'ಕಾಂತಾರ' ವಿವಾದ: ರಿಷಬ್ ಶೆಟ್ಟಿ ಪರ ನಿಂತ ಕಾಂತಾರ ಚಿತ್ರತಂಡ!
ತುಳುನಾಡ ಮಣ್ಣಿನ ಸಂಸ್ಕೃತಿ ಬಿಂಬಿಸುವಂತ ಕಾಂತಾರ ಸಿನಿಮಾ ರಾಷ್ಟ್ರಾದ್ಯಾಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಹಲವು ವಿವಾದಗಳು ಸೃಷ್ಠಿಯಾಗುತ್ತಿದ್ದು, ವಿವಾದದ ಬಗ್ಗೆ 'ಕಾಂತಾರಾ' ಇಡೀ ಚಿತ್ರ ತಂಡ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬೆನ್ನೆಲುಬಾಗಿ ನಿಂತಿದೆ. ಸದ್ಯ ಮಂಗಳೂರಿನ ಕ್ಯಾಡ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯದಲ್ಲಿ ತೊಡಗಿರುವ ಚಿತ್ರತಂಡದ ಪ್ರಮುಖ ನಟರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಚಿತ್ರ ನಟರಾದ ನವೀನ್ ಡಿ ಪಡೀಲ್, ಪ್ರಕಾಶ್ ತೂಮಿನಾಡ್, ಮೈಮ್ ರಾಮ್ ದಾಸ್, ಶನಿಲ್ ಗುರು ಸೇರಿದಂತೆ ಹಿರಿಯ ರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್ ಕೂಡಾ ನಟ ರಿಷಬ್ ಶೆಟ್ಟಿ ಬಗ್ಗೆ ಅಭಿಮಾನದ ಮಾತನ್ನಾಡಿದ್ದಾರೆ.
ಹಲವು ಸವಾಲುಗಳನ್ನು ದಾಟಿ ಈ ಸಿನಿಮಾ ಯಶಸ್ವಿಯಾಗಿದೆ. ಯಾವುದೋ ಒಂದು ಶಕ್ತಿ ನಮ್ಮಿಂದ ಈ ಪ್ರದರ್ಶನವನ್ನು ಕೊಡಿಸಿದೆ. ಕರಾವಳಿಯ ಅತ್ಯಂತ ನಂಬಿಕೆಯ ದೈವಾರಾಧನೆಯ ಬಗ್ಗೆ ಈ ಚಿತ್ರವಿದೆ. ದೈವಾರಾಧನೆಯ ವಿಚಾರದಲ್ಲಿ ಕಿಂಚಿತ್ತು ತಪ್ಪಾದರೂ ಇಡೀ ಚಿತ್ರಕ್ಕೇ ಸಮಸ್ಯೆಯಾಗುವ ಆತಂಕವೂ ಇತ್ತು. ಕಾಂತಾರ ಚಿತ್ರವನ್ನು ಜನ ಸ್ವೀಕರಿಸಿದ ರೀತಿ ಅದ್ಭುತವಾಗಿದೆ ಎಂದಿದ್ದಾರೆ.

'ಕಾಂತಾರ' ಮೆಚ್ಚಿರುವುದು ಹೆಮ್ಮೆ ತಂದಿದೆ'
''ಚಿತ್ರರಂಗದ ದಿಗ್ಗಜರು ಕಾಂತಾರವನ್ನು ಮೆಚ್ಚಿರುವುದು ಹೆಮ್ಮೆ ತಂದಿದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಿಷಭ್ ಶೆಟ್ಟಿ ಯಲ್ಲಿ ಯಾವುದೋ ಶಕ್ತಿಯ ಪರಕಾಯ ಆಗಿತ್ತೋ ಎನ್ನುವ ರೀತಿಯಿತ್ತು. ತುಂಬಾ ಶ್ರದ್ಧಾಭಕ್ತಿಯಿಂದಲೇ ನಟನೆಯಲ್ಲಿ ತೊಡಗಿಸಿಕೊಂಡಿದ್ದೆವು. ಚಿತ್ರದ ಬಗ್ಗೆ ಕೆಲವರು ವಿರೋಧದ ವಿಮರ್ಶೆ ಮಾಡುತ್ತಾರೆ. ಇದಕ್ಕೆ ಯಾವುದೇ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಚಿತ್ರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ದೈವ ಪ್ರೇರಣೆಯಾದರೆ 'ಕಾಂತಾರ' ಪಾರ್ಟ್ 2
ಚಿತ್ರದ ಬಗ್ಗೆ ಮಾತನಾಡಿರುವ ನಟ ಶನಿಲ್ ಗುರು, ಚಿತ್ರ ಯಶಸ್ಸು ಕಂಡಾಗ ಇಂತಹ ವಿಮರ್ಶೆಗಳು ಸಾಮಾನ್ಯ. ಇದಕ್ಕೆಲ್ಲಾ ತಲೆಕಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಚಿತ್ರ ಈಗಾಗಲೇ ಗೆದ್ದಾಗಿದೆ. ಹಲವು ಅಡೆತಡೆಗಳು ಬಂದರೂ ದೈವ ಪ್ರೇರಣೆಯಿಂದ ಚಿತ್ರ ಅದ್ಭುತ ಯಶಸ್ಸನ್ನು ಕಾಣುತ್ತಿದೆ. ಪಾರ್ಟ್ 2 ಬರುವ ಬಗ್ಗೆ ನಮಗೆ ಇನ್ನೂ ಗೊತ್ತಿಲ್ಲ. ರಿಷಬ್ ಶೆಟ್ಟಿಯವರಿಗೆ ಮತ್ತೆ ದೈವ ಪ್ರೇರಣೆಯಾದರೆ ಪಾರ್ಟ್ 2 ಬರಲೂ ಬಹುದು ಅಂತಾ ಶನಿಲ್ ಶೆಟ್ಟಿ ಹೇಳಿದ್ದಾರೆ.

