ದಾವಣಗೆರೆಯಲ್ಲಿ 'ಗುರು-ಶಿಷ್ಯರು' ಸಿನಿಮಾದ ಟ್ರೈಲರ್ ಲಾಂಚ್
ನಟ ಶರಣ್ ನಟನೆಯ ಬಹುನಿರೀಕ್ಷಿತ 'ಗುರು ಶಿಷ್ಯರು' ಸಿನಿಮಾದ ಪ್ರಚಾರ ಕಾರ್ಯಕ್ರಮವು ದಾವಣಗೆರೆ ನಗರದ ಪೂಜಾ ಇಂಟರ್ ನ್ಯಾಷನಲ್ ಹೊಟೇಲ್ನಲ್ಲಿ ನಡೆಯಿತು. ಸೆ.23ರಂದು ರಾಜ್ಯದಾದ್ಯಂತ ಸಿನಿಮಾ ತೆರೆ ಕಾಣಲಿದ್ದು, ಚಿತ್ರದ ಪ್ರಮೋಷನ್ಗೆ ಚಿತ್ರ ತಂಡ ಬೆಣ್ಣೆನಗರಿಗೆ ಆಗಮಿಸಿ, ಪ್ರಚಾರ ನಡೆಸಿತು. ಈ ವೇಳೆ ಶರಣ್ ಹಾಗೂ ನಾಯಕ ನಟಿ ಯಕ್ಷಿಕಾ ಸಿನಿಮಾದ ಹಾಡೊಂದಕ್ಕೆ ಸ್ಟೆಪ್ ಹಾಕುವ ಮೂಲಕ ಗಮನ ಸೆಳೆದರು.
ಈ ವೇಳೆ ಮಾತನಾಡಿದ ಶರಣ್, ''ನನ್ನ ಪ್ರೊಡಕ್ಷನ್ನ ಮೂರನೇ ಸಿನಿಮಾ. ತರುಣ್ ಕಿಶೋರ್ ಸುಧೀರ್ ಸಂಸ್ಥೆ ನಿರ್ಮಾಣ ಜವಾಬ್ದಾರಿ ಹೊತ್ತಿದೆ. ಆತನ ಹೊಸ ಬ್ಯಾನರ್ ಶುರುವಾಗುತ್ತಿದೆ. ಬಹಳ ಮೊದಲುಗಳಿಗೆ ಈ ಸಿನಿಮಾ ಕಾರಣವಾಗಿದೆ. ಖೋ-ಖೋ ಕ್ರೀಡೆಯ ಮೇಲೆ ನಿರ್ಮಾಣ ಮಾಡಲಾಗಿರುವ ಕನ್ನಡದ ಮೊಟ್ಟ ಮೊದಲ ಸಿನಿಮಾ ಎನ್ನುವುದು ವಿಶೇಷ. ನಮ್ಮ ನೆಲದ, ಸಂಸ್ಕೃತಿ ಬಿಂಬಿಸುವ ಆಟ. ಆದ್ರೆ, ಈ ಕ್ರೀಡೆಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ ಎಂಬ ಬೇಸರ ಇದೆ. ಗುರುಶಿಷ್ಯರು ಸಿನಿಮಾದಲ್ಲಿ ಈ ಆಟದ ಬಗ್ಗೆ ಉತ್ತಮವಾಗಿ ಚಿತ್ರೀಕರಿಸಲಾಗಿದೆ. ಗುರುಗಳ ಕುರಿತಾದ ಹಾಡು ಎಲ್ಲರ ಮನಮುಟ್ಟಿದೆ. ಗುರುಗಳ ಕಣ್ಣಲ್ಲಿ ನೀರು ತರಿಸಿದೆ. ಯಾರೇ ಆಗಲಿ ಗುರುಗಳ ಮಾರ್ಗದರ್ಶನದಲ್ಲಿಯೇ ಎತ್ತರಕ್ಕೆ ಬೆಳೆದಿರುವುದು ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೊಂದು ಚೆನ್ನಾಗಿ ಮೂಡಿ ಬಂದಿದೆ'' ಎಂದು ಹೇಳಿದರು.
ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಕಥನ ಚಿತ್ರದಲ್ಲಿದೆ. ನನ್ನ 20 ವರ್ಷದ ಸಿನಿಮಾ ಜರ್ನಿಯಲ್ಲಿ ಸಾರ್ಥಕತೆ ತಂದಿರುವಂಥ ಸಿನಿಮಾ ಅಂದರೆ ಗುರು ಶಿಷ್ಯರು. ಖೋ-ಖೋ ಆಟ ಈ ನೆಲದ ಮಣ್ಣಿನದ್ದು. ಸಾವಿರಾರು ವರ್ಷಗಳ ಇತಿಹಾಸ ಇದೆ. ಮಹಾಭಾರತದ ಕಾಲದಲ್ಲಿಯೂ ಈ ಆಟ ಆಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಈ ಕ್ರೀಡೆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ತೆರೆಗೆ ತರುವ ಕೆಲಸ ಮಾಡಿದ್ದೇವೆ. ಈ ಆಟದ ಮೂಲಕ ಗ್ರಾಮೀಣ ಸೊಗಡಿನ ಚಿತ್ರಣ ತೋರಿಸುವ ಕಥೆ ಹೆಣೆದು ಗುರು ಶಿಷ್ಯರ ಸಂಬಂಧದ ಭಾವುಕತೆ, ಮನರಂಜನೆಯೂ ಈ ಚಿತ್ರದಲ್ಲಿದೆ ಎಂದು ತಿಳಿಸಿದರು ಶರಣ್.

ಆ ಗುರು-ಶಿಷ್ಯರಿಗೆ ಈ ಗುರು-ಶಿಷ್ಯರಿಗೆ ಸಂಬಂಧವಿಲ್ಲ
ಖೋ-ಖೋ ಆಟ ಆಡುವುದು ಸುಲಭದ ಮಾತಲ್ಲ. ಈ ಆಟದ ಕಲಿತವರು ಯಾವುದೇ ಕ್ರೀಡೆ ಬೇಕಾದರೂ ಆಡಬಹುದು. ಇನ್ನು ಈ ಚಿತ್ರದಲ್ಲಿ ನಟಿಸಿರುವ ಮಕ್ಕಳ ಶ್ರಮ, ಪರಿಶ್ರಮ, ಅಭ್ಯಾಸ ನಿಜಕ್ಕೂ ಪ್ರಶಂಸನಾರ್ಹ. ಸುಮಾರು 8 ತಿಂಗಳ ಕಾಲ ಕಠಿಣ ಅಭ್ಯಾಸ ನಡೆಸಿದ್ದಾರೆ. ಸಿನಿಮಾಗೋಸ್ಕರ ಅಂತಾ ಅಲ್ಲ, ಈ ಸಿನಿಮಾದಲ್ಲಿ ನಟಿಸುವವರೆಲ್ಲರೂ ಈಗ ಒಳ್ಳೆಯ ಕ್ರೀಡಾಪಟುಗಳಾಗಿದ್ದಾರೆ. ಯಾವುದೇ ಡ್ಯೂಪ್ ಬಳಸದೇ ನಟಿಸಿರುವುದು ತುಂಬಾನೇ ವಿಶೇಷ. ನನಗಿಂತ ಮಕ್ಕಳು ತುಂಬಾನೇ ಚೆನ್ನಾಗಿ ಅಭಿನಯಿಸಿದ್ದು, ಈ ಸಿನಿಮಾ ಗೆದ್ದರೆ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗುತ್ತದೆ. 1981ರಲ್ಲಿ ತೆರೆ ಕಂಡ ದ್ವಾರಕೀಶ್ ನಿರ್ದೇಶನದ ಗುರು ಶಿಷ್ಯರು ಸಿನಿಮಾವೇ ಬೇರೆ. ಈ ಸಿನಿಮಾನೇ ಬೇರೆ. ಆದ್ರೆ, ಎರಡೂ ಚಿತ್ರಗಳು ಹಾಸ್ಯಭರಿತ ಚಿತ್ರ. ಆ ಚಿತ್ರಕ್ಕೂ ಈ ಚಿತ್ರಕ್ಕೂ ಹೋಲಿಕೆ ಸಲ್ಲ'' ಎಂದರು ಶರಣ್.

