ವಿಡಿಯೋ: ಕೊರೊನಾ ವಿರುದ್ಧ ಪ್ರಾಣ ಪಣಕ್ಕಿಟ್ಟವರಿಗೆ ತಾರೆಯರ ಹಾಡಿನ ಸಲಾಂ
ಕೊರೊನಾ ವೈರಸ್ ದೇಶವನ್ನೇ ತಲ್ಲಣದಲ್ಲಿ ಮುಳುಗಿಸಿದೆ. ಹೊರಗೆ ಹೋಗಲು ಜೀವ ಭಯ. ಕೆಮ್ಮಿದವರನ್ನು ಭಯೋತ್ಪಾದಕರಂತೆ ನೋಡುವ ಸಂದರ್ಭ ನಿರ್ಮಾಣವಾಗಿಬಿಟ್ಟಿದೆ.
Recommended Video
ಇಂಥಹಾ ಕಠಿಣ ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವವರು ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರು ಮತ್ತು ಪೌರ ಕಾರ್ಮಿಕರು. ಕೊರೊನಾ ವಿರುದ್ಧ ಯುದ್ಧದಲ್ಲಿ ಮೊದಲ ಸಾಲಿನ ಯೋಧರು ಇವರು.
ತಮ್ಮ ಜೀವವನ್ನೇ ಪಣಕ್ಕಿಟ್ಟು ಸಮಾಜದ ಜೀವ ಉಳಿಸಲು ಹಗಲಿರುಳು ಶ್ರಮಿಸುತ್ತಿರುವ ಇವರಿಗೆ ಎಷ್ಟು ವಂದಿಸಿದರೂ ಕಡಿಮೆಯೇ.
ಇಂಥಹಾ ಸೇವೆ ಸಲ್ಲಿಸುವವರನ್ನು ನೆನೆವುದರಲ್ಲಿ, ಅಭಿನಂದಿಸುವುದರಲ್ಲಿ, ವಂದಿಸುವುದು ನಮ್ಮ ಚಂದನವನ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಅದು ನಮ್ಮ ನಟ-ನಟಿಯರ ಸಂಸ್ಕಾರವೂ ಹೌದು. ಈ ಬಾರಿಯೂ ಕೊರೊನಾ ಯೋಧರಿಗೆ ನಮ್ಮ ತಾರೆಯರು ಹಾಡಿನ ಮೂಲಕ ನಮಿಸಿದ್ದಾರೆ.

ಕನ್ನಡದ ತಾರೆಯರು ಸಲ್ಲಿಸಿದ್ದಾರೆ ವಂದನೆ
ಪುನೀತ್ ರಾಜ್ಕುಮಾರ್, ರಮೇಶ್ ಅರವಿಂದ್, ರಕ್ಷಿತಾ, ಶ್ರೀಮುರುಳಿ, ವಿಜಯ್ ರಾಘವೇಂದ್ರ, ಡಾಲಿ ಧನಂಜಯ್, ಶ್ರದ್ಧಾ ಶ್ರೀನಾಥ್, ಹರಿಪ್ರಿಯಾ, ಪ್ರಣಿತಾ, ಐಂದ್ರಿತಾ ರೇ, ದಿಗಂತ್, ಪ್ರಜ್ವಲ್ ದೇವರಾಜ್, ಮೇಘನಾ ರಾಜ್ ಸಾಲು-ಸಾಲು ನಟ-ನಟಿಯರು ಒಟ್ಟುಗೂಡಿ ಕೊರೊನಾ ಯೋಧರಿಗೆ ವಂದಿಸಿದ್ದಾರೆ. ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಪುನೀತ್ ಹಾಡಿನಿಂದ ಆರಂಭವಾಗುವ ಹಾಡು
''ನೀನೇ ತಾಯಿ ನೀನೆ ತಂದೆ, ಭೂಮಿ ತಾಯಿ ಎಲ್ಲಾ ನಿಂದೆ..'' ಎಂದು ಪುನೀತ್ ರಾಜ್ಕುಮಾರ್ ಅವರು ತಮ್ಮ ತಂದೆ-ತಾಯಿಯ ಚಿತ್ರದ ಮುಂದೆ ನಿಂತು ಹಾಡುವಲ್ಲಿಂದ ಹಾಡು ಪ್ರಾರಂಭವಾಗಿ, ಕನ್ನಡದ ಎಲ್ಲಾ ಪ್ರಮುಖ ತಾರೆಯರು ಹಾಡನ್ನು ಗುನುಗುತ್ತಾ ಮುಂದುವರೆಯುತ್ತಾರೆ. ಎಲ್ಲರೂ ತಾವಿದ್ದ ಜಾಗದಲ್ಲಿಯೇ ತಾವುಗಳೇ ಶೂಟ್ ಮಾಡಿದ ವಿಡಿಯೋಗಳ ಕೊಲ್ಯಾಜ್ ಈ ಹಾಡು.

ಕಣ್ಣು ಒದ್ದೆ ಮಾಡುವ ಚಿತ್ರಗಳು, ವಿಡಿಯೋ ತುಣುಕು
ಕೊರೊನಾ ದಿಂದಾಗಿ ಬದಲಾದ ಪರಿಸ್ಥಿತಿಯ ಚಿತ್ರಗಳು, ವಿಡಿಯೋಗಳು ಮನಸ್ಸನ್ನು ಆರ್ದ್ರಗೊಳಿಸುತ್ತವೆ. ರಸ್ತೆಯಲ್ಲಿ ನಿಂತು ಊಟ ಮಾಡುತ್ತಿರುವ ಪೊಲೀಸರ ವಿಡಿಯೋ, ಜನರಲ್ಲಿ ಜಾಗೃತಿ ಮೂಡಿಸಲು ಅವರು ಮಾಡುತ್ತಿರುವ ಪ್ರಯತ್ನಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರ ಚಿತ್ರಗಳು ಕಣ್ಣು ಒದ್ದೆ ಮಾಡುತ್ತವೆ.

ಹಾಡಿನ ಹಿಂದಿರುವ ಕ್ರಿಯಾಶೀಲ ಮನಸ್ಸುಗಳು
ಈ ಸುಂದರವಾದ ಹಾಡನ್ನು ಬರೆದಿರುವುದು ಸತ್ಯ ಪ್ರಕಾಶ್, ಗಾಯನ ಮತ್ತು ಸಂಗೀತ ಸಂಯೋಜನೆ ವಾಸುಕಿ ವೈಭವ್, ವಾದ್ಯ ವ್ಯವಸ್ಥೆ ನೊಬಿನ್ ಪೌಲ್, ಸಂಕಲನ ಮಾಡಿರುವವರು ರವಿ ಆರಾಧ್ಯ, ಹಾಡಿನ ಐಡಿಯಾ ಮತ್ತು ನಿರ್ದೇಶನ ಮಾಡಿರುವುದು ಪನ್ನಗಾಭರಣ.


Click it and Unblock the Notifications











