ಮತ್ತೆ ದೊಡ್ತನ ಮೆರೆದ 'ದೊಡ್ಮನೆ': ವಿನಯ ಮೆರೆದ ರಾಘವೇಂದ್ರ ರಾಜ್ಕುಮಾರ್
ಡಾ ರಾಜ್ಕುಮಾರ್ ಕುಟುಂಬವನ್ನು 'ದೊಡ್ಮನೆ' ಎಂದು ಕರೆಯುವ ರೂಢಿ. ಅವರ ಮನೆಯ ಅಳತೆ ವಿಶಾಲವಾದುದು ಎಂಬ ಕಾರಣಕ್ಕಲ್ಲ ಹೀಗೆ 'ದೊಡ್ಮನೆ' ಎಂದು ಕರೆಯುವುದು ಅಲ್ಲಿ ನೆಲೆಸಿರುವವರ ಹೃದಯ ವೈಶಾಲ್ಯತೆಯಿಂದಾಗಿ ಈ ಅನ್ವರ್ಥನಾಮ ಬಂದಿದೆ.
ಸಾಧಕರಾಗಿಯೂ, ಸಮಾಜದಲ್ಲಿ ಗಣ್ಯರಾಗಿದ್ದರೂ ಸಹ ತಮ್ಮನ್ನು ತಾವು ಸಾಮಾನ್ಯರೆಂದು, ಎಲ್ಲರೊಳಗೊಂದು ಎಂದು ಯಾರು ಭಾವಿಸುತ್ತಾರೆಯೋ ಅವರಿಗೆ 'ಸಾಧಕ', 'ದೊಡ್ಡವರು' ಉಪಮೆಗಳು ಬಹಳ ಚೆನ್ನಾಗಿ ಒಪ್ಪುತ್ತವೆ. ದೊಡ್ಮನೆಯವರದ್ದೂ ಸಹ ಇದೇ ಗುಣ.
ಅಭಿಮಾನಿಗಳು, ರಾಜ್ಯದ ಜನತೆ ಅವರನ್ನು ಪ್ರೀತಿಸಿದಷ್ಟು, ಗೌರವಿಸುವುದಷ್ಟು ಅವರು ನೆಲಕ್ಕೆ ಇಳಿಯುತ್ತಲೇ ಇದ್ದಾರೆಯೇ ಹೊರತು ಮೇಲೇರಿಲ್ಲ. ಹೆಚ್ಚು-ಹೆಚ್ಚು ಪ್ರೀತಿ, ಗೌರವಗಳು ದೊರಕಿದಷ್ಟು ಅವರು ಇನ್ನಷ್ಟು ವಿಜಯವಂತರಾಗುತ್ತಲೇ ಸಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಇಂದು ನಡೆದ 'ರಾಜ್ ಕಪ್' ಕಾರ್ಯಕ್ರಮ.
Recommended Video

ಚಿತ್ರರಂಗದ ಕೆಲವು ನಟರು, ತಂತ್ರಜ್ಞರು ಸೇರಿ ಆಯೋಜಿಸಿದರುವ 'ರಾಜ್ ಕಪ್' ಕ್ರಿಕೆಟ್ ಟೂರ್ನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ರಾಘವೇಂದ್ರ ರಾಜ್ಕುಮಾರ್ ಹಲವು ವಿಷಯಗಳನ್ನು ಮಾತನಾಡಿದರು. ರಾಜ್ ಕುಮಾರ್ ಹಾಗೂ ಕ್ರಿಕೆಟ್ ನಡುವಿನ ಬಂಧದ ಬಗ್ಗೆಯೂ ಮಾತನಾಡಿದರು. ಬಳಿಕ ತಮ್ಮ ಕುಟುಂಬವನ್ನು 'ದೊಡ್ಮನೆ' ಎಂದು ಕರೆಯುವ ಕುರಿತು ರಾಜ್ಕುಮಾರ್ ಹೇಳಿದ್ದ ಮಾತೊಂದನ್ನು ನೆನಪು ಮಾಡಿಕೊಂಡರು.

ದೊಡ್ಮನೆ ಎಂದರೆ ಯಾರದ್ದೆಂದು ಕೇಳಿದ್ದ ರಾಜ್ಕುಮಾರ್
ಇವರೆಲ್ಲ ನಮ್ಮನ್ನು 'ದೊಡ್ಮನೆಯವರು' ಎಂದು ಕರೀತಾರೆ. ನಮ್ಮ ಅಪ್ಪನವರಿಗೆ ಪ್ರಶ್ನೆಯೊಂದು ಎದುರಾಯಿತು. ''ಎಲ್ಲರೂ ದೊಡ್ಮನೆ ದೊಡ್ಮನೆ ಎಂದು ಕರೀತಾರಲ್ಲ, ಯಾರದ್ದು ಈ ದೊಡ್ಮನೆ' ಎಂದು ನಮ್ಮ ಅಮ್ಮ ಪಾರ್ವತಮ್ಮನವರ ಬಳಿ ಅಪ್ಪಾಜಿ ಕೇಳಿದ್ದರು. ಆಗ ಅಮ್ಮ, 'ನಮ್ಮ ಮನೆಯನ್ನೇ ದೊಡ್ಮನೆ ಅಂತ ಹೇಳ್ತಿದ್ದಾರೆ ಎಂದು ಉತ್ತರಿಸಿದರು'' ಎಂದು ಹಳೆಯ ಘಟನೆ ನೆನಪು ಮಾಡಿಕೊಂಡರು ರಾಘವೇಂದ್ರ ರಾಜ್ಕುಮಾರ್.

