ನಿರ್ದೇಶಕ ಬಿ. ಶಿವಾನಂದ ಕನಸಿನ 'ಮತ್ತೆ ಸತ್ಯಾಗ್ರಹ'
ಮಂಡ್ಯ ಜಿಲ್ಲೆ, ಮದ್ದೂರಿನ ಶಿವಪುರದ 'ಸತ್ಯಾಗ್ರಹ ಸೌಧ' ವಿಜಯದಶಮಿಯ ಅಕ್ಟೋಬರ್ 14 ರಂದು ವಾಸ್ತವ ಆಶಯಗಳಿಗೆ ಸಾಕ್ಷಿಯಾಗುವಂತೆ ಕಂಗೊಳಿಸಿತು. ನಟ ಬರಹಗಾರ, ನಿರ್ದೇಶಕ, ವೈಚಾರಿಕಚಿಂತಕ ಬಿ. ಶಿವಾನಂದ ನಿರ್ದೇಶನದ ಚೊಚ್ಚಲ ಚಲನಚಿತ್ರ 'ಮತ್ತೆ ಸತ್ಯಾಗ್ರಹ' ಚಿತ್ರೀಕರಣದ ಮಹೂರ್ತ ಸಮಾರಂಭವು ಸರಳ ಹಾಗೂ ಅರ್ಥಪೂರ್ಣವೆನಿಸಿತು.
ಸಿನಿಮಾರಂಗದ ಅಬ್ಬರ ಆಡಂಬರ ಅಲ್ಲಿ ಕಾಣದೆ ಪ್ರಸ್ತುತ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಆದರ್ಶ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಹಿನ್ನೆಲೆಯಲ್ಲಿ ಕಲುಷಿತ ವ್ಯವಸ್ಥೆಗೆ ಪರಿಹಾರ ಹುಡುಕುವ ಹೊಸ ಆಶಯದ ವಾತಾವರಣ ಭರವಸೆಯಾಗಿ ಮೂಡಿಬಂದಿತು.

ಭ್ರಷ್ಟಾಚಾರ ನಿರ್ಮೂಲನೆ, ಸಾಮಾಜಿಕ ಅಸಮಾನತೆ, ಜನಪ್ರತಿನಿಧಿಗಳ ಸ್ವಾರ್ಥದ ವಿರುದ್ಧ ಈ ಚಿತ್ರ ಸಂದೇಶದ ಸಂಚಲನ ಉಂಟು ಮಾಡಲೆಂಬ ಆಶಯ ಇವರದಾಗಿತ್ತು. ಇದೇ ಸಮಾರಂಭಕ್ಕೆ ಎ.ಟಿ. ರಾಮಸ್ವಾಮಿ ಶುಭಕೋರಿರುತ್ತಾರೆ.
ಆತ್ಮಬಿಂದು ವಿಷನ್ಸ್ ಅರ್ಪಿಸುತ್ತಿರುವ 'ಮತ್ತೆ ಸತ್ಯಾಗ್ರಹ' ಚಲನಚಿತ್ರಕ್ಕೆ ನಿರ್ದೇಶಕರಾಗಿ ಬಿ. ಶಿವಾನಂದ ಸತತ ಅಧ್ಯಯನ, ಪೂರ್ವಸಿದ್ಧತೆ ಮಾಡಿಕೊಂಡಿರುವುದು ಹೊಸ ಪ್ರಯೋಗಕ್ಕೆ ತೆರೆದುಕೊಳ್ಳುವಂತಿದೆ. ದೇಶವನ್ನು ಬ್ರಿಟಿಷರ ಅಧಿಪತ್ಯದಿಂದ ಬಿಡುಗಡೆ ಪಡೆಯಲು ರಾಷ್ಟ್ರಭಕ್ತರು ತ್ಯಾಗ, ಬಲಿದಾನಗಳ ಮೂಲಕ ಹುತಾತ್ಮರಾಗಿ ಸ್ವಾತಂತ್ರ ಗಳಿಸಿಕೊಟ್ಟಿದ್ದಾರೆ. ಅದರ ಫಲವೇ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದಾಗಿದೆ. ಆದರೆ ಸಮಾಜದಲ್ಲಿಂದು ಕೃತಜ್ಞತಾ ಭಾವವೇ ಸತ್ತುಹೋಗಿದೆ.

