತಪರದೆ ಮೇಲೆ ಮತ್ತೆ ರಾರಾಜಿಸಲಿದೆ. ಉದ್ಯಮದ ಹಲವಾರು ನುರಿತ ವ್ಯಕ್ತಿಗಳ ಸಲಹೆಯಂತೆ ಹಾಗೂ ಪ್ರೇಕ್ಷಕರಿಗೆ ಮತ್ತೆ ಒಂದು ಸಾಮಾಜಿಕ ಜವಾಬ್ದಾರಿಯ ಕಾರಣ ಸಿನೆಮಾ ವೀಕ್ಷಣೆಗೆ ಅವಕಾಶ ನೀಡುತ್ತಿದ್ದಾರೆ ನಿರ್ಮಾಪಕರು.
'ಕೇಸ್' ನಿರ್ಮಾಪಕರುಗಳಾದ ವಿ.ಕೆ. ಮೋಹನ್, ಪ್ರವೀಣ್ ಕುಮಾರ್ ಶೆಟ್ಟಿ, ಶಿವಾನಂದ್ ಶೆಟ್ಟಿ, ಕಾಂತಿ ಶೆಟ್ಟಿ ಅವರ ಮೊದಲ ಜಂಟಿ ಪ್ರಯತ್ನ ಈಗಾಗಲೇ ಉತ್ತಮ ಪ್ರತಿಕ್ರಿಯೆಯನ್ನು ಸಂಪಾದಿಸಿಕೊಂಡಿದೆ. ಚಿತ್ರದ ಕಥಾವಸ್ತು ದೇಶದ ಎಲ್ಲ ಕಡೆ ಪಸರಿಸಬಹುದಾದ ವಿಚಾರ ಆದ್ದರಿಂದ ಈ ಚಿತ್ರವನ್ನೂ ಸಾಮಾಜಿಕ ಕಳಕಳಿಯಿಂದಲೂ ಮಾಡಲಾಗಿದೆ.ನಾಯಕ ನಿರಂಜನ್ ಈ ಚಿತ್ರಕ್ಕಾಗಿ ಒಂದು ವಾರ ಕಾಲ ಕೊಳಚೆ ಪ್ರದೇಶದಲ್ಲಿ ಇದ್ದು ಅಲ್ಲಿನ ವಾತಾವರಣವನ್ನು ಗಮನಿಸಿ ಈ ಸಿನಿಮಾಕ್ಕೆ ಬೇಕಾದ ರೀತಿಯಲ್ಲಿ ಹಾವಭಾವಗಳನ್ನು ಅಳವಡಿಸಿಕೊಂಡಿದ್ದಾರೆ. ಶ್ವೇತಾ ಪಂಡಿತ್, ಅಭಿ, ಸಿಂಧು ಲೋಕನಾಥ್ ಹಾಗೂ ಕಾರ್ತಿಕ್ ಶರ್ಮ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ.
ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ನಿರ್ದೇಶಕರು ಮಹೇಶ್ ರಾವ್. ಛಾಯಾಗ್ರಾಹಕ ಸಭಾ ಕುಮಾರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ದೀಪು ಎಸ್ ಕುಮಾರ್ ಅವರ ಸಂಕಲನ, ರಾಜು ಬೆಳೆಗೆರೆ ಅವರ ಸಂಭಾಷಣೆ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












