ಇಂಡಸ್ಟ್ರಿ ಯಾರಪ್ಪನ ಮನೆಯ ಸ್ವತ್ತೂ ಅಲ್ಲ: ಆದಿತ್ಯ ಫುಲ್ ಗರಂ
ಕನ್ನಡದ ಹಲವು ಪ್ರತಿಭಾನ್ವಿತ ನಟರು ಸ್ಯಾಂಡಲ್ ವುಡ್ ನಲ್ಲಿ ಅವಕಾಶ ಸಿಗದೇ ಬೇರೆ ಭಾಷೆಯತ್ತ ಮುಖ ಮಾಡುವುದು, ಅಲ್ಲೂ ಅವಕಾಶ ಸಿಗದಿದ್ದರೆ ಬೇರೆ ದಾರಿಯಿಲ್ಲದೇ ಇನ್ನೇನಾದರೂ ಮಾಡಿಕೊಂಡಿರುವುದು ಗುಪ್ತವಾಗಿ ಉಳಿದಿಲ್ಲ.
ಬೇರೆ ಬೇರೆ ಕಾರಣಗಳಿಂದ ಬಿಡುಗಡೆ ಭಾಗ್ಯ ಕಾಣದಿದ್ದ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ರೆಬೆಲ್' ಚಿತ್ರ ಹೋದವಾರ ತೆರೆಗೆ ಬಂದಿತ್ತು. ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಮುತ್ತಿನಹಾರದಂತಹ ಮಹೋನ್ನತ ಚಿತ್ರವನ್ನು ನೀಡಿದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಬತ್ತಳಿಕೆಯಿಂದ ಇಂತಹ ಸಿನಿಮಾವೇ ಎಂದು ಚಿತ್ರದ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಾಧ್ಯಮಗಳ ಕೂಡಾ ರೆಬೆಲ್ ಚಿತ್ರ ಅಷ್ಟಕಷ್ಟೇ ಎಂದೇ ವಿಮರ್ಶೆ ವ್ಯಕ್ತ ಪಡಿಸಿದ್ದವು.
ರೆಬೆಲ್ ಚಿತ್ರ ಬಿಡುಗಡೆಯಾದ ಎರಡು ದಿನದ ನಂತರ ಚಿತ್ರದ ನಾಯಕ ಆದಿತ್ಯ ಫುಲ್ ಗರಂ ಆಗಿ ನಮ್ಮ ಕನ್ನಡ ಚಿತ್ರೋದ್ಯಮ 'ಯಾರಪ್ಪನ ಮನೆಯ ಸ್ವತ್ತೂ ಅಲ್ಲ' ಎಂದು ಸಾಮಾಜಿಕ ತಾಣದಲ್ಲಿ ಕಿಡಿಕಾರಿದ್ದಾರೆ.
ಆದಿತ್ಯ ಅವರ ಸಿಟ್ಟು ಯಾರ ಮೇಲೆ? ಇವರ ನೋವಿನ ಮಾತಿನ ಹಿಂದಿನ ಟಾರ್ಗೆಟ್ ಯಾರು? ಮುಂದೆ ಓದಿ (ಮಾಹಿತಿ ಕೃಪೆ: ಟೈಮ್ಸ್ ಆಫ್ ಇಂಡಿಯಾ)

ನನ್ನ ಚಿತ್ರದ ಬಗ್ಗೆ ಅಪಪ್ರಚಾರ
'ರೆಬೆಲ್' ಚಿತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಇಂಪ್ರೂವ್ ಆಗುತ್ತಿದೆ. ಚಿತ್ರೋದ್ಯಮದ ನಮ್ಮ ಸಹದ್ಯೋಗಿಗಳೇ ಚಿತ್ರದ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದು ಬೇಸರ ತಂದಿದೆ ಎಂದು ಆದಿತ್ಯ ಹೇಳಿದ್ದಾರೆ.