'ಮತ್ತೆ ಸತ್ಯಾಗ್ರಹ' ಕಥೆಯಲ್ಲಿ ಗಾಂಧಿ ತತ್ವಗಳೇ ನಾಯಕನ ಪಾತ್ರ ವಹಿಸಲಿವೆ. ದುಗ್ಗಜ್ಜ ಎನ್ನುವ ಗಾಂಧಿ ಅನುಯಾಯಿ, ಸ್ವಾತಂತ್ರ್ಯ ಹೋರಾಟಗಾರ ಕಥೆಯಕೇಂದ್ರ ಬಿಂದು. ಸತ್ಯ ಎಂಬ ಪಾತ್ರಧಾರಿ ಮೂಲಕ ಗಾಂಧಿ ಚಳುವಳಿ ಮರುಹುಟ್ಟು ಪಡೆದರೂ ಅವನ ನಿಗೂಢ ಕುತಂತ್ರಗಳಿಗೆ ನಂಬಿದವರು ಬಲಿಯಾಗುವ ಸ್ಥಿತಿ ಕರುಣಾಜನಕ ಎನಿಸಲಿದೆ. ಪ್ರಜಾತಂತ್ರ ರಾಜಕೀಯ ನೈತಿಕತೆಯನ್ನ ಎತ್ತಿ ಹಿಡಿಯುವ, ಗಾಂಧೀಜಿಯವರ ತತ್ತ್ವಾದರ್ಶ ಸರ್ವಕಾಲಕ್ಕೂ ಮಾನ್ಯ ಎಂಬುದನ್ನು ಪ್ರತಿಪಾದಿಸುವ ಸಂದೇಶ ಚಿತ್ರದ್ದಾಗಿದೆ.
ಬ್ರಿಟಿಷರ ಆಳ್ವಿಕೆಯಲ್ಲಿ ನಿಷೇಧಾಜ್ಞೆ ದಿಕ್ಕರಿಸಿ ಧ್ವಜಾರೋಹಣ ನೆರವೇರಿಸಿ ಗುಂಡೇಟಿಗೆ ಬಲಿಯಾದ ಹುತಾತ್ಮರ ನೆತ್ತರು ಹರಿದ ಶಿವಪುರ ಸತ್ಯಾಗ್ರಹಸೌಧದ ನೆಲದಲ್ಲಿ ಏರ್ಪಾಡಾಗಿದ್ದ ಚಿತ್ರೀಕರಣ ಮಹೂರ್ತ ಅಷ್ಟೇ ಅರ್ಥವತ್ತಾಗಿತ್ತು. ನಿರ್ದೇಶಕ ಬಿ.ಶಿವಾನಂದ ಪ್ರಾಸ್ತಾವಿಕ ನುಡಿಗಳಿಂದ ಚಿತ್ರದ ಕಥಾವಸ್ತು ವಿವರಿಸಿದರು. ವೇದಿಕೆಯಲ್ಲಿ ಸ್ವಾತಂತ್ರ್ಯಜ್ಯೋತಿಯನ್ನು ಬೆಳಗಿಸಲು ಆಗಮಿಸಿದ್ದ ಗಣ್ಯರು, ಸ್ವಾತಂತ್ರ ಹೋರಾಟಗಾರರೊಂದಿಗೆ ಕೈ ಜೋಡಿಸುವ ಮೂಲಕ ಚಾಲನೆ ನೀಡಲಾಯಿತು. ರಾಷ್ಟ್ರಭಕ್ತರ ತ್ಯಾಗ, ಬಲಿದಾನ ಸ್ಮರಿಸಿ ಎಲ್ಲರೂ ಮೌನಾಚರಣೆ ಮಾಡಿ ರಾಷ್ಟ್ರಾಭಿಮಾನದ ದೀಕ್ಷೆ ಕೈಗೊಳ್ಳಲಾಯಿತು. (ಒನ್ಇಂಡಿಯಾ ಕನ್ನಡ)


Click it and Unblock the Notifications











