ಹೊಸವರ್ಷಕ್ಕೆ ಕಿಚ್ಚ ಸುದೀಪ್ ಚಿತ್ರ 'ವರದನಾಯಕ'
ಕಿಚ್ಚ ಸುದೀಪ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ನಾಯಕ್ ನಹೀ ವರದನಾಯಕ್ ಹೂಂ ಮೈ ಎಂದು ಕಿಚ್ಚ ಸುದೀಪ್ ಬರುತ್ತಿದ್ದಾರೆ. 2013ರ ಹೊಸ ವರ್ಷದ ಕೊಡುಗೆಯಾಗಿ ಅವರ ಹೊಸ ಚಿತ್ರ ವರದನಾಯಕ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ನಾಯಕ ನಟ ಚಿರಂಜೀವಿ ಸರ್ಜಾ. ಆದರೆ ಸುದೀಪ್ ಅವರೇ ಚಿತ್ರದ ನಾಯಕ ನಟ ಎಂಬಷ್ಟರ ಮಟ್ಟಿಗೆ ಪ್ರಚಾರ ನೀಡಲಾಗಿದೆ. ಸುಮಾರು ಎಂಟು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ವರದನಾಯಕ ಚಿತ್ರ ನಿರ್ಮಾಪಕ ಶಂಕರ್ ಗೌಡ.
ಈ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಸುವರ್ಣ ವಾಹಿನಿ 2.25 ಕೋಟಿ ಮೊತ್ತಕ್ಕೆ ಖರೀದಿಸಿದೆ. ಈ ಚಿತ್ರದ ವಿತರಣೆ ಹಕ್ಕುಗಳು ಭರ್ಜರಿ ಬೆಲೆಗೆ ಮಾರಾಟವಾಗಿವೆ. ಈಗಾಗಲೇ ಬಿಕೆಟಿ (ಬೆಂಗಳೂರು, ಕೋಲಾರ, ತುಮಕೂರು) ಏರಿಯಾವನ್ನು 3.5ಕೋಟಿ, ಮೈಸೂರು 1.5ಕೋಟಿ, ಹುಬ್ಬಳ್ಳಿ 1.5ಕೋಟಿ, ಸಣ್ಣ ಪುಟ್ಟ ಏರಿಯಾಗಳಿಂದ ಸುಮಾರು 2 ಕೋಟಿಗೂ ಹೆಚ್ಚು ಮೊತ್ತಕ್ಕೆ ಚಿತ್ರದ ರೈಟ್ಸ್ ಅನ್ನು ಸೇಲ್ ಮಾಡಿದ್ದಾರೆ.
ತೆಲುಗಿನ ಲಕ್ಷ್ಯಂ ಚಿತ್ರದ ರೀಮೇಕ್ 'ವರದನಾಯಕ'. ಸಾಮಾನ್ಯವಾಗಿ ಸುದೀಪ್ ರೀಮೇಕ್ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಸೋತ ಉದಾಹರಣೆಗಳು ವಿರಳ. ವರದನಾಯಕ ಚಿತ್ರದ ಬಗ್ಗೆಯೂ ಬಹಳಷ್ಟು ನಿರೀಕ್ಷೆಗಳಿವೆ.
ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಿಕೇಶಾ ಪಟೇಲ್ ಹಾಗೂ ಸುದೀಪ್ ಗೆ ನಾಯಕಿಯಾಗಿ ದಕ್ಷಿಣ ಭಾರತದ ಹೆಸರಾಂತ ನಟಿ ಸಮೀರಾ ರೆಡ್ಡಿ ಅಭಿನಯಿಸಿದ್ದಾರೆ. ಅಯ್ಯಪ್ಪ.ಪಿ.ಶರ್ಮ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರವಿದು.
ಮುಖ್ಯಮಂತ್ರಿ ಚಂದ್ರು, ಜೈಜಗದೀಶ್, ಶೋಭ್ರಾಜ್, ಶರತ್ ಲೋಹಿತಾಶ್ವಾ, ಬುಲೆಟ್ ಪ್ರಕಾಶ್, ಶರಣ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಖೇಶ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈಶ್ವರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಹಾಗೂ ನರಸಿಂಹ ಮತ್ತು ರಾಮಣ್ಣನವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