ಇಂಡಸ್ಟ್ರಿ ಅವರದ್ದೇ ಅಂದು ಕೊಂಡಿದ್ದಾರೆ
ನಮ್ಮ ಕೆಲವು ಹೀರೋಗಳು ಇಂಡಸ್ಟ್ರಿ ಅವರದ್ದೇ ಅಂದು ಕೊಂಡಿದ್ದಾರೆ. ಚಿತ್ರದ ಬಗ್ಗೆ ಕೆಟ್ಟ ವಿಮರ್ಶೆ ಹಬ್ಬಿಸುತ್ತಿದ್ದಾರೆ, ದುಡ್ಡು ಕೊಟ್ಟು ಚಿತ್ರದ ಬಗ್ಗೆ ಕೆಟ್ಟದ್ದಾಗಿ ಪ್ರಚಾರ ಮಾಡುವಂತೆ ಸೂಚಿಸುತ್ತಿದ್ದಾರೆ ಎಂದು ಆದಿತ್ಯ ಗಂಭೀರ ಆರೋಪ ಮಾಡಿದ್ದಾರೆ.

ಜನರ ತೀರ್ಪೇ ಅಂತಿಮ
ಇಂತಹ ನಾಯಕರು ತಾವು ಬಿಟ್ಟರೆ ಕನ್ನಡ ಚಿತ್ರೋದ್ಯಮದಲ್ಲಿ ಬೇರೆ ಯಾರೂ ಉಳಿಯಲು ಸಾಧ್ಯವಿಲ್ಲ ಅಂದು ಕೊಂಡಿದ್ದಾರೆ. ಆದರೆ ಇವರೆಲ್ಲರಿಗಿಂತಾ ನಮ್ಮ ಹಣೆಬರಹವನ್ನು ನಿರ್ಧರಿಸುವವನು ಪ್ರೇಕ್ಷಕ ಎಂದು ಆದಿತ್ಯ, ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ತನ್ನ ಅಂತರ್ಜಾಲದಲ್ಲಿ ಪ್ರಕಟಿಸಿದೆ.

ಇಂಡಸ್ಟ್ರಿ ಯಾರ ಅಪ್ಪನ ಮನೆಯ ಸ್ವತ್ತೂ ಅಲ್ಲ
ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಚೆನ್ನಾಗಿದೆ. ಚಿತ್ರೋದ್ಯಮದಲ್ಲಿ ಕಾಲೆಳೆಯುವ ನಾಯಕರಿಗೆ ನನ್ನ ಚಿತ್ರದ ಕಲೆಕ್ಷನ್ ಉತ್ತರ ಕೊಡುತ್ತದೆ. ಇಂಡಸ್ಟ್ರಿ ಯಾರ ಅಪ್ಪನ ಮನೆಯ ಸ್ವತ್ತೂ ಅಲ್ಲ ಎಂದು ಆದಿತ್ಯ ಕಿಡಿಕಾರಿದ್ದಾರೆ. ಆದಿತ್ಯ ಚಿತ್ರೋದ್ಯಮದ ಯಾವ ನಾಯಕರನ್ನು ಕುರಿತು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಸ್ಪಷ್ಟವಾಗಿಲ್ಲ.

ರೆಬೆಲ್ ಸಕ್ಸಸ್ ಪಾರ್ಟಿ
ರೆಬೆಲ್ ಚಿತ್ರತಂಡ ಸಕ್ಸಸ್ ಪಾರ್ಟಿಯನ್ನು ಈಗಾಗಲೇ ಆಚರಿಸಿಕೊಂಡಾಗಿದೆ. ಆದಿತ್ಯ, ಪ್ರೀತಿಕಾ ರಾವ್, ಸುಹಾಸಿನಿ ಮಣಿರತ್ನಂ, ಸಂಜನಾ, ಶರತ್ ಲೋಹಿತಾಸ್ವ, ಸಾಧು ಕೋಕಿಲಾ ಪ್ರಮುಖ ಭೂಮಿಕೆಯಲ್ಲಿರುವ ಚಿತ್ರವನ್ನು ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿ, ನಿರ್ಮಿಸಿದ್ದರು.


Click it and Unblock the Notifications