'ದೈವದ ಆಶೀರ್ವಾದ ಸಿನಿಮಾಕ್ಕಿದೆ'
ಇನ್ನು ನಟ ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು ಕೂಡಾ ರಿಷಬ್ ಶೆಟ್ಟಿಗೆ ಬೆಂಬಲ ಸೂಚಿಸಿದ್ದಾರೆ. ರಿಷಬ್ ಶೆಟ್ಟಿ ಪೂರ್ಣಪ್ರಮಾಣದಲ್ಲಿ ತನನ್ನು ತಾನು ತೊಡಗಿಸಿಕೊಂಡ ಕಾರಣ ಚಿತ್ರ ಗೆದ್ದಿದೆ. 'ಕಾಂತಾರಾ' ಚಿತ್ರದ ಬಗ್ಗೆ ದೇಶಾದ್ಯಂತ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ದೈವ ಆಶೀರ್ವಾದವೂ ಇದಕ್ಕೆ ಕಾರಣ ಅಂತಾ ಕಾಂತಾರಾ ಯಶಸ್ಸುನ್ನು ಬಣ್ಣಿಸಿದ್ದಾರೆ.

'ವಿರೋಧಿಸುವವರು ಸ್ವಯಂ ವಿಮರ್ಶೆ ಮಾಡಿಕೊಳ್ಳಿ'
ಇನ್ನು ಖ್ಯಾತ ಬಹುಭಾಷಾ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, 'ಕಾಂತಾರ' ಸಿನಿಮಾ ಯಾವ ಭಾಷೆಯಲ್ಲೂ ಬಂದರೂ ಗೆಲ್ಲುತ್ತದೆ. ಅದು ಚೈನೀಸ್ ಇರಲಿ, ಜಪಾನಿ ಭಾಷೆಯಲ್ಲಿ ಬಂದರೂ ಓಡುತ್ತೆ. 'ಕಾಂತಾರ'ದಂತಹ ಸಿನಿಮಾವನ್ನು ಮತ್ತೆ ರಿಷಬ್ಗೂ ಮಾಡೋದು ಕಷ್ಟ. ಅಷ್ಟು ನೈಜವಾಗಿ ಚಿತ್ರ ಮೂಡಿ ಬಂದಿದೆ ಚಿತ್ರದ ಬಗ್ಗೆ ವಿರೋಧ ಮಾಡುವವರು ತಮ್ಮನ್ನು ತಾವೇ ವಿಮರ್ಶೆ ಮಾಡಿಕೊಳ್ಳಬೇಕು. ದೈವಾರಾಧನೆಗೆ ಯಾವ ಚ್ಯುತಿಯೂ ಬಾರದಂತೆ ಚಿತ್ರ ನಿರ್ಮಿಸಲಾಗಿದೆ. ದೈವಾರಾಧನೆ ತುಳುನಾಡಿನ ಪ್ರಮುಖ ಅಂಗ. ಅದು ಹಿಂದೂ ಧರ್ಮದ ಭಾಗ ಅಲ್ಲ ಅನ್ನೋರನ್ನು ಏನೂ ಮಾಡಲು ಸಾಧ್ಯವಿಲ್ಲ. ಅಂಥವರಿಗೆ ಉತ್ತರ ಕೊಡದಿರುವುದೇ ಉತ್ತಮ. ಸತ್ಯ ಏನು ಅನ್ನೋದು ಅವರಿಗೇ ತಿಳಿದಾಗ ಅವರು ಸರಿಯಾಗುತ್ತಾರೆ ಅಂತಾ ದೇವದಾಸ್ ಕಾಪಿಕಾಡ್ ಹೇಳಿದ್ದಾರೆ.


Click it and Unblock the Notifications