ದಾವಣಗೆರೆ ನೆನಪು ಬಿಚ್ಚಿಟ್ಟ ಶರಣ್
ದಾವಣಗೆರೆ ಹಾಗೂ ನನ್ನ ನಡುವಿನ ನಂಟು ತುಂಬಾ ಹಳೆಯದು. ನನ್ನ ಎರಡನೇ ಸಿನಿಮಾ 'ದಂಡನಾಯಕ'. ಸುಮಾರು 22 ವರ್ಷಗಳ ಹಿಂದೆ ಪೂಜಾ ಇಂಟರ್ ನ್ಯಾಷನಲ್ ಹೊಟೇಲ್ನಲ್ಲಿದ್ದೆ. ಆಗ ಸುಧೀರ್ ಅವರು ಇಲ್ಲೇ
ಇದ್ದರು. ಅವರು ನನಗೆ ಸಿನಿಮಾದಲ್ಲಿ ಹಾಸ್ಯಪಾತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ಇದೇ ಹೊಟೇಲ್ ನಲ್ಲಿ ಮೂರು ದಿನಗಳ ನಟನೆ ಅಭ್ಯಾಸ ಮಾಡಿದ್ದೆ. ಆ ಎಲ್ಲಾ ನೆನಪುಗಳು ಈಗಲೂ ಹಾಗೆ ಇವೆ. ಜೊತೆಗೆ ನನಗೆ
ಈ ಜಾಗದ ಜೊತೆ ಬಿಡಿಸಲಾರದ ನಂಟಿದೆ. ಹಾಗಾಗಿ, ದಾವಣಗೆರೆ ಎಂದರೆ ನನಗೆ ತುಂಬಾನೇ ಪ್ರೀತಿ. ಇಲ್ಲಿನ ರಂಗಭೂಮಿ, ನಾಟಕ ರಂಗ ತುಂಬಾನೇ ಗಟ್ಟಿ ಇದೆ. ನಾನು ಸಹ ಗಟ್ಟಿಯಾಗಿ ನಿಲ್ಲಲು ಎಲ್ಲರ ಪ್ರೀತಿ, ವಿಶ್ವಾಸವೇ ಕಾರಣ'' ಎಂದು ಶರಣ್ ನೆನಪು ಮಾಡಿಕೊಂಡರು.

ನಾಯಕಿ ಯಕ್ಷಿತಾ ಮಾತು
ಚಿತ್ರದ ನಾಯಕಿ ಯಕ್ಷಿಕಾ ಮಾತನಾಡಿ, ಬೆಣ್ಣೆದೋಸೆಯಷ್ಟೇ ಇಲ್ಲಿನ ಜನರ ಮನಸ್ಸು ಮೃದು. ಗುರು ಶಿಷ್ಯರು ಚಿತ್ರದಲ್ಲಿ ಮೊದಲ ಬಾರಿಗೆ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದೇನೆ. ನಾನು ಹುಟ್ಟಿದ್ದು, ಓದಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಲಂಗ, ದಾವಣಿ ಧರಿಸಿ ಸೈಕಲ್ ಓಡಿಸುವುದು ತುಂಬಾನೇ ಕಷ್ಟವಾಗಿತ್ತು. ನಾನು ಬೇರೆ ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ವಿಭಿನ್ನ ಅನುಭವ ಈ ಚಿತ್ರ ನೀಡಿದೆ. ಸೂಜಿ ಎಂಬ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದು, ಸೆ. 23ಕ್ಕೆ ಚಿತ್ರ ತೆರೆ ಕಾಣುತ್ತಿದ್ದು, ಎಲ್ಲರೂ ನೋಡಿ ಬೆಂಬಲಿಸಿ'' ಎಂದು ಮನವಿ ಮಾಡಿದರು.

ಸೆಪ್ಟೆಂಬರ್ 23 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ
ಇನ್ನು ಗುರುಶಿಷ್ಯರು ಲಡ್ಡು ಸಿನಿಮಾ ಅಸೋಸಿಯೇಷನ್ ಬ್ಯಾನರ್ ಅಡಿ ನಿರ್ಮಾಣವಾಗಿದ್ದು, ಜಡೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಾಹಿತ್ಯ ಮತ್ತು ಹಿನ್ನೆಲೆ ಸಂಗೀತ ಅಜನೀಶ್ ಲೋಕನಾಥ್ ಅವರದ್ದು. ತರುಣ್ ಹಾಗೂ ಶರಣ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಮಹಾಂತೇಶ್ ಸೇರಿದಂತೆ ಹಲವರು ನಟಿಸಿದ್ದು, ಚಿತ್ರದಲ್ಲಿ ಖೋ ಖೋ ಆಟಗಾರರಾಗಿ ಕಾಣಿಸಿಕೊಂಡಿರುವ ಬಾಲ ಕಲಾವಿದರು ಹಾಜರಿದ್ದರು. ಸಿನಿಮಾವು ಸೆಪ್ಟೆಂಬರ್ 23 ಕ್ಕೆ ಚಿತ್ರಮಮದಿರಗಳಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











