'ಕುರುಕ್ಷೇತ್ರ' ಚಿತ್ರದ ಮುಹೂರ್ತ: ಯಾವಾಗ ಮತ್ತು ಎಲ್ಲಿ.?
ಅಂತೂ 'ಕುರುಕ್ಷೇತ್ರ' ಸಿನಿಮಾದಲ್ಲಿ 'ದುರ್ಯೋಧನ' ಪಾತ್ರದಲ್ಲಿ ದರ್ಶನ್ ಹೇಗೆ ಕಾಣಿಸಿಕೊಳ್ಳಬಹುದು ಎಂದು ಕಾತರದಿಂದ ಕಾಯುತ್ತಿದ್ದವರಿಗೆ ನಿನ್ನೆ 'ದುರ್ಯೋಧನ'ನ ದರ್ಶನವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ರವರ ದುರ್ಯೋಧನ ಲುಕ್ ಟ್ರೆಂಡಿಂಗ್ ಆಗಿದೆ. ಇದರ ಜೊತೆಗೆ 'ಕುರುಕ್ಷೇತ್ರ' ಸಿನಿಮಾದ ಹೆಚ್ಚಿನ ಮಾಹಿತಿ ಕೂಡ ಹೊರ ಬಿದ್ದಿದೆ. ಅವೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿರಿ....

ಮುಹೂರ್ತ ಫಿಕ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಸಿನಿಮಾ 'ಕುರುಕ್ಷೇತ್ರ'ಕ್ಕೆ ಮುಹೂರ್ತ ನಿಗದಿ ಆಗಿದೆ. ಆಗಸ್ಟ್ 6 ರಂದು ಭಾನುವಾರ ಸಂಜೆ 6.30ಕ್ಕೆ 'ಕುರುಕ್ಷೇತ್ರ' ಚಿತ್ರದ ಮುಹೂರ್ತ ನಡೆಯಲಿದೆ.

ಮುಹೂರ್ತ ಸಮಾರಂಭ ಎಲ್ಲಿ.?
ಬೆಂಗಳೂರಿನ ತುಮಕೂರು ರಸ್ತೆ ಬಳಿಯಿರುವ ಗೊರಗುಂಟೆಪಾಳ್ಯದ ಪೀಣ್ಯ ಮೆಟ್ರೋ ಸ್ಟೇಷನ್ ಎದುರು ಇರುವ ಡಾ.ಪ್ರಭಾಕರ್ ಕೋರೆ ಕನ್ವೆಂಷನ್ ಸೆಂಟರ್ ನಲ್ಲಿ 'ಕುರುಕ್ಷೇತ್ರ' ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ.

ವಿಶೇಷ ಆಹ್ವಾನಿತರು
'ಕುರುಕ್ಷೇತ್ರ' ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ರವರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಮುಹೂರ್ತದ ಶಾಟ್ ಗೆ ಸಿ.ಎಂ ಸಿದ್ದರಾಮಯ್ಯ ಕ್ಲಾಪ್ ಮಾಡಲಿದ್ದಾರೆ.

ಮುಖ್ಯ ಅತಿಥಿಗಳು...
ರಾಜಕೀಯ ರಂಗದಿಂದ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಡಾ.ಜಿ.ಪರಮೇಶ್ವರ್, ಡಿ.ಕೆ.ಸುರೇಶ್, ಶ್ರೀಮತಿ ಉಮಾಶ್ರೀ ಹಾಗೂ ಎಸ್.ಟಿ.ಸೋಮಶೇಖರ್ 'ಕುರುಕ್ಷೇತ್ರ' ಮುಹೂರ್ತ ಸಮಾರಂಭಕ್ಕೆ ಭಾಗಿಯಾಗಲಿದ್ದಾರೆ.

ಚಿತ್ರರಂಗದಿಂದ....
ಕೆ.ಎಫ್.ಸಿ.ಸಿ ಅಧ್ಯಕ್ಷ ಸಾ.ರಾ.ಗೋವಿಂದು, ರಾಕ್ ಲೈನ್ ವೆಂಕಟೇಶ್, ಕೃಷ್ಣೇಗೌಡ, ಸುರೇಶ್ ಗೌಡ, ಸೂರಪ್ಪ ಬಾಬು, ಕೆ.ಮಂಜು, ರಾಮು, ಜಯಣ್ಣ ಪಾಲ್ಗೊಳ್ಳಲಿದ್ದಾರೆ.

ಪಾತ್ರಧಾರಿಗಳು....
'ಕುರುಕ್ಷೇತ್ರ' ಸಿನಿಮಾದಲ್ಲಿ ದುರ್ಯೋಧನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡರೆ, ಶ್ರೀಕೃಷ್ಣನಾಗಿ ರವಿಚಂದ್ರನ್, ಭೀಷ್ಮನಾಗಿ ಅಂಬರೀಶ್, ಧೃತರಾಷ್ಟ್ರನಾಗಿ ಶ್ರೀನಾಥ್, ದ್ರೋಣಾಚಾರ್ಯನಾಗಿ ಶ್ರೀನಿವಾಸ್ ಮೂರ್ತಿ, ಗಂಧರ್ವ ರಾಜನಾಗಿ ಅವಿನಾಶ್, ಶಕುನಿ ಪಾತ್ರದಲ್ಲಿ ಸಾಯಿಕುಮಾರ್, ಅರ್ಜುನನಾಗಿ ಅರ್ಜುನ್ ಸರ್ಜಾ, ದ್ರೌಪದಿ ಪಾತ್ರದಲ್ಲಿ ಸ್ನೇಹಾ, ನರ್ತಕಿ ಆಗಿ ಹರಿಪ್ರಿಯಾ, ಕುಂತಿ ಪಾತ್ರದಲ್ಲಿ ಲಕ್ಷ್ಮಿ ಕಾಣಿಸಿಕೊಳ್ಳಲಿದ್ದಾರೆ.

ತಾಂತ್ರಿಕ ವರ್ಗ
'ಕುರುಕ್ಷೇತ್ರ' ಚಿತ್ರದ ಕಥೆಗೆ ಜೆ.ಕೆ.ಭಾರವಿ ಅವರ ರಚನೆ, ಜಯನನ್ ವಿನ್ಸೆಂಟ್ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಜೋನಿ ಹರ್ಷ ಸಂಕಲನ, ಕಿಂಗ್ ಸಾಲೋಮನ್ ಸಾಹಸ ಇರಲಿದೆ. 'ಬಾಹುಬಲಿ' ಚಿತ್ರಕ್ಕೆ ಗ್ರಾಫಿಕ್ಸ್ ಮಾಡಿದ ತಂಡ 'ಕುರುಕ್ಷೇತ್ರ' ಚಿತ್ರಕ್ಕೂ ಕೆಲಸ ಮಾಡಲಿದೆ. ಮುನಿರತ್ನ ಬಂಡವಾಳ ಹಾಕಲಿರುವ 'ಕುರುಕ್ಷೇತ್ರ' ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳಲಿದ್ದಾರೆ.


Click it and Unblock the Notifications