ಚಿತ್ರರಂಗ ದೊಡ್ಮನೆ, ನಮ್ಮದು ಕೋಣೆ ಅಷ್ಟೆ ಎಂದಿದ್ದ ಅಣ್ಣಾವ್ರು
ಅಮ್ಮನ ಮಾತಿಗೆ ಉತ್ತರಿಸಿದ ಅಪ್ಪಾಜಿ, ''ನಮ್ಮ ಸಿನಿಮಾ ರಂಗ ಒಂದು ದೊಡ್ಡ ಮನೆ, ಅದರಲ್ಲಿ ನಮ್ಮದು ಒಂದು ಸಣ್ಣ ಕೋಣೆ ಅಷ್ಟೆ. ಇವತ್ತು ನಾವು ಆ ರೂಮ್ನಲ್ಲಿ ಇದ್ದೀವಿ. ನಾಳೆ ಇನ್ನೊಬ್ಬರು ಬರುತ್ತಾರೆ, ಎಂದು ರಾಜ್ಕುಮಾರ್ ಹೇಳಿದ್ದಾಗಿ ನೆನಪು ಮಾಡಿಕೊಂಡರು ರಾಘವೇಂದ್ರ ರಾಜ್ಕುಮಾರ್. ಮುಂದುವರೆದು, ಅದು ನಿಜವೂ ಹೌದು, ನಮ್ಮ ಚಿತ್ರರಂಗ 'ದೊಡ್ಮನೆ', ನಮ್ಮ ಮನೆ ಅದರಲ್ಲಿ ಸಣ್ಣ ರೂಮ್ ಅಷ್ಟೆ. ಯಾವುತ್ತೂ ಅದು ಹಾಗೆಯೇ ಇರಬೇಕು'' ಎಂದರು ರಾಘವೇಂದ್ರ ರಾಜ್ಕುಮಾರ್.

ಗೆಲ್ಲುವುದು ನಮ್ಮ ಚಿತ್ರರಂಗ ಅಷ್ಟೆ: ರಾಘವೇಂದ್ರ ರಾಜ್ಕುಮಾರ್
ಮುಂದುವರೆದು, ರಾಜ್ ಕಪ್ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ''ಇವತ್ತು ಯಾರು ಯಾರ ಮೇಲೆ ಆಡಿದರೇನು, ಯಾರು ಯಾರ ಮೇಲೆ ಗೆದ್ದರೇನು? ಗೆಲ್ಲುವುದು ನಮ್ಮ ಚಿತ್ರರಂಗವೇ. ನಮ್ಮ ಮೇಲೆ ನಾವೇ ಆಡಿಕೊಳ್ಳುತ್ತಿದ್ದೇವೆ ಅಷ್ಟೆ. ನನಗೆ ಇಲ್ಲಿ ಒಂದು ಕುಟುಂಬ ಕಾಣುತ್ತಿದೆ. ಎಲ್ಲರನ್ನೂ ಒಟ್ಟುಗೂಡಿಸಿ ಆಟ ಆಡಿಸುತ್ತಿರುವದಕ್ಕೆ ಆಯೋಜಕರಿಗೆ ಧನ್ಯವಾದ'' ಎಂದರು ರಾಘವೇಂದ್ರ ರಾಜ್ಕುಮಾರ್.

ಕ್ರೀಡೆಗೆ ಬಹಳ ಶಕ್ತಿಯಿದೆ: ರಾಘವೇಂದ್ರ ರಾಜ್ಕುಮಾರ್
''ಕ್ರೀಡೆಗೆ ಬಹಳ ಶಕ್ತಿಯಿದೆ. ಹಿಂದೆ ಯುದ್ಧದಿಂದ ಬೇರಾಗಿದ್ದ ದೇಶಗಳನ್ನು ಸಹ ಕೂಡಿಸುವ ಕಾರ್ಯವನ್ನು ಒಲಿಂಪಿಕ್ಸ್ ಮಾಡಿದೆ. ಕ್ರೀಡೆಗೆ ಅಂಥಹಾ ಶಕ್ತಿಯಿದೆ. ಹಾಗಾಗಿ ಚೆನ್ನಾಗಿ ಆಟವಾಡಿ, ಯಾರಾದರೂ ಗೆಲ್ಲಲಿ, ಸೋಲಲಿ ಆದರೆ ಕಪ್ ಗೆಲ್ಲುವುದು ಮಾತ್ರ ಚಿತ್ರರಂಗವೇ ಹಾಗಿದ್ದಮೇಲೆ ಅದು ನಮ್ಮದೇ ಜಯ. ಎಲ್ಲರೂ ಒಟ್ಟಿಗೆ ಸೇರಿರುವ ಈ ಸಂದರ್ಭವೇ ಬಹಳ ವಿಶೇಷವಾದುದು'' ಎಂದು ಎಲ್ಲರಿಗೂ ಶುಭಾಶಯ ತಿಳಿಸಿ ಮಾತು ಮುಗಿಸಿದರು ರಾಘವೇಂದ್ರ ರಾಜ್ಕುಮಾರ್.


Click it and Unblock the Notifications











